ADVERTISEMENT

ಉಪಚುನಾವಣೆ: ಇಂದು ಮತದಾನ

ಶಾಂತಿಯುತ ಮತದಾನಕ್ಕೆ ಚುನಾವಣಾ ಸಿಬ್ಬಂದಿಯಿಂದ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 9:15 IST
Last Updated 5 ಡಿಸೆಂಬರ್ 2019, 9:15 IST
ಹೊಸಕೋಟೆಯ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮತಗಟ್ಟೆಗಳಿಗೆ ತೆರಳಲು ಸೇರಿರುವ ಚುನಾವಣಾ ಸಿಬ್ಬಂದಿ
ಹೊಸಕೋಟೆಯ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮತಗಟ್ಟೆಗಳಿಗೆ ತೆರಳಲು ಸೇರಿರುವ ಚುನಾವಣಾ ಸಿಬ್ಬಂದಿ   

ಹೊಸಕೋಟೆ: ‘ರಾಜ್ಯದಲ್ಲಿ ನಡೆಯುತ್ತಿರುವ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರವೆಂದು ಸುದ್ದಿಯಲ್ಲಿರುವ ಹೊಸಕೋಟೆ ಕ್ಷೇತ್ರದ ಉಪಚುನಾವಣೆ ಶಾಂತಿಯುತವಾಗಿ ನಡೆಸಲು ಆಡಳಿತ ಯಂತ್ರ ಸಕಲ ಸಿದ್ಧತೆ ಮಾಡಿಕೊಂಡಿದೆ’ ಎಂದು ಚುನಾವಣಾಧಿಕಾರಿ ಹೆಚ್.ಎಲ್ ನಾಗರಾಜ್ ತಿಳಿಸಿದರು.

ಇಲ್ಲಿನ ಪದವಿ ಪೂರ್ವ ಕಾಲೇಜಿನಲ್ಲಿ ಚುನಾವಣಾ ಸಿಬ್ಬಂದಿಗೆ ಮತಗಟ್ಟೆ ಸಾಮಗ್ರಿ ವಿತರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಕ್ಷೇತ್ರದಲ್ಲಿನ ಉಪಚುನಾವಣೆ ನಿಮಿತ್ತ ಅಧಿಕ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಸಿಸಿ ಕ್ಯಾಮೆರಾ ಅಳವಡಿಕೆ ಬಗ್ಗೆ ಮತದಾರರಿಗೆ ತಿಳಿಯುವಂತೆ ಫಲಕಗಳನ್ನು ಹಾಕಲಾಗಿದೆ. ನಿರ್ಭೀತಿಯಿಂದ, ಪಾರದರ್ಶಕವಾಗಿ ಮತಚಲಾಯಿಸಲು ಹೆಚ್ಚು ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದೆ. ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಗದನ್ನು ವಿವಿಧ ಚೆಕ್ ಪೋಸ್ಟ್‌ಗಳಲ್ಲಿ ವಶಪಡಿಸಿಕೊಳ್ಳಲಾಗಿದೆ. ಮತದಾರರಲ್ಲದ ವ್ಯಕ್ತಿಗಳನ್ನು ಬೂತ್ ಏಜೆಂಟ್‌ಗಳನ್ನಾಗಿ ನೇಮಿಸುವಂತಿಲ್ಲ ಎಂದು ಉಮೇದುವಾರರಿಗೆ ತಿಳಿಸಲಾಗಿದೆ’ ಎಂದರು.

ADVERTISEMENT

ರಾಜಕೀಯ ಪಕ್ಷಗಳ ತಯಾರಿ: ಬುಧವಾರ ನಗರದಾದ್ಯಂತ ರಾಜಕೀಯ ಚಟುವಟಿಕೆಗಳಿರಲಿಲ್ಲ. ನಿತ್ಯ ಕಾರ್ಯಕರ್ತರಿಂದ ತುಂಬಿರುತಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಕಚೇರಿಗಳು ರಾಜ್ಯ ನಾಯಕರಿಲ್ಲದೆ ಹಾಗೂ ಜಿಲ್ಲೆಯ ಇತರೆ ತಾಲ್ಲೂಕುಗಳಿಂದ ಬಂದಿದ್ದ ಕಾರ್ಯಕರ್ತರಿಲ್ಲದೆ ಬಿಕೋ ಎನ್ನುತ್ತಿದ್ದವು. ಪಕ್ಷೇತರ ಅಭ್ಯರ್ಥಿ ಸೇರಿದಂತೆ ಮೂರು ಕಡೆಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತದಾರರನ್ನು ಓಲೈಸಲು ಮುಂದಾಗಿದ್ದು, ಮತದಾರ ಯಾರ ಭವಿಷ್ಯ ಬೆಳಗಿಸುತ್ತಾನೆಂದು 9ನೇ ತಾರೀಖಿನ‌ವರೆಗೆ ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.