ದೇವನಹಳ್ಳಿ: ‘ಹೈಟೆಕ್ ಮಾದರಿಯಲ್ಲಿ ಮೌಲ್ಯಾಧಾರಿತ ಸಮಗ್ರ ಶಿಕ್ಷಣಕ್ಕೆ ಒತ್ತು ನೀಡಲುಕಾಲೇಜು ಧೃಡ ಸಂಕಲ್ಪ ಮಾಡಿದೆ’ ಎಂದು ಪ್ರಾಂಶುಪಾಲ ಪ್ರೊ.ಶಿವಶಂಕರಪ್ಪ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 2019–20ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿ, ಕ್ರೀಡಾ, ಎನ್ಎಸ್ಎಸ್, ಎನ್ಸಿಸಿ, ಯುವ ರೆಡ್ ಕ್ರಾಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘1984ರಲ್ಲಿ 22 ವಿದ್ಯಾರ್ಥಿಗಳಿಂದ ಆರಂಭವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಳೆದ ಮೂರು ವರ್ಷಗಳ ಹಿಂದೆ ನ್ಯಾಕ್ ಮಾನ್ಯತೆ ಪಡೆದಿದ್ದು, ಅದು ಮುಂದುವರೆದಿದೆ. 2018ರಲ್ಲಿ ‘ರೂಸಾ’ ಅನುದಾನಕ್ಕೆ ಒಳಪಟ್ಟು ಪ್ರಸ್ತುತ ವಿವಿಧ ವಿಷಯಗಳಲ್ಲಿ 960 ವಿದ್ಯಾರ್ಥಿಗಳು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಎಂ.ಕಾಂ ತರಗತಿ ಆರಂಭಿಸಲಾಗಿದೆ’ ಎಂದು ಹೇಳಿದರು.
‘23 ಬೋಧನಾ ಕೊಠಡಿ, ಸ್ಮಾರ್ಟ್ ಬೋಧನಾ ಕೊಠಡಿ, ಕಂಪ್ಯೂಟರ್ ಕಲಿಕಾ ಕೇಂದ್ರ ಆರಂಭಿಸಲಾಗಿದೆ. ವಿಜ್ಞಾನ ಪ್ರಯೋಗಾಲಯ ಇದೆ. ಗ್ರಂಥಾಲಯದಲ್ಲಿ35 ಸಾವಿರ ಪುಸ್ತಕಗಳಿವೆ. ಸ್ವರ್ಧಾತ್ಮಕ ಪರೀಕ್ಷೆ ಕಾರ್ಯಾಗಾರ, ವಾರ್ಷಿಕ ಉದ್ಯೋಗ ಮೇಳ ನಡೆಸಲಾಗುತ್ತಿದ್ದು ಆರು ಎಕರೆ ಕಾಲೇಜು ಆವರಣದಲ್ಲಿ ಪ್ರಸ್ತುತ 300 ಮರಗಳನ್ನು ಬೆಳೆಸಲಾಗಿದೆ. ಯಾವುದೇ ಖಾಸಗಿ ಕಾಲೇಜಿಗಿಂತ ಕಡಿಮೆ ಇಲ್ಲದ ಸೌಲಭ್ಯ ಕಲ್ಪಿಸಲಾಗಿದೆ. ಇದಕ್ಕೆ ಹಿಂದಿನ ಪ್ರಾಂಶುಪಾಲರು, ಉಪನ್ಯಾಸಕರು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರ ಸಹಕಾರವಿದೆ’ ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಡೇರಿ ನಾಗೇಶ್ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯೆ ಅನಂತಕುಮಾರಿ ಮಾತನಾಡಿ, ‘ಪದವಿ ವ್ಯಾಸಂಗದಲ್ಲಿ ಪ್ರತಿಯೊಂದು ವ್ಯವಸ್ಥೆಯಲ್ಲಿ ಬದಲಾವಣೆಯಾಗಿದೆ. ಕೂಲಿ ಕಾರ್ಮಿಕರ ಮಕ್ಕಳು ಉನ್ನತ ಪದವಿ ಪಡೆಯುವ ಅವಕಾಶವಿದೆ.ಪೂರಕ ಶೈಕ್ಷಣಿಕ ವಾತಾವರಣ ನಿರ್ಮಿಸಲಾಗಿದೆ. ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗೆ ಅರ್ಹತೆ ಗಳಿಸಿದ್ದಾರೆ. ಇದು ಇಲ್ಲಿನ ಗುಣಮಟ್ಟದ ಬೋಧನೆಗೆ ಸಾಕ್ಷಿ. ವಿದ್ಯಾರ್ಥಿಗಳು ಪರಿಶ್ರಮದಿಂದ ಓದಬೇಕು’ ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ವಿ.ಗೋಪಾಲ್, ವಿ.ಹನುಮಂತಪ್ಪ ಪಿಳ್ಳರಾಜು, ವಿಜಯ ಕುಮಾರ್, ಮುನೀಂದ್ರ, ಮುತ್ತು ಕುಮಾರ್, ಜಿ.ಸುನೀಲ್, ವಿವಿಧ ಚಟುವಟಿಕೆ ಘಟಕದ ಸಂಚಾಲಕರಾದ ಕೆಂಪೇಗೌಡ, ಕೆ.ರವಿಚಂದ್ರ, ಸಜ್ಜದ್ ಪಾಷ, ಸತ್ಯನಾರಾಯಣ ಗೌಡ, ಕೃಷ್ಣ ಮೂರ್ತಿ, ರವಿಕುಮಾರ್, ನಳಿನಿದೇವಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.