ADVERTISEMENT

ವಿಜಯಪುರ(ದೇವನಹಳ್ಳಿ): ರೈಲು ಮಾದರಿಯಲ್ಲಿ ಸಿದ್ಧವಾದ ಸರ್ಕಾರಿ ಶಾಲೆ

ಹಳೆ ವಿದ್ಯಾರ್ಥಿಗಳ ನೆರವು, ಸಹಕಾರ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2024, 4:38 IST
Last Updated 21 ಡಿಸೆಂಬರ್ 2024, 4:38 IST
ವಿಜಯಪುರ ಹೋಬಳಿ ದೊಡ್ಡತತ್ತಮಂಗಲ ಗ್ರಾಮದ ಸರ್ಕಾರಿ ಶಾಲೆಗೆ ಹಳೇಯ ವಿದ್ಯಾರ್ಥಿಗಳು ರೈಲು ಎಂಜಿನ್ ಮತ್ತು ಬೋಗಿಗಳ ಮಾದರಿಯಲ್ಲಿ ಚಿತ್ರಗಳು ಬರೆಯಿಸಿದ್ದ ವಿದ್ಯಾರ್ಥಿಗಳು ಸಾಲಾಗಿ ನಿಂತು ಕೊಠಡಿಯೊಳಗೆ ಹೋದರು.
ವಿಜಯಪುರ ಹೋಬಳಿ ದೊಡ್ಡತತ್ತಮಂಗಲ ಗ್ರಾಮದ ಸರ್ಕಾರಿ ಶಾಲೆಗೆ ಹಳೇಯ ವಿದ್ಯಾರ್ಥಿಗಳು ರೈಲು ಎಂಜಿನ್ ಮತ್ತು ಬೋಗಿಗಳ ಮಾದರಿಯಲ್ಲಿ ಚಿತ್ರಗಳು ಬರೆಯಿಸಿದ್ದ ವಿದ್ಯಾರ್ಥಿಗಳು ಸಾಲಾಗಿ ನಿಂತು ಕೊಠಡಿಯೊಳಗೆ ಹೋದರು.   

ವಿಜಯಪುರ(ದೇವನಹಳ್ಳಿ): ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತತ್ತಮಂಗಲ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೈಲು ಎಂಜಿನ್ ಮತ್ತು ಬೋಗಿಗಳ ಮಾದರಿಯಲ್ಲಿ ಬಣ್ಣ ಬಳಿಸುವ ಮೂಲಕ ಮಕ್ಕಳು ಉತ್ಸಾಹದಿಂದ ಶಾಲೆ ಕಡೆಗೆ ಬರುವಂತಹ ವಾತಾವರಣ ನಿರ್ಮಾಣ ಮಾಡಿಕೊಡುವ ಮೂಲಕ ಶಾಲೆಯಲ್ಲಿ ದಾಖಲಾತಿ ಹೆಚ್ಚಿಸುವಲ್ಲಿ ಹಳೆ ವಿದ್ಯಾರ್ಥಿಗಳು ನೆರವಾಗಿದ್ದಾರೆ.

ಹಳೆಯದಾಗಿದ್ದ ಕಟ್ಟಡಕ್ಕೆ ಬಣ್ಣ ಮಾಡಿಸಿರುವ ಹಳೆ ವಿದ್ಯಾರ್ಥಿಗಳು, ಶಾಲಾ ಕೊಠಡಿ ಮುಂಭಾಗದಲ್ಲಿ ರೈಲು ಚಿತ್ರ ಬರೆಯಿಸಿದ್ದಾರೆ. ಶಾಲೆಗೆ ಬರುವ ಮಕ್ಕಳು ರೈಲಿಗೆ ಹತ್ತುವಂತಹ ಅನುಭವದೊಂದಿಗೆ ಕೊಠಡಿಗಳ ಒಳಗೆ ಪ್ರವೇಶ ಮಾಡುತ್ತಿದ್ದಾರೆ. ಇದರಿಂದ ಮಕ್ಕಳಲ್ಲೂ ಹೊಸ ಉತ್ಸಾಹ ಬಂದಿದೆ. ಕೇವಲ 8 ಮಕ್ಕಳಿಗೆ ಇಳಿಕೆಯಾಗಿದ್ದ ಮಕ್ಕಳ ಸಂಖ್ಯೆ ಈಗ 19 ಕ್ಕೆ ಏರಿಕೆಯಾಗಿದೆ. ಇಬ್ಬರು ಶಿಕ್ಷಕರಿದ್ದು, ಒಬ್ಬರು ಅತಿಥಿ ಶಿಕ್ಷಕಿ ಇದ್ದಾರೆ. ಪೋಷಕರೂ ತಮ್ಮ ಮಕ್ಕಳನ್ನು ಉತ್ಸಾಹದಿಂದ ಶಾಲೆಗೆ ಕರೆದುಕೊಂಡು ಬಂದು ಬಿಡುತ್ತಿದ್ದಾರೆ. ಇದೆಲ್ಲ ಊರಿನ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಸಾಧ್ಯವಾಗಿದೆ ಎಂದು ಮುಖ್ಯಶಿಕ್ಷಕ ರಾಜು ಹೇಳಿದರು.

ಶಾಲೆಗೆ ಉತ್ತಮವಾಗಿ ಕಾಂಪೌಂಡ್ ನಿರ್ಮಾಣವಾಗಿದೆ. ಆವರಣದಲ್ಲಿದ್ದ ಹಳೆ ಕಟ್ಟಡ ತೆರವುಗೊಳಿಸಿರುವುದರಿಂದ ಶಾಲೆ ಆವರಣದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಈಗ ಮಕ್ಕಳು ಆಟವಾಡಿಕೊಳ್ಳುವುದಕ್ಕೆ ವಿಶಾಲವಾದ ಮೈದಾನವಿದೆ. ವ್ಯಾಯಾಮ ಮಾಡುವ ಪರಿಕರಗಳಿವೆ. ಶೌಚಾಲಯಗಳಿವೆ. ಶಾಲೆ ಒಂದು ಕೊಠಡಿಯನ್ನು ಕಂಪ್ಯೂಟರ್ ಕೊಠಡಿ ಮಾಡಲು ಸಿದ್ಧತೆ ಮಾಡಿದ್ದಾರೆ. ಶಾಲೆ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಕಂಪ್ಯೂಟರ್ ಶಿಕ್ಷಣ ಕೊಡಲು ತಯಾರಿ ಮಾಡಲಾಗುತ್ತಿದೆ ಎಂದರು.

ADVERTISEMENT

ಕೊರತೆ: ಶಾಲೆ ಆವರಣದಲ್ಲಿ ವಿಶಾಲವಾದ ಮೈದಾನವಿದೆ. ಇಲ್ಲಿ ಕೈ ತೋಟ ಮಾಡುವ ಮೂಲಕ ಮಧ್ಯಾಹ್ನ ಬಿಸಿಯೂಟ ತಯಾರಿಕೆಗೆ ಅಗತ್ಯವಿರುವ ತರಕಾರಿ ಬೆಳೆಯುವುದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಆದರೆ, ನಮಗೆ ನೀರಿನ ಸೌಕರ್ಯವಿಲ್ಲ. ನೀರಿನ ಸಂಪು ನಿರ್ಮಾಣವಾಗಬೇಕಿದೆ. ಮಕ್ಕಳಿಗೆ ಶುದ್ಧ ಕುಡಿಯುವ ನೀರು ಕೊಡುವುದಕ್ಕೆ ಕಷ್ಟವಾಗುತ್ತಿದೆ. ಶಾಲೆಗೆ ಪ್ರತ್ಯೇಕವಾದ ಒಂದು ಕೊಳಾಯಿ ಅಳವಡಿಸಿಕೊಟ್ಟರೆ ಕೈತೋಟದ ಜತೆಗೆ ಶಾಲೆ ಮುಂಭಾಗದಲ್ಲಿ ಉದ್ಯಾನ ಮಾದರಿಯಲ್ಲಿ ತಯಾರಿಸುವ ಚಿಂತನೆ ಇದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಶಾಲೆಯ ಹಿಂಭಾಗದಲ್ಲಿ ಕಾಂಪೌಂಡ್ ನಿರ್ಮಾಣವಾದರೆ ಅನುಕೂಲವಾಗಲಿದೆ ಎಂದು ಶಿಕ್ಷಕರು ಹೇಳುತ್ತಾರೆ.

ನಾವು ಓದಿರುವ ಶಾಲೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದರೆ ಮುಚ್ಚಿಬಿಡುತ್ತಾರೆ. ಹಳೆ ನೆನಪು ಇರುವುದಿಲ್ಲವೆಂದು ನಾವೆಲ್ಲ ಸ್ನೇಹಿತರು ಸೇರಿಕೊಂಡು ಬಣ್ಣ ಹಾಕಿಸಿದ್ದೇವೆ. ಪೋಷಕರ ಮನವೊಲಿಸಿ ಮಕ್ಕಳನ್ನು ದಾಖಲು ಮಾಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಶಾಲೆಗೆ ಅಗತ್ಯವಿರುವುದನ್ನು ಮಾಡಲು ಇಚ್ಛಿಸುತ್ತೇವೆ.
ಹಳೆ ವಿದ್ಯಾರ್ಥಿಗಳು ದೊಡ್ಡತತ್ತಮಂಗಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.