ದೊಡ್ಡಬಳ್ಳಾಪುರ: ಅನುಕೂಲಸ್ಥ ರೈತರನ್ನು ನಂಬಿಸಿ ಒಂದಕ್ಕೆ ಎರಡು ಪಟ್ಟು ಹಣ ನೀಡುವ ಆಸೆ ತೋರಿಸಿ ಮೀನು ಮರಿಗಳನ್ನು ನೀಡಿರುವ ಆಂಧ್ರಪ್ರದೇಶದ ಮೂಲದವರು ಈಗ ರೈತರನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಭಕ್ತರಹಳ್ಳಿ ಗ್ರಾಮದ ರೈತ ಬಿ.ಸಿ.ನಾರಾಯಣಸ್ವಾಮಿ, ನೀರಾವರಿ ಸೌಲಭ್ಯ ಹೊಂದಿರುವ ರೈತರು ₹5ಲಕ್ಷ ಠೇವಣಿ ನೀಡಿದರೆ ಸುಮಾರು 50 ಅಡಿಯಷ್ಟು ವಿಸ್ತೀರ್ಣದ ಎರಡು ನೀರು ಸಂಗ್ರಹದ ತೊಟ್ಟಿಗಳನ್ನು ನಿರ್ಮಿಸಿ, ಈ ತೊಟ್ಟಿಗಳಲ್ಲಿ ಮೀನು ಸಾಕಣೆ ಮಾಡಲು 30 ಸಾವಿರ ಮೀನು ಮರಿಗಳನ್ನು ಹಣ ಪಡದವರೇ ನೀಡಿದ್ದರು.
ಮೀನಿನ ಮರಿಗಳಿಗೆ ಅಗತ್ಯ ಇರುವ ಆಹಾರ, ಔಷಧಿ ಮಾಹಿತಿ ನೀಡುತ್ತಿದ್ದರು. 10ತಿಂಗಳು ಮೀನು ಸಾಕಾಣಿಕೆ ಮಾಡಿ ನೀಡಿದರೆ ₹10 ಲಕ್ಷ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು.
ಆದರೆ, ಎರಡು ತಿಂಗಳಿಂದ ಮರಿಗಳಿಗೆ ಆಹಾರ ನೀಡದೆ ಈ ಕಡೆಗೂ ಬಾರದೆ ಫೋನ್ ಕರೆ ಸ್ವೀಕರಿಸಲಿಲ್ಲ. ಎರಡು ದಿನಗಳ ಹಿಂದೆಯಷ್ಟೇಮೀನು ಮರಿಗಳಿಗೆ ಫೀಡ್ (ಆಹಾರ) ಚೀಲ ಕಳುಹಿಸಿದ್ದರು. ಮೊದಲ ದಿನ ಫೀಡ್ ನೀಡಿದಾಗ ಸುಮಾರು 30 ಮೀನುಗಳು ಮಾತ್ರ ಮೃತಪಟ್ಟು ತೇಲಾಡುತ್ತಿದ್ದವು. ಭಾನುವಾರ ಫೀಡ್ ನೀಡಿದ ನಂತರ ಎಲ್ಲ ಮೀನುಗಳು ಮೃತಪಟ್ಟು ತೇಲಾಡುತ್ತಿವೆ.
ಮೀನು ಮರಿ, ಫೀಡ್ ನೀಡಿದವರಿಗೆ ಮಾಹಿತಿ ನೀಡಲು ಕರೆ ಮಾಡಿದರೆ ಮೊಬೈಲ್ ಸ್ವೀಚ್ ಆಫ್ ಮಾಡಲಾಗಿದೆ. ಇದು ಕೇವಲ ಒಬ್ಬ ರೈತರ ಪಾಡಷ್ಟೇ ಅಲ್ಲ ದೊಡ್ಡಬೆಳವಂಗಲ ಭಾಗದ ಬಹುತೇಕ ರೈತರು ಇದೇ ರೀತಿ ಮೋಸಕ್ಕೆ ಒಳಗಾಗಿದ್ದಾರೆ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.