ಹೊಸಕೋಟೆ: ತಾಲ್ಲೂಕಿನ ಸ್ವಾಭಿಮಾನಿ ಪಕ್ಷದವರು ಹೊಂದಾಣಿಕೆಗೆ ಮುಂದಾದರೆ ಸೀಟು ಹಂಚಿಕೊಂಡು ಚುನಾವಣೆ ಎದುರಿಸುತ್ತೇವೆ. ಇಲ್ಲದಿದ್ದರೆ ಎಲ್ಲ 31 ವಾರ್ಡ್ಗಳಲ್ಲೂ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮುನಿಶಾಮಣ್ಣ ಹೇಳಿದರು.
ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ನಗರಸಭೆ ಚುನಾವಣಾ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶರತ್ ಬಚ್ಚೇಗೌಡರ ಸ್ವಾಭಿಮಾನಿ ಪಕ್ಷವೊಂದೇ ಮುಂದಿನ ನಗರಸಭಾ ಚುನಾವಣೆಯಲ್ಲಿ ಎರುರಾಳಿ; ಹೊರತು ಬಿಜೆಪಿ ಅಲ್ಲ ಎಂದು ಕಳೆದ ವಿಧಾನಸಭಾ ಚುನಾವಣೆಯ ನಂತರ ತಾಲ್ಲೂಕಿನಲ್ಲಿ ವಿವಿಧ ಒಂಬತ್ತು ಚುನಾವಣೆಗಳನ್ನು ಎದುರಿಸಲಾಗಿದೆ. ಎಲ್ಲ ಚುನಾವಣೆಗಳಲ್ಲಿ ಪಕ್ಷ ಉತ್ತಮ ಸ್ಪರ್ಧೆ ನೀಡಿದೆ. ಬಿಜೆಪಿ ಎಲ್ಲಿಯೂ ಕಾಣಿಸಿಕೊಂಡಿಲ್ಲ ಎಂದರು.
‘ಪದಾಧಿಕಾರಿಗಳು ಶ್ರಮ ಪಟ್ಟು ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ನಗರಸಭೆ ನಮ್ಮ ವಶದಲ್ಲಿಯೇ ಮುಂದುವರಿಯುತ್ತದೆ. ಯಾರಿಗಾದರೂ ಕೆಲಸ ಮಾಡಲು ಸಮಸ್ಯೆಯಾದರೆ ಕೂಡಲೇ ರಾಜಿನಾಮೆ ಕೊಡಿ’ ಎಂದು ಸೂಚಿಸಿದರು.
ಕೆಪಿಸಿಸಿ ಸದಸ್ಯ ತಿರುವರಂಗ ನಾರಾಯಣಸ್ವಾಮಿ, ಅಬ್ದುಲ್ ಕಯೂಮ್, ಫಯಾಜ್ ಮಾತನಾಡಿದರು. ಮುಖಂಡರಾದ ತಾ.ರಾ. ವೆಂಕಟೇಶ್, ಶಿವಾನಂದ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.