ದೊಡ್ಡಬಳ್ಳಾಪುರ: ಕೋವಿಡ್-19 ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡಿರುವ ವಾರಾಂತ್ಯದ ಕರ್ಫ್ಯೂ ತಾಲ್ಲೂಕಿನಲ್ಲಿ ಯಶಸ್ಸು ಕಂಡಿದೆ. ಜನರು ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದು ನಗರ ಸೇರಿದಂತೆ ತಾಲ್ಲೂಕಿನ ದೊಡ್ಡಬೆಳವಂಗಲ, ತೂಬಗೆರೆ, ಮಧುರೆ, ತೂಬಗೆರೆ ಹೋಬಳಿ ಕೇಂದ್ರಗಳಲ್ಲೂ ಜನರ ಒಡಾಟ ವಿರಳವಾಗಿತ್ತು.
ವಾರಾಂತ್ಯದ ಕರ್ಫ್ಯೂಗೆ ಜನತೆ ಬೆಂಬಲ ನೀಡುತ್ತಿದ್ದಾರೆ. ಆದರೂ ಕೆಲವೆಡೆ ಪೊಲೀಸರು ತೆರಳಿ ಬಾಗಿಲು ಮುಚ್ಚಿಸಿದ ಘಟನೆಗಳು ನಡೆದವು.
ನಗರದ ಬಸ್ ನಿಲ್ದಾಣ, ಕೆ.ಆರ್.ಮಾರುಕಟ್ಟೆ, ತಾಲ್ಲೂಕು ಕಚೇರಿ ವೃತ್ತ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಬಸವ ಭವನ ವೃತ್ತ, ಪ್ರವಾಸಿ ಮಂದಿರ ವೃತ್ತ, ‘ಡಿ’ ಕ್ರಾಸ್ಗಳಲ್ಲೂ ಜನ, ವಾಹನಗಳ ಸಂಚಾರ ಇಲ್ಲದೆ ರಸ್ತೆಗಳಲ್ಲೆವು ಖಾಲಿ ಖಾಲಿಯಾಗಿದ್ದವು. ಪೊಲೀಸರು, ಆಸ್ಪತ್ರೆಗಳಿಗೆ ಹೋಗುವವರು ಹಾಗೂ ಇತರೆ ತುರ್ತು ಕೆಲಸಗಳಿಗೆ ಹೋಗುವ ಜನರ ಒಡಾಟ ಮಾತ್ರ ಕಂಡು ಬಂತು.
ಸರ್ಕಾರದ ಕೋವಿಡ್ ಮಾರ್ಗಸೂಚಿಗೆ ಸಾರ್ವಜನಿಕರಿಂದ ಉತ್ತಮ ಬೆಂಬಲದೊರೆತಿದೆ ಎಂದು ತಿಳಿಸಿದ ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ಕುಮಾರ್, ಹೋಟೆಲ್ ಊಟವನ್ನೇ ನಂಬಿಕೊಂಡಿದ್ದ ಒಂದಿಷ್ಟು ಕಾರ್ಮಿಕರಿಗೆ ಊಟದ ತೊಂದರೆಯಾಗುವುದು ಕಂಡು ಬಂದಿದೆ. ಭಾನುವಾರ ದಾನಿಗಳ ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದ ಅಗತ್ಯ ಇರುವವರಿಗೆ ಪಾಕೆಟ್ಗಳಲ್ಲಿ ತಿಂಡಿ
ತಲುಪಿಸುವವ್ಯವಸ್ಥೆ ಮಾಡುವ ಚಿಂತನೆ ಇದೆ ಎಂದರು.
ಶನಿವಾರ ಮತ್ತು ಭಾನುವಾರ ಬೆಳಗ್ಗೆ 6ರಿಂದ 10ರವರೆಗೆ ನಾಲ್ಕು ತಾಸು ಮಾತ್ರ ಸುರಕ್ಷತೆ ನಿಯಮಗಳ ಪಾಲಿಸಿ ಅಗತ್ಯ ಸೇವೆಗಳ ಅಂಗಡಿಗಳು ತೆರೆಯಲು ಅವಕಾಶವಿದೆ. ಅಷ್ಟರಲ್ಲೇ ಮನೆಗೆ ಬೇಕಾದ ವಸ್ತುಗಳನ್ನು ತಂದಿಟ್ಟುಕೊಳ್ಳಬೇಕು. ಹೋಟೆಲ್ಗಳನ್ನು ಬೆಳಿಗ್ಗೆ 6 ರಿಂದ ರಾತ್ರಿ 9ರವರೆಗೂ ತೆರೆದಿಡಲು ಅವಕಾಶವಿದೆ. ಆದರೆ ಪಾರ್ಸೆಲ್ ಮಾತ್ರ ನೀಡಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.