ದೇವನಹಳ್ಳಿ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ವತಿಯಿಂದ 2020–21ನೇ ಸಾಲಿನಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ರೂಪಿಸಿದ ಸಾಮರ್ಥ್ಯಕ್ಕನುಗುಣವಾದ ಕ್ರೆಡಿಟ್ ಯೋಜನೆ (ಪಿಎಲ್ಪಿ) ಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್.ಎಂ.ನಾಗರಾಜ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಪ್ರಬಂಧಕ ಪಿ. ಮೋಹನರೆಡ್ಡಿ ಮಾತನಾಡಿ, ‘ಸಾಮರ್ಥ್ಯಕ್ಕನುಗುಣವಾದ ಕ್ರೆಡಿಟ್ ಯೋಜನೆ (ಪಿಎಲ್ಪಿ) ಸ್ಥಳೀಯ ಅಸ್ತಿತ್ವದಲ್ಲಿರುವ ಮೂಲಭೂತ ಉದ್ದೇಶಗಳ ಆಧಾರದ ಮೇಲೆ ನಿರ್ಮಿಸಲಾಗಿದೆ. ಮೂಲ ಸೌಕರ್ಯಗಳ ಆಧಾರದ ಮೇಲೆ ಭೌತಿಕ ಸಾಮರ್ಥ್ಯಕ್ಕನುಗುಣವಾಗಿ, ದೀರ್ಘ ಕಾಲಾವಧಿಯ ಲಭ್ಯತೆಗೆ ಪೂರಕವಾಗುವಂತೆ ಹಾಗೂ ಮಾರುಕಟ್ಟೆಯ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಂಕ್ಷಿಪ್ತ ವಿಧಾನಗಳನ್ನಾಧರಿಸಿ ನಿರ್ಮಿಸಲಾಗಿದೆ’ ಎಂದು ತಿಳಿಸಿದರು.
ಆದ್ಯತೆ ವಲಯದ ಸಾಮರ್ಥ್ಯಕ್ಕಗನುಗುಣವಾದ ಕ್ರೆಡಿಟ್ ಯೋಜನೆ 2020-21ನೇ ಸಾಲಿಗೆ ₹ 2.89 ಲಕ್ಷಕ್ಕೆ ನಿಗಧಿಪಡಿಸಲಾಗಿದೆ. ಇದು ಕಳೆದ ವರ್ಷದ (2019-20ನೇ ಸಾಲಿನ) ಯೋಜನೆಗಿಂತ ಶೇ 11ರಷ್ಟು ಹೆಚ್ಚಿನ ಪ್ರಮಾಣದಲ್ಲಿದೆ. ಪ್ರಮುಖ ಕ್ಷೇತ್ರಗಳಾದ ಕೃಷಿಗೆ ₹ 2.17 ಲಕ್ಷ, ಎಂಎಸ್ಎಂಇ ₹ 3.34 ಲಕ್ಷ, ವಸತಿ ₹ 9.21 ಲಕ್ಷಗಳು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ₹ 1.85 ಲಕ್ಷ ಪಾಲುದಾರಿಕೆ ಹೊಂದಿದ್ದು ಇದು 2020-21ನೇ ಸಾಲಿನ ಸಾಮರ್ಥ್ಯಕ್ಕಗನುಗುಣವಾದ ಕ್ರೆಡಿಟ್ ಯೋಜನೆಯ ಪ್ರಮುಖ ಅಂಶಗಳಾಗಿವೆ.
ಜಿಲ್ಲಾ ಪಂಚಾಯಿತಿ ಡಿ.ಆರ್.ಡಿ.ಎ. ವಿಭಾಗದ ಯೋಜನಾ ನಿರ್ದೇಶಕ ಡಾ.ಕೆ.ಎಚ್.ಶಿವರುದ್ರಪ್ಪ ಹಾಗೂ ಅಘ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಮಧುಸೂಧನ್.ಎಂ.ಸಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.