ವಿಜಯಪುರ: ಲಾಕ್ಡೌನ್ ಸಡಿಲ
ಗೊಂಡು ತಿಂಗಳಾಗುತ್ತಾ ಬಂದಿದ್ದರೂ ರೇಷ್ಮೆಗೂಡಿನ ಬೆಲೆ ಏರಿಕೆಯಾಗದ ಕಾರಣ ಬೆಳೆಗಾರರು ಕಂಗಾಲಾಗಿದ್ದಾರೆ.
ಲಾಕ್ಡೌನ್ ಆರಂಭವಾದ ಸಮಯದಲ್ಲಿ ಮಾರುಕಟ್ಟೆ ಮುಚ್ಚಿದ್ದ
ರಿಂದ ಗೂಡು ಖರೀದಿ ಮಾಡುವವರಿಲ್ಲದ ಕಾರಣ ನೂಲು ಬಿಚ್ಚಾಣಿಕೆದಾರರು ಕೇಳಿದಷ್ಟು ಹಣಕ್ಕೆ ಗೂಡು ಮಾರಾಟ ಮಾಡಿದ್ದರು. ಹೀಗಾಗಿ ಕೆಲವು ಮಂದಿ ರೇಷ್ಮೆಗೂಡು ಬೆಳೆಯುವುದರಿಂದ ಹಿಂದೆ ಸರಿದಿದ್ದಾರೆ. ಇದನ್ನೇ ಮೂಲ ಕಸುಬನ್ನಾಗಿ ನೆಚ್ಚಿಕೊಂಡಿದ್ದವರು ಗೂಡು ಬೆಳೆದು ಮಾರುಕಟ್ಟೆಗೆ ತೆಗೆದುಕೊಂಡು ಬರುತ್ತಿದ್ದಾರಾದರೂ ₹ 250 ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ದುಸ್ಥಿತಿ ಬಂದೊದಗಿದೆ.
350 ಲಾಟುಗಳು ಬರುತ್ತಿದ್ದ ಗೂಡಿನ ಪ್ರಮಾಣ ಈಗ ಕೇವಲ 68 ಲಾಟುಗಳಿಗೆ ಇಳಿಕೆಯಾಗಿದ್ದರೂ ಗೂಡು ಕೇಳುವವರಿಲ್ಲ. ಕೆಲವು ರೈತರು ರೀಲರ್ಗಳ ಮನೆಗಳ ಬಳಿಗೆ ತೆಗೆದು
ಕೊಂಡು ಹೋಗಿ ಕೊಟ್ಟು ಬರುತ್ತಿ
ದ್ದಾರೆ.ರೇಷ್ಮೆ ನೂಲು ಮಾರಾಟ ಮಾಡಿದ ನಂತರ ರೀಲರ್ಗಳು ಗೂಡಿನ ಹಣ ಪಾವತಿಸುತ್ತಿದ್ದಾರೆ. ಬೇರೆ ದಾರಿಯಿಲ್ಲದೆ ಈ ರೀತಿ ನಾವು ಕೇಳಿದಷ್ಟು ಬೆಲೆಗೆ ಮಾರಾಟ ಮಾಡಬೇಕಾಗಿದೆ ಎಂದು ರೈತ ಮುನಿಆಂಜಿನಪ್ಪ ಬೇಸರ ವ್ಯಕ್ತಪಡಿಸಿದರು.
ನೂಲು ಬಿಚ್ಚಾಣಿಕೆದಾರ (ರೀಲರ್) ನಿಸಾರ್ ಮಾತನಾಡಿ, ಸಾಲ ಮಾಡಿ ಇಲ್ಲಿಂದ ಗೂಡು ಖರೀದಿಸಿ ನೂಲು ಬಿಚ್ಚಾಣಿಕೆ ಮಾಡಿ ಇಟ್ಟಿದ್ದೇವೆ. ಅದಕ್ಕೆ ಬೆಲೆ ಇಲ್ಲದೇ ಮಾರಾಟ ಮಾಡಲಿಕ್ಕೂ ಸಾಧ್ಯವಾಗಿಲ್ಲ. ಮನೆಗಳಲ್ಲಿದ್ದ ಚಿನ್ನಾಭರಣಗಳನ್ನು ಗಿರವಿ ಇಟ್ಟಿದ್ದೇವೆ. ಕೈ ಸಾಲಗಳು ಹೆಚ್ಚಾಗಿವೆ. ಸರ್ಕಾರ, ದುಡಿಮೆಗೆ ಬಂಡವಾಳ ಕೊಡುವುದಾಗಿ ಹೇಳಿತ್ತು. ಅದನ್ನೂ ಕೊಡಲಿಲ್ಲ ಎಂದು ಹೇಳಿದರು.
ರೈತ ರಾಮಕೃಷ್ಣ ಮಾತನಾಡಿ, ಸರ್ಕಾರ, ನಷ್ಟವಾಗುತ್ತಿರುವ ರೈತರಿಗೆ ಕನಿಷ್ಟ ಪ್ರೋತ್ಸಾಹಧನವನ್ನಾದರೂ ನೀಡಬೇಕು. ಮೊದಲೇ ಯಾವುದೇ ಕೆಲಸಕಾರ್ಯಗಳಿಲ್ಲದೆ ಸಂಕಷ್ಟಕ್ಕೆ ಒಳಗಾಗಿರುವ ನಮ್ಮ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.