ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಬಿಸವನಹಳ್ಳಿ, ಎಳ್ಳುಪುರ ನಡುವಿನ ರಾಜ ಕಾಲುವೆಯಲ್ಲಿ ನೀಲಿ ಬಣ್ಣದ ರಾಸಾಯನಿಕ ಮಿಶ್ರಿತ ನೀರು ಹರಿಯುತ್ತಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಎಳ್ಳುಪುರ ಮೂಲಕ ಬಿಸವನಹಳ್ಳಿ ಕೆರೆ ಸಾಗುವ ರಾಜಕಾಲುವೆಯಲ್ಲಿ ನೀಲಿ ಬಣ್ಣದ ನೀರು ಹರಿಯುತ್ತಿದ್ದು, ಕೆರೆಗೆ ಸೇರಿದರೆ ಜಲಚರಗಳು ಸಾವನಪ್ಪುವ ಆತಂಕ ಎದುರಾಗಿದೆ.
ಅರ್ಕಾವತಿ ನದಿ ಪಾತ್ರದ ಜಲ ಮೂಲಗಳಿಗೆ ವಿಷಯುಕ್ತ ಹಾಗೂ ತ್ಯಾಜ್ಯಗಳನ್ನು ಹರಿಸುತ್ತಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಹಾಗೂ ದೊಡ್ಡತುಮಕೂರು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ಕೆರೆ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಕಾರ್ಖಾನೆಯೊಂದರಲ್ಲಿ ಬಟ್ಟೆ ತೊಳೆದ ನಂತರ ಬರುವ ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರನ್ನು ಬಿಸವನಹಳ್ಳಿ ರಾಜಕಾಲುವೆಯ ಕಡೆ ಬಿಡಲಾಗಿದೆ ಎಂದು ಸ್ಥಳೀಯರಾದ ಯಲ್ಲಪ್ಪ, ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತು ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರು ಕೆರೆಗೆ ಹರಿಯದಂತೆ ಕ್ರಮಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಬಿಸವನಹಳ್ಳಿ ಕೆರೆಯಲ್ಲಿನ ಜಲಚರಗಳು ಸಾವನಪ್ಪಲಿವೆ ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.