ADVERTISEMENT

ಅಶೋಕ ವನದಲ್ಲಿ ಕಂಡ ಕೈರಾತ

ನಟರಾಜ ನಾಗಸಂದ್ರ
Published 9 ನವೆಂಬರ್ 2020, 0:08 IST
Last Updated 9 ನವೆಂಬರ್ 2020, 0:08 IST
ಏಕಾಶಿಪುರದ ಅಶೋಕ ವನದಲ್ಲಿ ಕಂಡ ಕೈರಾತ ಪಕ್ಷಿ
ಏಕಾಶಿಪುರದ ಅಶೋಕ ವನದಲ್ಲಿ ಕಂಡ ಕೈರಾತ ಪಕ್ಷಿ   

ದೊಡ್ಡಬಳ್ಳಾಪುರ: ದೂರದಿಂದ ಥಟ್ಟನೆ ನೋಡಿದರೆ ಕೋಗಿಲೆಯಂತೆ ಕಾಣುತ್ತದೆ. ಆದರೆ ಒಂದಿಷ್ಟು ಹತ್ತಿರದಿಂದ ಸೂಕ್ಷ್ಮವಾಗಿ ಗಮನಿಸಿದರಷ್ಟೇ ಇದು ಕೋಗಿಲೆ ಅಲ್ಲ; ಕೈರಾತ ಎಂದು ತಿಳಿಯುತ್ತದೆ.

ಹೌದು, ತಾಲ್ಲೂಕಿನ ಏಕಾಶಿಪುರದ ಆಂಜನೇಯಸ್ವಾಮಿ ದೇವಾಲಯ ಸಮೀಪ ನಿರ್ಮಿಸಲಾಗಿರುವ ಅಶೋಕ ವನದಲ್ಲಿ ಕೈರಾತ (Blue faced malkoha) ಪಕ್ಷಿ ಕಂಡು ಬಂದಿತು.

ಈ ಪಕ್ಷಿ ತಾಲ್ಲೂಕಿನ ಮಟ್ಟಿಗೆ ಅಪರೂಪಕ್ಕೆ ಒಮ್ಮೆ ಮಾತ್ರ ಕಾಣುತ್ತಿರುವ ಪಕ್ಷಿಯಾಗಿದೆ ಎನ್ನುತ್ತಾರೆ ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ್‌.

ADVERTISEMENT

ಸೂಕ್ಷ್ಮವಾಗಿ ಗಮನಿಸುವಿಕೆ ಹಾಗೂ ಆಲಿಸುವಿಕೆ ಇದ್ದರೆ ಪ್ರಕೃತಿಯಲ್ಲಿ ಸದಾ ವಿಸ್ಮಯ ಕಾಣಿಸುತ್ತವೆ ಎಂಬುದನ್ನು ಕೋಗಿಲೆ ಕುಟುಂಬಕ್ಕೆ ಸೇರಿದ ನೀಲಿ ಮುಖದ ಕೈರಾತ ಕಣ್ಣಿನ ಮೂಲಕ ನೋಡುಗರ ಗಮನ ಸೆಳೆಯುತ್ತದೆ.

ಈಚೆಗೆ ಏಕಾಶಿಪುರ ಸುತ್ತಮುತ್ತ ಕೆಲ ಪಕ್ಷಿಪ್ರಿಯರ ಕಣ್ಣಿಗೆ ಮಂಗಟೆ ಪಕ್ಷಿ ಕಂಡಿರುವ ಬಗ್ಗೆ ಮಾಹಿತಿ ಇತ್ತು. ಹೀಗಾಗಿ ಮಂಗಟೆ ಹುಡುಕಾಟದ ನಡುವೆ ಕೈರಾತ ಮೊದಲ ನೋಟದಲ್ಲಿಯೇ ಪಕ್ಷಿ ಪ್ರಿಯರು ಖುಷಿಗೊಳ್ಳುವಂತೆ ಮಾಡಿದೆ.

ಕೈರಾತ ಪಕ್ಷಿ ಕಣ್ಣಿನ ಸುತ್ತ ಇರುವ ಬಿಳಿಯ ಬಣ್ಣದ ಉಂಗುರ ಬಿಳಿಗಣ್ಣಿನ ಚಿಟಗುಬ್ಬಿ(ವೈಟ್ ಏ) ಪಕ್ಷಿಯಲ್ಲಿ ಮಾತ್ರ ಕಾಣಬಹುದಾಗಿದೆ. ಆದರೆ, ಲಂಟನಾ ಬೇಲಿಯೊಳಗೆ ಕೂತು ಇಣುಕಿ ನೋಡಿದ ಕೈರಾತದಲ್ಲಿ ಉದ್ದನೆ ಬಾಲ, ಹಸಿರು ಬಣ್ಣದ ಕೊಕ್ಕು, ಕಣ್ಣಿನ ಸುತ್ತಲೂ ನೀಲಿ ಬಣ್ಣದ ಉಂಗುರದ ನಡುವೆ ಕೆಂಡದ ಕೆಂಪಿನ ಕಣ್ಣು ಗಮನ ಸೆಳೆಯುತ್ತದೆ.

ತನ್ನ ಆಹಾರಕ್ಕೆ ಅನುಕೂಲವಾಗುವಂತೆ ಮೇಲೆ ಹಾರಾಡುವುದಕ್ಕಿಂತ ಹೆಚ್ಚಾಗಿ ಬೇಲಿಯೊಳಗಿನ ನೆಲದ ಮೇಲೆ ಓಡಾಡುವ ಮೂಲಕವೇ ಆಹಾರವನ್ನು (ಚಿಕ್ಕ ಹುಳುಗಳು,ಮಿಡತೆ ) ಹುಡುಕಿ ತಿನ್ನುತ್ತದೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಮಟ್ಟಿಗೆ ಅಪರೂಪವಾಗಿರುವ ಕೈರಾತ, ಪಕ್ಷಿ ಪ್ರಿಯರ ಕಣ್ಣಿಗೆ ಕಾಣಿಸಿಕೊಂಡು ಖುಷಿ ನೀಡಿದೆ ಎನ್ನುತ್ತಾರೆ ಚಿದಾನಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.