ADVERTISEMENT

ಚನ್ನರಾಯಪಟ್ಟಣ ಭೂ ಸ್ವಾಧೀನ ಹೋರಾಟಕ್ಕೆ 704 ದಿನ; ಸಿಎಂ ಮಾತು ಉಳಿಸಿಕೊಳ್ಳಲಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 14:13 IST
Last Updated 9 ಮಾರ್ಚ್ 2024, 14:13 IST
ದೇವನಹಳ್ಳಿಯಲ್ಲಿ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸದಸ್ಯರು ಭೂ ಸ್ವಾಧೀನ ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಿದರು
ದೇವನಹಳ್ಳಿಯಲ್ಲಿ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸದಸ್ಯರು ಭೂ ಸ್ವಾಧೀನ ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಿದರು   

ದೇವನಹಳ್ಳಿ: ಭೂಮಿಯ ಉಳಿವಿಗಾಗಿ ಕಳೆದ ವರ್ಷದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹೋರಾಟನಿರತರನ್ನು ಭೇಟಿ ಮಾಡಿದ್ದ ಸಿದ್ದರಾಮಯ್ಯ ಅವರು, ಅಧಿಕಾರಕ್ಕೆ ಬಂದರೇ ಭೂ ಸ್ವಾಧೀನ ಕೈಬಿಡುತ್ತೇವೆ ಎಂದು ಭರವಸೆ ನೀಡಿದ್ದರು. ಅವರು ರೈತರಿಗೆ ನೀಡಿರುವ ಮಾತು ಉಳಿಸಿಕೊಳ್ಳಿ ಎಂದು ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸದಸ್ಯರು ಆಗ್ರಹಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಶ್ರೀನಿವಾಸ್‌, 13 ಹಳ್ಳಿಗಳ ನೂರಾರು ರೈತರು ಕೃಷಿ ಭೂಮಿಯ ಉಳಿವಿಗಾಗಿ 704 ದಿನದಿಂದ ಧೀರ್ಘ ಹೋರಾಟ ಮಾಡುತ್ತಿದ್ದರೂ, ನಮ್ಮ ಧ್ವನಿ ಕೇಳುವವರು ಯಾರು ಇಲ್ಲದಂತಾಗಿದೆ ಎಂದು ಬೇಸರಿಸಿದರು.

ಚನ್ನರಾಯಪಟ್ಟಣದ ಗ್ರಾ.ಪಂ ಅಧ್ಯಕ್ಷ ಮಾರೇಗೌಡ ಮಾತನಾಡಿ, ವಿವಿಧ ಕಾಮಗಾರಿಗಳ ಭೂಮಿ ಚಾಲನೆ ನೀಡಲು ಮಾರ್ಚ್‌ 11ರಂದು(ಸೋಮವಾರ) ಮುಖ್ಯಮಂತ್ರಿ ದೇವನಹಳ್ಳಿಗೆ ಆಗಮಿಸುತ್ತಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವ ಕುರಿತು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು‌.

ADVERTISEMENT

ಪ್ರತಿ ಬಾರಿ ರೈತರ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಭೇಟಿ ಮಾಡಿದಾಗ, ಸರ್ಕಾರ ರೈತ ಪರ ನಿಲುವು ಕೈಗೊಳ್ಳುತ್ತದೆ ಎಂದು ಆಶ್ವಾಸನೆ ನೀಡಿದ್ದಾರೆ. ಸೋಮವಾರದ ಕಾರ್ಯಕ್ರಮದಲ್ಲಿ ‘ನುಡಿದಂತೆ ನಡೆದು ದೇವನಹಳ್ಳಿ ರೈತರ ಕಣ್ಣೀರು ಹೊರೆಸಲಿ’ ಎಂದು ಮನವಿ ಮಾಡಿದರು.

ವಕೀಲ ಸಿದ್ದಾರ್ಥ್‌ ಮಾತನಾಡಿ, ಕಾಂಗ್ರೆಸ್‌ ಮುಖಂಡರು ರೈತರೊಂದಿಗೆ ಚೆಲ್ಲಾಟ ಆಡುವುದನ್ನು ಬಿಟ್ಟುಬಿಡಿ. ಸೋಮವಾರದ ಸಮಾವೇಶವೇ ಕಡೆಯ ಪರೀಕ್ಷೆಯಾಗಿದೆ. ಶತಾಯ ಗತಾಯ ಭೂಮಿ ನೀಡುವ ಪ್ರಶ್ನೆಯೇ ಇಲ್ಲ. ಕಾರ್ಪೋರೆಟ್‌ ಕಪಿ ಮುಷ್ಠಿಯಿಂದ ಹೊರಬಂದು ಜನಸೇವಕರಾಗಿ ಕೆಲಸ ಮಾಡಿ ಇಲ್ಲದಿದ್ದರೇ ಕೆ.ಎಚ್‌.ಮುನಿಯಪ್ಪ ಅವರನ್ನು ವಾಪಸ್‌ ಕೋಲಾರಕ್ಕೆ ಕಳುಹಿಸುತ್ತೇವೆ ಎಂದು ಹೇಳೀದರು.

ಮುಖಂಡರಾದ ಅಶ್ವತ್ಥಪ್ಪ, ನಂಜಪ್ಪ, ಮಂಜುನಾಥ್, ಸುಬ್ರಮಣಿ, ದೇವರಾಜು, ಮೋಹನ್, ಲಕ್ಷ್ಮಮ್ಮ, ಪ್ರಕಾಶ್, ನಾಗರಾಜ್, ಚೀಮಾಚನಹಳ್ಳಿ‌ ರಮೇಶ್ ಇದ್ದರು.

ಸಿಎಂ ಭೇಟಿಗೆ ಅವಕಾಶ ಕಲ್ಪಿಸಿ

ಹೋರಾಟಕ್ಕಲ್ಲ ಈ ಹಿಂದೆ ಟ್ರ್ಯಾಕ್ಟರ್‌ ರ‍್ಯಾಲಿ ಮಾಡದಂತೆ ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರು ಮನವಿ ಮಾಡಿದ್ದರು. ಅವರ ಮಾತಿಗೆ ಗೌರವ ನೀಡಿ ರಾಲಿ ನಡೆಸಲಿಲ್ಲ ಈಗ ರೈತರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲು ಜಿಲ್ಲಾಡಳಿತವೇ ಅವಕಾಶ ಮಾಡಿಕೊಡಬೇಕು. ನಾವು ಮನವಿ ಮಾಡಿಕೊಳ್ಳುತ್ತೇವೆ ಹೊರತು ಹೋರಾಟ ಮಾಡುವುದಿಲ್ಲ ಎಂದು ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸದಸ್ಯರು ಕೋರಿದರು.

ಒಂದು ವೇಳೆ ಇದು ಸಾಧ್ಯವಾಗದಿದ್ದರೆ ರೈತರನ್ನು ಬಂಧಿಸಿದರೂ ಲಾಠಿ ಚಾರ್ಜ್‌ ಮಾಡಿದರೂ ಹೆದರುವುದಿಲ್ಲ. ಸಿ.ಎಂ ಭೇಟಿಗೆ ಯತ್ನಿಸುತ್ತೇವೆ. ಹೀಗಾಗಿ ಅನ್ನದಾತರನ್ನು ಶಾಂತಿಯುತವಾಗಿ ನಡೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕೆಐಎಡಿಬಿ ಅಧಿಕಾರಿಗಳ ತೆರೆಮರೆ ಕೆಲಸ ಭೂಮಿ ಉಳಿಸಿಕೊಳ್ಳಲು ಸುದೀರ್ಘ ಹೋರಾಟ ಮಾಡುತ್ತಿದ್ದರೂ ಅದನ್ನು ಪರಿಗಣಿಸಿಸದೇ ವಿಶೇಷ ಭೂ ಸ್ವಾಧೀನ ಅಧಿಕಾರಿ ತೆರೆಮರೆಯಲ್ಲಿಯೇ ಭೂ ಸ್ವಾಧೀನಕ್ಕೆ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳುತ್ತಿದ್ದಾರೆ. 13 ಹಳ್ಳಿಗಳ ಪೈಕಿ ಹ್ಯಾಡಾಳ ಗೋಕರೆ ಬಚ್ಚಹಳ್ಳಿ ಗ್ರಾಮದ ಕಡತವನ್ನು ತಾಲ್ಲೂಕು ಕಚೇರಿಯಿಂದ ವರ್ಗಾವಣೆ ಮಾಡುವಂತೆ ಒತ್ತಡ ತರುತ್ತಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ಮೊಂಡುತನ ಪ್ರದರ್ಶಿಸಿದರೇ ಮುಂದಿನ ಸಾವು ನೋವುಗಳಿಗೆ ಕಾಂಗ್ರೆಸ್ ಸರ್ಕಾರವೇ ಹೊಣೆಯಾಲಿದೆ ಎಂದು ಪ್ರಮೋದ್ ಸದಸ್ಯರು ಎಚ್ಚರಿಕೆ ನೀಡಿರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.