ADVERTISEMENT

ಪರಿಶ್ರಮ, ಬದ್ಧತೆ, ಕೌಶಲದಿಂದ ಉನ್ನತ ಸ್ಥಾನ

ಪಂಡಿತ್ ದೀನದಯಾಳ್ ಉಪಾಧ್ಯಾಯರ ಸಮರ್ಪಣಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 14:07 IST
Last Updated 15 ಫೆಬ್ರುವರಿ 2020, 14:07 IST
ವಿಜಯಪುರದಲ್ಲಿ ದೀನದಯಾಳ್ ಉಪಾಧ್ಯಾಯ ಅವರ ಸಮರ್ಪಣಾ ದಿನವನ್ನು ಬಿಜೆಪಿ ಮುಖಂಡರು ಪುಷ್ಪಾರ್ಚನೆಯ ಮೂಲಕ ಆಚರಿಸಿದರು
ವಿಜಯಪುರದಲ್ಲಿ ದೀನದಯಾಳ್ ಉಪಾಧ್ಯಾಯ ಅವರ ಸಮರ್ಪಣಾ ದಿನವನ್ನು ಬಿಜೆಪಿ ಮುಖಂಡರು ಪುಷ್ಪಾರ್ಚನೆಯ ಮೂಲಕ ಆಚರಿಸಿದರು   

ವಿಜಯಪುರ: ಸಂವೇದನೆ, ಪರಿಶ್ರಮ, ಬದ್ಧತೆ ಮತ್ತು ಕುಶಲತೆ ಇದ್ದರೆ ಉನ್ನತ ಯಾವುದೇ ಸ್ಥಾನವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಹೇಳಿದರು.

‌ಇಲ್ಲಿನ ಪ್ರವಾಸಿಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಸಮರ್ಪಣಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪಂಡಿತ್ ದೀನದಯಾಳ್ ಉಪಾಧ್ಯಾಯರು ಭಾರತೀಯ ಜನತಾ ಪಾರ್ಟಿಯನ್ನು ಬಲಪಡಿಸುವಲ್ಲಿ ಶ್ರಮ ವಹಿಸಿದ್ದಾರೆ. ಅವರ ಜೀವನ, ಆದರ್ಶ ಮತ್ತು ಗುಣಗಳನ್ನು ಪ್ರತಿಯೊಬ್ಬ ಕಾರ್ಯಕರ್ತ ಮೈಗೂಡಿಸಿಕೊಳ್ಳಬೇಕು. ದೀನ್ ದಯಾಳರು, ಕ್ರಿಯಾಶೀಲತೆ ಮತ್ತು ವೈಚಾರಿಕತೆಯಿಂದ ಬದುಕಿದವರು. ಯಾವುದೇ ಸ್ಥಾನವನ್ನು ಬಯಸದೇ ಸಾಮಾನ್ಯ ವ್ಯಕ್ತಿಯಾಗಿಯೇ ಆಸಾಮಾನ್ಯ ಸಾಧನೆ ತೋರಿದವರು ಎಂದರು.

ADVERTISEMENT

‘ಅವರೊಬ್ಬ ಶ್ರೇಷ್ಠ ಮಹಾಪುರುಷ. ಅವರ ಜೀವನ ಅದರ್ಶಗಳಿಗೆ ನಾವು ಹತ್ತಿರವಾಗಬೇಕು. ಅವರ ಬದುಕಿನ ಗುಣ ಅಳವಡಿಸಿಕೊಳ್ಳಬೇಕು. ಸಾತ್ವಿಕ ಜೀವನ ನಡೆಸಿದ ಅವರು ತನ್ನ ರಾಜಕೀಯ ಜೀವನದ 17 ವರ್ಷದಲ್ಲಿ ಆದರ್ಶವಾಗಿ ಬೆಳೆದವರು. 21 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಅಷ್ಟೂ ವರ್ಷಗಳ ಕಾಲ ನಾನು ಕುಂಟೆಯಲ್ಲಿನ ಕಪ್ಪೆಯಾಗಿದ್ದೆ, ಈಗ ಸಮುದ್ರದ ಕಪ್ಪೆಯಾಗಿದ್ದೇನೆ’ ಎಂದರು.

ಮುಖಂಡ ಬೂದಿಗೆರೆ ನಾರಾಯಣಸ್ವಾಮಿ ಮಾತನಾಡಿ, ದಕ್ಷಿಣ ಭಾರತಕ್ಕೂ ಜನಸಂಘದ ಕಹಳೆಯನ್ನು ಹೊತ್ತು ತಂದ ದೀನ ದಯಾಳರು ಕ್ಯಾಲಿಕಟ್ ಅಧಿವೇಶನದಲ್ಲಿ ನುಡಿದ ಮಾತುಗಳು ಇಂದಿಗೂ ಪ್ರಖ್ಯಾತವಾಗಿವೆ. ನಾವು ಯಾವುದೇ ಪಂಗಡಕ್ಕೆ ಇಲ್ಲವೇ ಜನಾಂಗಕ್ಕೆ ಮೀಸಲಾಗದೆ ಇಡೀ ದೇಶದ ಸೇವೆಗೆ ಕಂಕಣಬದ್ಧನಾಗಿದ್ದೇನೆ. ಈ ದೇಶದ ಪ್ರತಿಯೊಬ್ಬರಲ್ಲಿ, ನಮ್ಮ ರಕ್ತ ಕಣಗಳಲ್ಲಿ, ಮಾಂಸ ಖಂಡಗಳಲ್ಲಿ ಸಮ್ಮಿಳಿತಗೊಳ್ಳಬೇಕು ಎಂದು ಆಶಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬೊಮ್ಮವಾರ ಸುಂದರೇಶ್ ಮಾತನಾಡಿ, ದೀನ್ ದಯಾಳ್ ಅವರು ಉತ್ತಮ ಲೇಖಕ, ಪತ್ರಕರ್ತ, ರಾಜಕಾರಣಿ, ಭಾಷಣಕಾರರಾಗಿದ್ದರು. ಜೀವನದದ್ದುಕ್ಕೂ ದೇಶ, ಜನ, ದೇಶದ ಘನತೆಯನ್ನು ಎತ್ತಿ ಹಿಡಿಯುವ ಬಗ್ಗೆ ಚಿಂತನೆ ನಡೆಸಿದರು. ಸ್ನೇಹಶೀಲರು, ಚಿಂತನಾಶೀಲರಾಗಿದ್ದ ಅವರು, ನಿಸ್ವಾರ್ಥ ನಾಯಕನ ತತ್ವ ಸಿದ್ಧಾಂತವನ್ನು ಯುವ ಪೀಳಿಗೆಯ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಾಗಬೇಕು ಎಂದರು.

ನಗರ ಘಟಕದ ಅಧ್ಯಕ್ಷ ಚ.ವಿಜಯಬಾಬು ಮಾತನಾಡಿದರು. ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ರವಿಕುಮಾರ್, ಮುಖಂಡರಾದ ರಾಮಕೃಷ್ಣ ಹೆಗಡೆ, ರಾಮುಭಗವಾನ್, ದೇವರಾಜಪ್ಪ, ವೆಂಕಟೇಶ್‌ಪ್ರಭು, ರಾಘವ, ಸೊಣ್ಣೇಗೌಡ, ಡಿ.ಎಂ.ಮುನೀಂದ್ರ, ನಟರಾಜ್, ಪ್ರಭಾಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.