
ದೊಡ್ಡಬಳ್ಳಾಪುರ: ನಟನೆ ನನಗೆ ಹವ್ಯಾಸವಷ್ಟೆ, ನಾನು ನ್ಯಾಯಾಧೀಶೆಯಾಗಬೇಕು ಎನ್ನುವುದು ನನ್ನ ಕನಸು...
ಇದು 2021ನೇ ಸಾಲಿನ ಭೈರವಿ ಚಿತ್ರದ ಭೈರವಿ ಪಾತ್ರಕ್ಕೆ ಬಾಲನಟಿ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾದ ತಾಲ್ಲೂಕಿನ ಹುಲಿಕುಂಟೆ ಗ್ರಾಮದ ಭೈರವಿ ಮಾತು.
ದಿನ ಪತ್ರಿಕೆ ವಿತರಕ, ವಕೀಲರು ಆಗಿರುವ ಹುಲಿಕುಂಟೆ ಮಹೇಶ್ ಮತ್ತು ರಾಧಾಮಣಿ ದಂಪತಿ ಪುತ್ರಿ 2ನೇ ತರಗತಿ ಓದುವಾಗಲೇ ನಟನೆ ಆರಂಭಿಸಿದರು. ಈಗ ತಮ್ಮ ಗಮನವನ್ನು ನಟನೆಯಿಂದ ಓದಿನ ಕಡೆ ಕೇಂದ್ರಿಕರಿಸಿದ್ದಾರೆ.
‘2ನೇ ತರಗತಿ ಓದುವಾಗಲೇ ಅಮ್ಮ ರಾಧಾಮಣಿ ಆಸೆಯಂತೆ ತನಿಖೆ ಚಿತ್ರದಲ್ಲಿನ ನಾಯಕ ನಟಿಯ ತಂಗಿ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅಲ್ಲಿಂದ ಇಲ್ಲಿಯವರೆಗೆ 26 ಸಿನಿಮಾಗಳಲ್ಲಿ, 7 ಧಾರಾವಾಹಿಗಳಲ್ಲಿ ನಟಿಸಿದ್ದೇನೆ ಎನ್ನುತ್ತಾರೆ’ ನೆಲಮಂಗಲ ತಾಲ್ಲೂಕಿನ ಬರದಿಯಲ್ಲಿ 10ನೇ ತರಗತಿ ಓದುತ್ತಿರುವ ಭೈರವಿ.
ಈಗ ಓದಿನ ಕಡೆಗೆ ಪ್ರಥಮ ಆದ್ಯತೆ ನೀಡಿದ್ದೇನೆ ಎನ್ನುವ ಭೈರವಿ, ಸ್ಲಂ ಶ್ರಾವಣಿ ನಿಸಿಮಾ ಅರ್ಧ ಚಿತ್ರೀಕರಣವಾಗಿದೆ, ಇದನ್ನು ಮುಗಿಸುತ್ತೇನೆ. ನಾನು ಸಹ ಟಿವಿಯಲ್ಲಿ ಕಾಣಿಸಬೇಕು ಎನ್ನುವ ಆಸೆ ಇತ್ತು. ಈಗ ಸಿನಿಮಾನದಲ್ಲೂ ನಟಿಸಿ ಪ್ರಶಸ್ತಿಯನ್ನು ಪಡೆದಿರುವುದು ಖುಷಿ ತಂದಿದೆ. ‘ನಾನು ನಟಿಸಿರುವ ಉದೋ ಉದೋ ಯಲ್ಲಪ್ಪ ಧಾರಾವಾಹಿ, ಚಾರಣ ಸಿನಿಮಾಗಳು ಹೆಚ್ಚು ಇಷ್ಟದವು ಎನ್ನುತ್ತಾರೆ ಭೈರವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.