ADVERTISEMENT

ಕೋವಿಡ್: ಮುಂಜಾಗ್ರತೆಯೇ ಮದ್ದು

ಅನಭವ ಹಂಚಿಕೊಂಡ ಆಶಾ ಕಾರ್ಯಕರ್ತೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 8:24 IST
Last Updated 1 ಆಗಸ್ಟ್ 2020, 8:24 IST
ಆಶಾ ಕಾರ್ಯಕರ್ತೆ ಜಿ.ವಿ.ಗಾಯಿತ್ರಿ
ಆಶಾ ಕಾರ್ಯಕರ್ತೆ ಜಿ.ವಿ.ಗಾಯಿತ್ರಿ   

ವಿಜಯಪುರ: ‘ಕೊರೊನಾ ಪಾಸಿಟಿವ್ ಆಗಿದೆ ಎಂದಾಕ್ಷಣ ಸೊಂಕಿಗೆ ಒಳಗಾಗಿರುವವರು ಭಯಪಡುವುದು ಬೇಡ. ಭಯ ಪಡುವುದರ ಬದಲಿಗೆ ಹಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ, ಆತ್ಮವಿಶ್ವಾಸವೊಂದಿದ್ದರೆ ಸಾಕು ಈ ರೋಗವನ್ನು ನಾವು ಹಿಮ್ಮೆಟ್ಟಿಸಬಹುದು. ನೆರೆಹೊರೆಯವರೂ ಕೂಡಾ ಆತಂಕ ಪಡುವುದು ಬೇಡ’ ಎಂದು ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಆಶಾ ಕಾರ್ಯಕರ್ತೆ ಜಿ.ವಿ.ಗಾಯಿತ್ರಿ ಅವರು ಹೇಳುತ್ತಾರೆ.

‘ನಾವು ಸಮಾಜದಲ್ಲಿ ಪ್ರತಿಯೊಬ್ಬರಲ್ಲಿಯೂ ಕೋವಿಡ್‌ ಇದೆ ಎಂಬ ಜಾಗೃತ ಪ್ರಜ್ಞೆ ಕಾಯ್ದುಕೊಂಡು ಅಂತರ ಕಾಯ್ದುಕೊಂಡು ವ್ಯವಹರಿಸಿದರೆ ಖಂಡಿತ ಕೋವಿಡ್‌ ನಿಯಂತ್ರಿಸಬಹುದು’ ಎಂದು ಅವರು ತಮ್ಮ ಅನುಭವ ಹಂಚಿಕೊಂಡರು.

‘ಕೋವಿಡ್‌ ಪ್ರಕರಣಗಳು ವರದಿಯಾದ ದಿನದಿಂದ ಈವರೆಗೂ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಅಧಿಕಾರಿಗಳು ಸಾಕಷ್ಟು ಶ್ರಮಿಸುತ್ತಿದ್ದಾರೆ. ನಾವು ಸದಾ ಜನರ ನಡುವೆ ಇರುವುದರಿಂದ ಸೋಂಕು ಎಲ್ಲಿ, ಹೇಗೆ ತಗುಲಿತು ಎಂಬುದು ಈವರೆಗೆ ತಿಳಿಯಲಿಲ್ಲ’.

ADVERTISEMENT

‘ಜುಲೈ ಮೊದಲ ವಾರದಲ್ಲಿ ಜ್ವರ, ಮೈ ಕೈ ನೋವು, ಕೆಮ್ಮು, ತಲೆನೋವು ಕಾಣಿಸಿಕೊಂಡಿತು. ಆಗಾಗ ವಿಶ್ರಾಂತಿ ಪಡೆದು ಕೆಲಸ ಮಾಡುತ್ತಿದ್ದೆವು. ಮನೆ ಮನೆ ಸರ್ವೆ ಮಾಡುತ್ತಿದ್ದೆವು. ಜ್ವರ ಪದೇ ಪದೇ ಕಾಣಿಸಿಕೊಂಡ ಕಾರಣಕ್ಕೆ ಜುಲೈ 15 ರಂದು ಪರೀಕ್ಷೆ ಮಾಡಿಸಿದಾಗ ವರದಿಯಲ್ಲಿ ಕೋವಿಡ್ ತಗುಲಿರುವುದು ತಿಳಿಯಿತು. ತಕ್ಷಣ ಆರೋಗ್ಯ ಇಲಾಖೆಯವರು, ನನ್ನನ್ನು ಕೇರ್ ಸೆಂಟರ್ ಗೆ ಕರೆದುಕೊಂಡು ಹೋದರು. ಅಲ್ಲಿ ತುಂಬಾ ಚೆನ್ನಾಗಿ ನಮ್ಮ ಬಗ್ಗೆ ಗಮನಹರಿಸಿದರು. ಅವರು ನೀಡಿದ ಸೂಚನೆಗಳನ್ನು ಪಾಲನೆ ಮಾಡಿಕೊಂಡಿದ್ದರಿಂದ 7 ನೇ ದಿನ ನನ್ನ ವರದಿ ನೆಗೆಟಿವ್ ಬಂತು. ಈಗ ಮನೆಯಲ್ಲಿದ್ದೇನೆ.

ನಾನು ನನ್ನ ಗಂಟಲ ದ್ರವವನ್ನು ಪರೀಕ್ಷೆಗೆ ನೀಡಿದ ನಂತರ ಸ್ವಯಂ ಜಾಗ್ರತೆ ವಹಿಸತೊಡಗಿದ್ದೆ, ಬಿಸಿನೀರು ಕುಡಿಯುವುದು, ಬಿಸಿಯೂಟ ಸೇವನೆ ಮಾಡುವುದು, ಕಡ್ಡಾಯವಾಗಿ ಮನೆಯಲ್ಲಿಯೂ ಮಾಸ್ಕ್ ಧರಿಸುವುದು, ಮನೆಯಲ್ಲಿಯೂ ಎಲ್ಲರೊಂದಿಗೆ ಅಂತರ ಕಾಯ್ದುಕೊಂಡಿದ್ದೆ, ಪ್ರತಿದಿನ ಎರಡು ಬಾರಿ ಬಿಸಿನೀರು ಸ್ನಾನ ಮಾಡುತ್ತಿದ್ದೆ. ಬಿಸಿನೀರಿಗೆ ಉಪ್ಪು ಸೇರಿಸಿಕೊಂಡು ಗಂಟಲಲ್ಲಿ ಗಾರ್ಗಲ್ ಮಾಡುತ್ತಿದ್ದೆ, ನನ್ನ ಕುಟುಂಬದವರೂ ಹೀಗೆ ಮಾಡಿಕೊಳ್ಳುವಂತೆ ತಿಳಿಸಿದ್ದೆ. ನನಗೆ ಪಾಸಿಟಿವ್ ಬಂದಿದೆ ಎಂದಾಕ್ಷಣ ಸಹಜವಾಗಿಯೇ ಗಾಬರಿ, ಆತಂಕ ಆಗಿತ್ತು. ನನ್ನ ಕುಟುಂಬದವರು ಕಣ್ಣೀರಿಟ್ಟರು. ಆದರೂ ನಾನೂ ಮುಂಜಾಗ್ರತಾ ಕ್ರಮಗಳು ಕೈಗೊಂಡಿದ್ದರಿಂದ ಸೋಂಕನ್ನು ಸಮರ್ಥವಾಗಿ ಎದುರಿಸುವ ಧೈರ್ಯವಿತ್ತು.

ಬಳಿಕ ನನ್ನ ಪತಿ ಹಾಗೂ ನನ್ನ ತಂದೆ, ತಾಯಿ, ಮಗ, ತಂಗಿಯರು, ನನ್ನ ಪ್ರಥಮ ಸಂಪರ್ಕದಲ್ಲಿದವರೆನ್ನೂ ಪರೀಕ್ಷೆ ಮಾಡಿಸಿದಾಗ ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಕೋವಿಡ್‌ಗೆ ಹೆದರಿಕೊಳ್ಳುವ ಅಗತ್ಯವಿಲ್ಲ. ಹಾಗಂತ ಮೈಮರೆತು ವರ್ತಿಸುವುದು ಕ್ಷೇಮಕರವಲ್ಲ. ಜಾಗೃತ ಪ್ರಜ್ಞೆಯೊಂದಿಗೆ ವ್ಯವಹರಿಸುವುದೇ ಜಾಣ್ಮೆಯ ನಡೆ. ಪ್ರತಿಯೊಬ್ಬರೂ ಬಿಸಿನೀರು ಕುಡಿಯುವುದರ ಜೊತೆಗೆ ಯೋಗ, ಪ್ರಾಣಾಯಾಮ ಮಾಡಿದರೆ ಈ ಸೋಂಕು ಎದುರಿಸುವುದು ತುಂಬಾ ಸರಳ.

ಪ್ರತಿಯೊಬ್ಬರು ಮನೆಯಲ್ಲಿ ಬಿಸಿ ನೀರು ಉಪಯೋಗಿಸಬೇಕು. ಪ್ರತಿ ಎರಡು ಗಂಟೆಗೊಮ್ಮೆ ಬಿಸಿ ನೀರು ಕುಡಿಯಬೇಕು. ದಿನಕ್ಕೆ ಕನಿಷ್ಠ ಮೂರು ಲೀಟರ್‌ ನೀರಾದರೂ ಕುಡಿಯಬೇಕು. ಇದರಿಂದ ಒಂದೊಮ್ಮೆ ಕೋವಿಡ್‌ ಬಂದರೂ ತಿಳಿಯುವುದೇ ಇಲ್ಲ.

‘ಮೈಕೈ ನೋವು, ಜ್ವರ ಕಾಣಿಸಿಕೊಂಡ ತಕ್ಷಣವೇ ಪರೀಕ್ಷೆ ಮಾಡಿಸಿಕೊಂಡು ಮುಂಜಾಗ್ರತಾ ಕ್ರಮಗಳು, ಮಾತ್ರೆಗಳನ್ನು ತೆಗೆದುಕೊಳ್ಳುವುದು ಒಳಿತು. ಪ್ರತಿ ಮನೆಯಲ್ಲಿ ಪಲ್ಸ್ ಆಕ್ಸಿಮೀಟರ್‌ ಇಟ್ಟುಕೊಂಡರೆ ಉತ್ತಮ. ಅದರಿಂದ ನಿತ್ಯ ಮನೆಯಲ್ಲಿರುವ ಹಿರಿಯ ನಾಗರಿಕರು, ಕಾಯಿಲೆ ಪೀಡಿತರಲ್ಲಿನ ಆಮ್ಲಜನಕ ಪ್ರಮಾಣ ಅರಿತುಕೊಂಡು ಅಗತ್ಯವಿದ್ದರೆ ಚಿಕಿತ್ಸೆ ಕೊಡಿಸಲು ಅನುಕೂಲವಾಗುತ್ತದೆ. ಮೊದಲೇ ಹೇಳಿದಂತೆ ಪ್ರತಿಯೊಬ್ಬರಲ್ಲಿ ಕೋವಿಡ್ ಇದೆ ಎಂಬ ಭಾವನೆ ನಮ್ಮಲ್ಲಿ ಇದ್ದಾಗ ಮನಸ್ಸು ತನ್ನಿಂದ ತಾನೇ ಎಚ್ಚರ ಸ್ಥಿತಿಯಲ್ಲಿ ಇರುತ್ತದೆ’.

‘ಅನಗತ್ಯ ಭಯ ಬೇಡ. ಮನುಷ್ಯನನ್ನು ಅನಗತ್ಯವಾದ ಅತಿ ಭಯದ ಗೀಳು ಸಹ ಅಪಾಯಕ್ಕೆ ದೂಡುತ್ತದೆ ಎಂಬುದಕ್ಕೆ ಕೋವಿಡ್‌ ಸಂದರ್ಭವೇ ಉತ್ತಮ ಉದಾಹರಣೆ. ಕೊರೊನಾ ವೈರಸ್‌ ಸೋಂಕು ಸಹ ಜ್ವರ, ನೆಗಡಿಯಂತಹ ಸೋಂಕಷ್ಟೆ. ಆದರೆ, ಅನೇಕ ಜನರು ಇಲ್ಲದ್ದು ಕಲ್ಪಿಸಿಕೊಂಡು ಭಯಪಟ್ಟು ಆತ್ಮಹತ್ಯೆಯ ನಿರ್ಧಾರ ಮಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ’ ಎನ್ನುವ ವಿಚಾರ ಕೇಳಿದಾಗ ತುಂಬಾ ಬೇಸರವಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.