ತೂಬಗೆರೆ (ದೊಡ್ಡಬಳ್ಳಾಪುರ): ‘ತೂಬಗೆರೆ ಹೋಬಳಿಯನ್ನು ಹೊಸದಾಗಿ ರಚನೆಯಾಗುತ್ತಿರುವ ಮಂಚೇನಹಳ್ಳಿ ತಾಲ್ಲೂಕಿಗೆ ಸೇರ್ಪಡೆ ಮಾಡುವ ಕುರಿತಂತೆ ಪ್ರಸ್ತಾವನೆ ಬಂದಲ್ಲಿ ಇದಕ್ಕೆ ನಮ್ಮ ವಿರೋಧ ಇದೆ. ಈ ಬಗ್ಗೆ ನಮ್ಮ ಗಮನಕ್ಕೆ ತರುವಂತೆ ಕಂದಾಯ ಸಚಿವರಿಗೆ ತಿಳಿಸಲಾಗುವುದು’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.
ತೂಬಗೆರೆ ಸಮುದಾಯ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ತೂಬಗೆರೆ ಹೋಬಳಿಯನ್ನು ಮಂಚೇನಹಳ್ಳಿ ತಾಲ್ಲೂಕಿಗೆ ಸೇರ್ಪಡೆಗೊಳಿಸುವ ಕುರಿತಂತೆ ಇದುವರೆಗೂ ಎಲ್ಲೂ ಅಧಿಕೃತವಾಗಿ ಸರ್ಕಾರ ಪ್ರಕಟಿಸಿಲ್ಲ. ಆದರೂ ಈ ಭಾಗದ ಜನತೆ ವಿರೋಧಿಸುತ್ತಿರುವುದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಈ ಬಗ್ಗೆ ಯಾವುದೇ ಪ್ರಸ್ತಾವನೆಯೇ ಇಲ್ಲವಾಗಿರುವಾಗ ಆತಂಕ ಪಡುವ ಅಗತ್ಯ ಇಲ್ಲ’ ಎಂದರು.
‘ಮುಂದಿನ ದಿನಗಳಲ್ಲಿ ತೂಬಗೆರೆ ಹೋಬಳಿಯನ್ನು ಮತ್ತೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಿ, ಸೂಲಿಬೆಲೆ ಹೋಬಳಿಯನ್ನು ದೇವನಹಳ್ಳಿ ವಿಧಾನ ಸಭಾ ಕ್ಷೇತ್ರಕ್ಕೆ ಸೇರ್ಪಡೆ ಮಾಡುವ ಅವಕಾಶಗಳಿವೆ. ಆದರೆ ತಾಲ್ಲೂಕು ರಚನೆಗೆ ಒಮ್ಮೆ ಸೇರ್ಪಡೆ ಮಾಡಿದರೆ ತೆಗೆಯುವ ಅವಕಾಶ ಇಲ್ಲ. ಈ ಪ್ರಸ್ತಾವನೆ ಬಂದದ್ದೇ ಆದರೆ ತೂಬಗೆರೆ ಹೋಬಳಿಯನ್ನು ಮಂಚೇನಹಳ್ಳಿ ತಾಲ್ಲೂಕಿಗೆ ಸೇರ್ಪಡೆಗೆ ಪಕ್ಷಾತೀತವಾಗಿ ನಮ್ಮ ವಿರೋಧವಿದ್ದು, ಹೋರಾಟ ಬೆಂಬಲಿಸಲಾಗುವುದು’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಅಪ್ಪಯ್ಯ ಮಾತನಾಡಿ, ‘ಮಂಚೇನಹಳ್ಳಿ ತಾಲ್ಲೂಕಿಗೆ ತೂಬಗೆರೆ ಹೋಬಳಿ ಸೇರ್ಪಡೆ ಮಾಡುತ್ತಿರುವ ಕುರಿತು ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ ಎನ್ನುವ ಆರೋಪ ಸತ್ಯಕ್ಕೆ ದೂರವಾಗಿದೆ. ಈ ಬಗ್ಗೆ ನಾವು ಸಂಬಂಧಪಟ್ಟವರೊಡನೆ ಮಾತನಾಡುತ್ತಿದ್ದೇವೆ. ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಕಂದಾಯ ಸಚಿವರಾದಿಯಾಗಿ ಯಾರನ್ನೇ ಕೇಳಿದರೂ ಈ ಬಗ್ಗೆ ಸ್ಪಷ್ಟ ಸೂಚನೆ ಬಂದಿಲ್ಲ ಎನ್ನುತ್ತಿದ್ದಾರೆ. ಹೋಬಳಿ ಸೇರ್ಪಡೆಗೆ ನಮ್ಮ ವಿರೋಧವಿದೆ. ಇಲ್ಲಿನ ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ಸರ್ಕಾರದ ಗಮನಕ್ಕೆ ತರುವ ಕಾರ್ಯ ಮಾಡಬೇಕಿದೆ’ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟೇಶ್ ಬಾಬು, ಮುಖಂಡರಾದ ನರಸಿಂಹಯ್ಯ, ವೆಂಕಟೇಶ್, ರಾಮಣ್ಣ, ಮುನಿಕೃಷ್ಣ, ಪಾಪಣ್ಣ, ಗೌರೀಶ್, ಮೂರ್ತಿ, ದೇವರಾಜ್, ನರಸೇಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.