ದೊಡ್ಡಬಳ್ಳಾಪುರ: ನಗರದ ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ದೇವಾಂಗ ಶ್ರೀ ಚೌಡೇಶ್ವರಿ ಖತ್ತಿ ಹಬ್ಬದ ಸೇವಾ ಸಮಿತಿ ನೇತೃತ್ವದಲ್ಲಿ ಮೇ 7ರವರೆಗೆ ನಡೆಯಲಿರುವ ಚೌಡೇಶ್ವರಿ ಖತ್ತಿ ಹಬ್ಬ ಆಚರಣೆಗೆ ಸಂಭ್ರಮದ ಚಾಲನೆ ನೀಡಲಾಯಿತು.
ದೇವಾಲಯದ ಆವರಣದಲ್ಲಿ ಬೆಲ್ಲದಲ್ಲಿ ಕೋಟೆ ಕಟ್ಟಿ, ಕಬ್ಬಿನ ಚಪ್ಪರ ಹಾಕಿ ವೀಳ್ಯದ ಎಲೆಯಲ್ಲಿ ತೋರಣ ಕಟ್ಟಿ, ಮೆರವಣಿಗೆ ಮೂಲಕ ಚೌಡೇಶ್ವರಿ ದೇವಿಯನ್ನು ಬಿಜಯ ಮಾಡಿಸಿಕೊಳ್ಳಲಾಯಿತು.
ಬೆಳಿಗ್ಗೆ ರಾಮಣ್ಣ ಬಾವಿ ಬಳಿಯಿಂದ ಆರಂಭವಾದ ಶಕ್ತಿ ಮೆರವಣಿಗೆಯಲ್ಲಿ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು. ಖತ್ತಿ ಹಬ್ಬ ಆಚರಣೆ ಅಂಗವಾಗಿ ಮೇ6 ರಂದು ಸಂಜೆ ಜ್ಯೋತಿ ಮೆರವಣಿಗೆ ಹಾಗೂ ಮೇ 7ರಂದು ಬೆಳಿಗ್ಗೆ ವಸಂತೋತ್ಸವ ನಡೆಯಲಿದೆ.
ಪುರಾಣ ಹಿನ್ನಲೆ: ದೇವಾಂಗ ಮೂಲ ಪುರುಷ ದೇವಲ ಮಹರ್ಷಿಯ ಕಾಯಕ ನಿಷ್ಠೆಯನ್ನು ಮೆಚ್ಚಿದ ಶಿವ ಕೈಲಾಸದಲ್ಲಿ ವರವನ್ನು ಕೇಳಿದಾಗ ಭೂಲೋಕಕ್ಕೆ ರಾಮಲಿಂಗ ಚೌಡೇಶ್ವರಿಯನ್ನು ಕಳಿಸಿಕೊಡುವಂತೆ ಕೇಳುತ್ತಾರೆ. ಅಂತೆಯೇ ದೇವಿಯನ್ನು ಕರೆತರುವಾಗ ಹಲವಾರು ವಿಘ್ನಗಳು ಎದುರಾಗಿ ಕೊನೆಗೆ ಭೂಲೋಕದಲ್ಲಿ ದೇವಿಯನ್ನು ಒಲಿಸಿಕೊಳ್ಳುವ ಸಲುವಾಗಿ ಖತ್ತಿ ಹಬ್ಬ, ಅಲಗು ಸೇವೆ, ದಂಡಕಗಳು ಮೊದಲಾದ ಆಚರಣೆಗಳು ಬೆಳೆದು ಬಂದಿವೆ. ನಿಷ್ಠೆಯಿಂದ, ಶ್ರದ್ದಾ ಭಕ್ತಿಗಳಿಂದ ಈ ಆಚರಣೆ ನೆರವೇರಿಸಲಾಗುತ್ತಿದೆ ಎನ್ನುತ್ತಾರೆ ಹಿರಿಯರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.