ADVERTISEMENT

ಜಾಲತಾಣಗಳಲ್ಲಿ ಪ್ರಚಾರದ ಅಬ್ಬರ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 4:41 IST
Last Updated 20 ಡಿಸೆಂಬರ್ 2020, 4:41 IST

ಸೂಲಿಬೆಲೆ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳಲ್ಲಿ ಅಭ್ಯರ್ಥಿಗಳ ಪ್ರಚಾರ ಭರಾಟೆ ಜೋರಾಗಿದೆ. ಮತದಾನದ ಮಹತ್ವ ಸಾರುವ ಜಾಗೃತಿ ಫಲಕಗಳು ಮತ್ತು ವಿಡಿಯೊಗಳು ಹರಿದಾಡುತ್ತಿವೆ.

‘ಜನರು ಎತ್ತು, ಎಮ್ಮೆ, ಕುದುರೆ, ಕತ್ತೆಗಳನ್ನು ಕೊಳ್ಳುವಾಗ ಅದರ ಗುಣ ಸ್ವಭಾವ ಉಪಯುಕ್ತತೆ ನೋಡುತ್ತಾರೆ. ಆದರೆ, ದೇಶದ ಆಡಳಿತ ನಡೆಸುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಮಾತ್ರ ಈ ಯಾವ ಚಾರಿತ್ರ್ಯ, ಗುಣಲಕ್ಷಣ ನೋಡದೆ ಕೇವಲ ಜಾತಿ, ಹಣ, ಹೆಂಡಗಳ ಆಸೆಗೆ ಬಲಿ ಬಿದ್ದು ಅನರ್ಹರನ್ನು ಆರಿಸುತ್ತಾರೆ’ ಎಂಬ ಸಾಕ್ರಟಿಸ್ ಸುಭಾಷಿತವನ್ನು ಅಭ್ಯರ್ಥಿಯೊಬ್ಬರು ತಮ್ಮ ಸ್ಟೇಟಸ್ ನಲ್ಲಿ ಬಳಸಿಕೊಂಡಿದ್ದಾರೆ.

ನಂದಗುಡಿ ಹೋಬಳಿಯ ಶ್ವೇತಾ ಎನ್ನುವ ಮಹಿಳೆ, ’ನಿಮ್ಮ ಗ್ರಾಮಕ್ಕೆ ಬೇಕಾಗಿರುವುದು… ಇವು ಎಂಬ ಶೀರ್ಷಿಕೆಯಡಿ ‘ಸುಸಜ್ಜಿತ ಒಳ ಚರಂಡಿ, ಗ್ರಾಮ ಡಿಜಿಟಲ್ ವ್ಯವಸ್ಥೆಗೆ ಬದಲಾಗಬೇಕು. ಜನರ ಧ್ವನಿಗೆ ಮನ್ನಣೆ, ನಿಮ್ಮ ವಾರ್ಡ್ ನ ಮಾಹಿತಿ, ಗ್ರಾಮಕ್ಕೆ ವಕ್ಕರಿಸುವ ಸಾರಾಯಿ, ಇಸ್ಪೀಟು ಮುಂತಾದ ಹೆಮ್ಮರಿಗಳನ್ನು ಓಡಿಸುವ, ಶೈಕ್ಷಣಿಕ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡುವ, ರೈತರ ಸಮಸ್ಯೆ ಬಗೆಹರಿಸುವ, ಸರ್ಕಾರದ ಸವಲತ್ತು ಅರ್ಹ ಜನರಿಗೆ ತಲುಪಿಸುವ, ಊರಿನ ಪ್ರಗತಿಗೆ ಮಾರಕವಾಗುವ ಯೋಜನೆಗಳನ್ನು ವಿರೋಧಿಸುವ, ಪ್ರಭಾವಿಗಳ ಎದುರು ಕಾನೂನು ಕ್ರಮ ತೆಗೆದುಕೊಳ್ಳುವ ಧೈರ್ಯವಿರುವ ವ್ಯಕ್ತಿ’ ನಿಮ್ಮ ಗ್ರಾಮ ಪಂಚಾಯಿತಿ ಸದಸ್ಯನಾಗಿ ಆಯ್ಕೆ ಮಾಡಿ ಎನ್ನುವ ಸಂದೇಶ ಹಂಚಿಕೊಂಡಿದ್ದಾರೆ.

ADVERTISEMENT

ಸಾಮಾಜಿಕ ಜಾಲತಾಣಗಳಲ್ಲಿ ಮತದಾನದ ಹಕ್ಕಿನ ಜಾಗೃತಿಯೂ ನಡೆದಿದೆ. ಮೊದಲಿನಿಂದಲೂ ಈ ಗುಂಪುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮಂದಿಗೆ ಈ ಸಂದೇಶ ತಲುಪುವುದರಿಂದ ಹೆಚ್ಚಿನ ಬದಲಾವಣೆ ನಿರೀಕ್ಷಿಸಲು ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಮುಂದಿನ ದಿನಗಳಲ್ಲಿ ಮತದಾರರು ಜಾಗೃತರಾಗುತ್ತಾರೆ ಎಂಬ ಆಶಾಭಾವನೆ ಸಾಮಾಜಿಕ ಜಾಲತಾಣದ ಬಳಕೆದಾರರಲ್ಲಿ ಕಾಣಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.