ADVERTISEMENT

ಕನ್ನಡ ಪ್ರಜ್ಞೆ ಎಚ್ಚರಿಸಿದ ಡಾ.ರಾಜ್‌: ಜಿ.ಸುರೇಶ್

ರಾಜ್ ಕುಮಾರ್ ಸ್ಮರಣೆ: ಕನ್ನಡ ಅಭಿಮಾನ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 13:48 IST
Last Updated 24 ಏಪ್ರಿಲ್ 2025, 13:48 IST
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ಡಾ.ರಾಜ್‌ಕುಮಾರ್ ಜನ್ಮದಿನಾಚರಣೆ ನಡೆಯಿತು
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ಡಾ.ರಾಜ್‌ಕುಮಾರ್ ಜನ್ಮದಿನಾಚರಣೆ ನಡೆಯಿತು   

ದೊಡ್ಡಬಳ್ಳಾಪುರ: ಡಾ.ರಾಜಕುಮಾರ್ ಅವರು ತಮ್ಮ ಐತಿಹಾಸಿಕ ಪಾತ್ರಗಳ ಮೂಲಕ ಕರ್ನಾಟಕ ಇತಿಹಾಸದ ವೈಭವವನ್ನು ಮರುಸೃಷ್ಟಿ ಮಾಡಿದವರು ಎಂದು ಕನ್ನಡ ಸಾಹಿತ್ಯ ಪರಿಷತ್ ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ ಅಂಗವಾಗಿ ಗುರುವಾರ ನಡೆದ ಕನ್ನಡ ಅಭಿಮಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ.ರಾಜ್‌ಕುಮಾರ್ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆ ಎಚ್ಚರಿಸಿರುವುದನ್ನು ಕನ್ನಡಿಗರು ಎಂದು ಮರೆಯುವುದಿಲ್ಲ.
ಸರಳ, ಸಜ್ಜನ, ನಿಷ್ಠಾವಂತ, ಪ್ರಾಮಾಣಿಕ, ಅಪ್ರತಿಮ ಕಲಾವಿದ ಎಂದು ಎಲ್ಲಾ ಜನರ ಪ್ರೀತಿಗೆ ಪಾತ್ರರಾದ ಡಾ.ರಾಜ್‌ಕುಮಾರ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದರು.

ADVERTISEMENT

ಅವರು ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ನೀಡಲಾಗುವ ಅತ್ಯುನ್ನತ ಗೌರವವಾದ ಕೆಂಟುಕಿ ಕರ್ನಲ್ ಪ್ರಶಸ್ತಿಯನ್ನು ಪಡೆದ ಏಕೈಕ ಭಾರತೀಯ ನಟ. ರಾಜಕುಮಾರ್ ತನಗೆ ಪ್ರೀತಿ, ಯಶಸ್ಸು ಹಾಗೂ ಬದುಕು ಕೊಟ್ಟ ಕನ್ನಡ ಮತ್ತು ಸಂಸ್ಕೃತಿಗೆ ಸ್ಮರಣೀಯ ಕಾಣಿಕೆ ನೀಡಿದ್ದಾರೆ. ಅವರ ವೈಯಕ್ತಿಕ ಮತ್ತು ವೃತ್ತಿಪರ ರಂಗಗಳಲ್ಲಿ ಅವರ ಅತ್ಯಂತ ಶಿಸ್ತುಬದ್ಧ ಮತ್ತು ಸರಳ ಜೀವನಶೈಲಿಯನ್ನು ಎಲ್ಲರೂ ಗೌರವಪೂರ್ವಕವಾಗಿ ಸ್ಮರಿಸುತ್ತಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್, ರಾಜ್‌ಕುಮಾರ್ ಎಲ್ಲ ವರ್ಗದ ಪ್ರೇಕ್ಷಕರ ಮನಮುಟ್ಟುವ ಪಾತ್ರಗಳನ್ನು ಅಭಿನಯಿಸಿದ್ದಾರೆ. ಮೇರು ನಟರಾದ ಸಂದರ್ಭದಲ್ಲೂ ರೈತ, ಕೂಲಿಕಾರ, ವಾದ್ಯಗಾರ, ವಕೀಲರು, ಅಧ್ಯಾಪಕ ಮುಂತಾದ ನೂರಾರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅಭಿನಯಿಸುವಾಗ ಸಾಕಷ್ಟು ಸಿದ್ದತೆ ಮಾಡಿಕೊಳ್ಳುತ್ತಿದ್ದರು. ನಟನೆ ಮತ್ತು ಗಾಯನ ಎರಡರಲ್ಲೂ ಪ್ರಬುದ್ಧ ಕಲಾವಿದರಾದ ಅವರು ಎಲ್ಲಾ ಕಲಾವಿದರಿಗೂ ಮಾದರಿ. ಕನ್ನಡಿಗರ ಮನಸ್ಸಿನಲ್ಲಿ ಡಾ.ರಾಜ್ ಕುಮಾರ್ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಕನ್ನಡಪರ ಹಿರಿಯ ಹೋರಾಟಗಾರರಾದ ಗುರುರಾಜಪ್ಪ, ಟಿ.ಜಿ.ಮಂಜುನಾಥ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಕೆ.ಆರ್.ರವಿಕಿರಣ್, ಕಸಾಪ ತಾಲ್ಲೂಕು ಅಧ್ಯಕ್ಷ ಪಿ.ಗೋವಿಂದರಾಜು, ನಿಕಟಪೂರ್ವ ಕೋಶಾಧ್ಯಕ್ಷ ನಂ.ಮಹಾದೇವ್, ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಹಾಯಕ‌‌ ಆಯುಕ್ತ ವೆಂಕಟರಾಜು, ಸೂರ್ಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಸಿ.ಮಂಜುನಾಥ್, ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಅಣ್ಣಯ್ಯ, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾಮಹಾದೇವ್, ಗೌರವ ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ ಸಾ.ಲ.ಕಮಲನಾಥ್, ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಕಸಬಾ ಹೋಬಳಿ ಘಟಕದ ಅಧ್ಯಕ್ಷ ದಾದಾಪೀರ್, ಪ್ರತಿನಿಧಿ ನಾಗರತ್ನಮ್ಮ, ಷಫೀರ್, ಕನ್ನಡ ಜಾಗೃತ ವೇದಿಕೆ ಜಿಲ್ಲಾ ಅಧ್ಯಕ್ಷ ನಾಗರಾಜು, ಕಲಾವಿದರಾದ ದರ್ಗಾಜೋಗಿಹಳ್ಳಿ ಮಲ್ಲೇಶ್, ರಾಮಕೃಷ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.