ADVERTISEMENT

ದೊಡ್ಡಬಳ್ಳಾಪುರ | ವೇಯಿಗಣ್ಣಮ್ಮ ದೇಗುಲ: ಅಸ್ಪೃಶ್ಯತೆ ಮುಕ್ತ

ತಹಶೀಲ್ದಾರ್‌ ವಿಭಾವಿದ್ಯಾ ರಾಥೋಡ್ ಸಮ್ಮುಖದಲ್ಲಿ ಶಾಂತಿಸಭೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 2:00 IST
Last Updated 6 ಜುಲೈ 2025, 2:00 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಗೂಳ್ಯ ಗ್ರಾಮದ ವೇಯಿಗಣ್ಣಮ್ಮ ದೇವಸ್ಥಾನದಲ್ಲಿ ತಹಶೀಲ್ದಾರ್‌ ವಿಭಾವಿದ್ಯಾ ರಾಥೋಡ್ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಿ ದಲಿತರು ದೇವಸ್ಥಾನ ಪ್ರವೇಶಿಸಿ ಪೂಜೆ ಸಲ್ಲಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಗೂಳ್ಯ ಗ್ರಾಮದ ವೇಯಿಗಣ್ಣಮ್ಮ ದೇವಸ್ಥಾನದಲ್ಲಿ ತಹಶೀಲ್ದಾರ್‌ ವಿಭಾವಿದ್ಯಾ ರಾಥೋಡ್ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಿ ದಲಿತರು ದೇವಸ್ಥಾನ ಪ್ರವೇಶಿಸಿ ಪೂಜೆ ಸಲ್ಲಿಸಿದರು   

ದೊಡ್ಡಬಳ್ಳಾಪುರ: ತಾಲ್ಲೂಕಿನ ಗೂಳ್ಯ ಗ್ರಾಮದ ವೇಯಿಗಣ್ಣಮ್ಮ ದೇವಸ್ಥಾನದಲ್ಲಿ ಅಸ್ಪೃಶ್ಯತೆ ಆಚರಣೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ವಿಭಾವಿದ್ಯಾ ರಾಥೋಡ್ ಸಮ್ಮುಖದಲ್ಲಿ ಶನಿವಾರ ಶಾಂತಿ ಸಭೆ ನಡೆಸಿ ದಲಿತರು ದೇವಸ್ಥಾನ ಪ್ರವೇಶಿಸಿದರು.

ವೇಯಿಗಣ್ಣಮ್ಮ ದೇವಸ್ಥಾನಕ್ಕೆ ದಲಿತರ ಪ್ರವೇಶ ನಿಷೇಧಿಸಲಾಗಿದ್ದ ಕುರಿತು ಗ್ರಾಮದ ಶಕುಂತಲಮ್ಮ ಜಿಲ್ಲಾಧಿಕಾರಿಗೆ ಪತ್ರ ಬರೆದು ಗ್ರಾಮದಲ್ಲಿನ ಅಸ್ಪೃಶ್ಯತೆ ಆಚರಣೆ ತೊಲಗಿಸುವಂತೆ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಕಂದಾಯ, ಪೊಲೀಸ್ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ದಲಿತರು ದೇವಾಲಯ ಪ್ರವೇಶಿಸಿ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಗ್ರಾಮದಲ್ಲಿನ ಅನಿಷ್ಟ ಪದ್ಧತಿಗೆ ಅಂತ್ಯಹಾಡಲಾಯಿತು.

ADVERTISEMENT

ವೇಯಿಗಣ್ಣಮ್ಮ ದೇವಾಲಯದ ಅರ್ಚಕ ದಲಿತರು ದೇವಾಲಯ ಪ್ರವೇಶಿಸದಂತೆ ಹೀಯಾಳಿಸುತ್ತಾನೆ ಎಂಬ ಆರೋಪ ಕೇಳಿಬಂದಿತ್ತು. ತಹಶೀಲ್ದಾರ್ ವಿಭಾವಿದ್ಯಾ ರಾಥೋಡ್, ಡಿವೈಎಸ್‌ಪಿ ರವಿ, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌ ಸಾಧಿಕ್ ಪಾಷ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರೇಮ ಹಾಗೂ ಸಹಾಯಕ ನಿರ್ದೇಶಕ ಉಮಾಪತಿ, ಕಂದಾಯ ನಿರೀಕ್ಷಕ ನರಸಿಂಹ ಭೇಟಿ ನೀಡಿ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದರು.

ದೇವಸ್ಥಾನ ಸಾರ್ವಜನಿಕರ ಸ್ವತ್ತು. ಯಾರು ಬೇಕಾದರೂ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಬಹುದು. ಅಸ್ಪೃಶ್ಯತೆ ಆಚರಣೆ ಸಂವಿಧಾನ ವಿರೋಧಿಯಾಗಿದ್ದು, ತಾರತಮ್ಯ ನಡೆಸುವವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇಲ್ಲಿನ ದಲಿತ ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯಸುರೇಶ್, ಪಿಡಿಒ ಸೌಮ್ಯ, ಗ್ರಾಮ ಪಂಚಾಯಿತಿ ಸದಸ್ಯ ಮುರಳಿ, ರಾಜ್ಯ ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಎಸ್.ಯು.ರಮೇಶ್, ಪ್ರಜಾ ವಿಮೋಚನಾ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಗೂಳ್ಯ ಹನುಮಣ್ಣ ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.