ಹೊಸಕೋಟೆ: ‘ದೇಶ ಕೊರೊನಾ ಸಮಸ್ಯೆಗೆ ಒಳಗಾಗಿರುವ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಬಹಳಷ್ಟು ಸೇವಾ ಕಾರ್ಯ ಮಾಡುತ್ತಿರುವುದು ಸಂತೋಷದ ಸಂಗತಿ’ ಎಂದು ನಗರದ ಸರ್ಕಾರಿ ಆಸ್ಪತ್ರೆಯ ಆರೋಗ್ಯ ಸಮಿತಿಯ ಸದಸ್ಯ ಬಾಲಚಂದ್ರ ಹೇಳಿದರು.
ಅವರು ನಗರದ ಆಸ್ಪತ್ರೆಗೆ ಅಭ್ಯುದಯ ಸಂಸ್ಥೆಯಿಂದ ಆಮ್ಲಜನಕ ಸಾಂದ್ರಕ ಸೇರಿದಂತೆ ಹಲವಾರು ವೈದ್ಯಕೀಯ ಪರಿಕರ ಸ್ವೀಕರಿಸಿ ಮಾತನಾಡಿದರು.
ಕೊರೊನಾ ಎರಡನೇ ಅಲೆಯು ಪ್ರಾರಂಭವಾದಾಗಿನಿಂದ ಸಂಘದ ಸ್ವಯಂಸೇವಕರು ಆಸ್ಪತ್ರೆಗಳಲ್ಲಿ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುತ್ತಿದ್ದಾರೆ. ಮೃತರ ಅಂತ್ಯಸಂಸ್ಕಾರದವರೆಗಿನ ಎಲ್ಲಾ ರೀತಿಯ ಕೆಲಸ ಮಾಡುತ್ತಿದ್ದಾರೆ. ಹೋಮ್ ಕ್ವಾರಂಟೈನ್ನಲ್ಲಿ ಇರುವವರಿಗೆ ಔಷಧಿ ಮತ್ತು ಆಹಾರ ಪೂರೈಸುತ್ತಾರೆ ಮಾನವೀಯತೆ ಮೆರೆಯುತ್ತಿದ್ದಾರೆ ಎಂದರು.
ತಾಲ್ಲೂಕಿನ ಜಡಗೇನಹಳ್ಳಿ ಕ್ವಾರಂಟೈನ್ ಕೇಂದ್ರದಲ್ಲಿ ಕಳೆದ 10 ದಿನಗಳಿಂದ ಐವರು ವೈದ್ಯರು ಪ್ರತಿನಿತ್ಯ ಕೆಲಸ ಮಾಡುತ್ತಿದ್ದಾರೆ. ಅವರು ಸಂಘದ ಪ್ರೇರಣೆಯಿಂದ ನಿಸ್ವಾರ್ಥವಾಗಿ ಸೇವೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಎಲ್ಲರೂ ಸೇರಿ ಕೊರೊನಾ ಸೋಂಕು ನಿಯಂತ್ರಿಸಬೇಕಾಗಿದೆ. ಇದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ ಎಂದು
ಹೇಳಿದರು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸತೀಶ್, ಅಭ್ಯುದಯ ಸಂಸ್ಥೆಯ ಚಂದ್ರಶೇಖರ್ ಹಾಗೂ ಆರ್ಎಸ್ಎಸ್ ಕಾರ್ಯಕರ್ತರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.