
ದೇವನಹಳ್ಳಿ: ಪಟ್ಟಣದ ಹಲವೆಡೆ ರಸ್ತೆ ಬದಿಗಳಲ್ಲಿ ಇದ್ದ ಕಸ, ಗಿಡ ಗಂಟಿ ತೆರವು ಹಾಗೂ ಸ್ವಚ್ಛತೆ ಕಾರ್ಯ ಮಾಡಲು ಹಿಂಜರಿಯುತ್ತಿದದ ದೇವನಹಳ್ಳಿ ಪುರಸಭೆ ಸಿಬ್ಬಂದಿಯೂ ಶುಕ್ರವಾರ ಏಕಾಏಕಿ ಪಟ್ಟಣದ ಸೂಲಿಬೆಲೆ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛ ಮಾಡಿರುವುದು ಸ್ಥಳೀಯರಲ್ಲಿ ಆಶ್ಚರ್ಯ ಉಂಟು ಮಾಡಿದೆ.
ಶನಿವಾರ ಸೂಲಿಬೆಲೆ ರಸ್ತೆಯಲ್ಲಿ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ (ಬಯಪ್ಪ)ದ ನೂತನ ಕಚೇರಿಯನ್ನು ಉದ್ಘಾಟನೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸುತ್ತಿರುವ ಕಾರಣ ಅವಸರದಲ್ಲಿ ಸ್ವಚ್ಛತಾ ಕಾರ್ಯಗಳು ನಡೆದಿವೆ.
ಡಿ.ಕೆ.ಶಿವಕುಮಾರ್ ಪಟ್ಟಣಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡರು ಸೇರಿದಂತೆ ಬೈಯಪ್ಪ ಅಧ್ಯಕ್ಷ ವಿ.ಶಾಂತಕುಮಾರ್ ಹಾಗೂ ಅವರ ಬೆಂಬಲಿಗರು ಸೂಲಿಬೆಲೆ ರಸ್ತೆಯ ತುಂಬೆಲ್ಲಾ ಬ್ಯಾನರ್, ಬಂಟಿಂಗ್ಸ್ ಹಾಕಿ ಸ್ವಾಗತ ಕೋರಿದ್ದಾರೆ.
ರಸ್ತೆಯ ಇಕ್ಕೆಲಗಳಲ್ಲಿ ತುಂಬಿಕೊಂಡಿದ್ದ ಚರಂಡಿ, ರಸ್ತೆಯ ಬದಿಯ ಕಸ, ಅನಧಿಕೃತವಾಗಿ ಇದ್ದ ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳಿಂದ ಉಂಟಾಗುತ್ತಿದ್ದ ಸಮಸ್ಯೆಗಳ ಕುರಿತು ಸಾಮಾಜಿಕ ಜಾಲತಾಣ, ದಿನಪತ್ರಿಕೆಗಳಲ್ಲಿ ಸಾಲು ಸಾಲು ಸುದ್ದಿ ಬಿತ್ತರವಾದರೂ ಎಚ್ಚೆತ್ತುಕೊಳ್ಳದ ಪುರಸಭೆಯೂ ಶುಕ್ರವಾರ ದಿನವಿಡಿ ರಸ್ತೆಯನ್ನು ಅಚ್ಚುಕಟ್ಟು ಮಾಡಿದೆ.
ಪಟ್ಟಣದ ತುಂಬೆಲ್ಲಾ ಹಾಕಲಾಗಿರುವ ಬ್ಯಾನರ್, ಬಂಟಿಂಗ್ಸ್ಗಳಿಗೆ ಅನುಮಾತಿ ನೀಡಿದರಾ? ನಿಷೇಧಿತ ಪ್ಲಾಸ್ಟಿಕ್ ಬಳಸಿ ಫ್ಲೆಕ್ಸ್ಗಳನ್ನು ಹಾಕಲು ಅನುಮತಿ ನೀಡಿದವರು ಯಾರು? ಎಂಬುದಕ್ಕೆ ಪುರಸಭೆಯೇ ಉತ್ತರ ನೀಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.