ದೇವನಹಳ್ಳಿ: ವಿದ್ಯಾರ್ಥಿನಿಯರು ಕಾನೂನು ಬದ್ಧ ವಯಸ್ಸು ಆಗುವವರೆಗೂ ಯಾವ ಪ್ರಚೋದನೆಮ ಒತ್ತಡಕ್ಕೆ ಒಳಗಾಗದೆ ಬಾಲ್ಯ ವಿವಾಹಕ್ಕೆ ಅವಕಾಶ ಮಾಡಿಕೊಡಬಾರದು. ಈ ಕೆಟ್ಟ ಪದ್ಧತಿಯನ್ನು ಬೇರುಸಹಿತ ಕಿತ್ತೋಗಿಯಲು ಎಲ್ಲರೂ ಸಂಕಲ್ಪ ಮಾಡಬೇಕೆಂದು ನಿಲಯ ಮೇಲ್ವಿಚಾರಕಿ ಸುಮತಿ.ಬಿ.ಎಸ್ ತಿಳಿಸಿದರು.
ತಾಲ್ಲೂಕಿನ ಕುಂದಾಣ ಹೋಬಳಿಯ ಸಮೀಪದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಒತ್ತಡ ಹಾಕಿ ಮನೆಯ ಹಿರಿಯರು, ಪೋಷಕರು ಬಾಲ್ಯ ವಿವಾಹಕ್ಕೆ ಬಲವಂತವಾಗಿ ಒಪ್ಪಿಸುತ್ತಾರೆ. ಆದರೆ ಇಂದಿನ ಕಾನೂನು ಕಠಿಣವಾಗಿದೆ. ಬಾಲ್ಯ ವಿವಾಹವನ್ನು ಪ್ರೋತ್ಸಾಹಿಸುವವರು ಮತ್ತು ಬಾಲ್ಯ ವಿವಾಹ ಆಗುವವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶ ಇದೆ ಎಂದು ತಿಳಿದರು.
ಈ ಕಾಯ್ದೆಯನ್ನು ಉಲ್ಲಂಸಿ ವಿವಾಹವಾಗುವ, ವಿವಾಹ ಮಾಡುವ ಮತ್ತು ಆಯೋಜನೆ ಮಾಡುವವರಿಗೆ ಕಾನೂನಿನಡಿಯಲ್ಲಿ 2 ವರ್ಷ ಜೈಲು ಮತ್ತು ₹ 1 ಲಕ್ಷ ದಂಡ ವಿಧಿಸಲಾಗುತ್ತದೆ. ಎಲ್ಲೆ ಬಾಲ್ಯ ವಿವಾಹ ನಡೆಯವುದು ಕಂಡುಬಂದಲ್ಲಿ ಕೂಡಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಥವಾ ಮಕ್ಕಳ ಸಹಾಯವಾಣಿ 1098 ಗೆ ಮಾಹಿತಿ ನೀಡಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ನಿಲಯದ ಮಕ್ಕಳಿಂದ ಬಾಲ್ಯ ವಿವಾಹ ಕುರಿತ ವಿವಿಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮೂಲಕ ಬಾಲ್ಯವಿವಾಹದ ಅರಿವು ಮೂಡಿಸಲಾಯಿತು.ವಿದ್ಯಾರ್ಥಿ ನಿಲಯದ ಸಿಬ್ಬಂದಿಯಾದ ವಿಜಯಮ್ಮ, ನಾಗಮ್ಮ ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.