ADVERTISEMENT

ದೊಡ್ಡಬಳ್ಳಾಪುರ: ಭಿನ್ನಾಪ್ರಾಯ ಬದಿಗೊತ್ತಿ ವೇದಿಕೆ ಹಂಚಿಕೊಂಡ ಹಾಲಿ, ಮಾಜಿ ಶಾಸಕರು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 2:32 IST
Last Updated 17 ಆಗಸ್ಟ್ 2025, 2:32 IST
​ಜಿಲ್ಲಾ ಆಸ್ಪತ್ರೆಗಾಗಿ ಶನಿವಾರ ನಡೆದ ವಿವಿಧ ಹೋರಾಟಗಾರರ ಸಭೆಯಲ್ಲಿ ಹಾಲಿ ಹಾಗೂ ಮಾಜಿ ಶಾಸಕರು ಮತ್ತು ವಿವಿಧ ಸಂಘಟನೆ ಮುಖಂಡರು ಇದ್ದರು
​ಜಿಲ್ಲಾ ಆಸ್ಪತ್ರೆಗಾಗಿ ಶನಿವಾರ ನಡೆದ ವಿವಿಧ ಹೋರಾಟಗಾರರ ಸಭೆಯಲ್ಲಿ ಹಾಲಿ ಹಾಗೂ ಮಾಜಿ ಶಾಸಕರು ಮತ್ತು ವಿವಿಧ ಸಂಘಟನೆ ಮುಖಂಡರು ಇದ್ದರು   

ದೊಡ್ಡಬಳ್ಳಾಪುರ: ಸದಾ ರಾಜಕೀಯ ಆರೋಪ–ಪ್ರತ್ಯಾರೋಪ, ಟೀಕೆಯಲ್ಲಿ ತೊಡಗಿರುತ್ತಿದ್ದ ಕ್ಷೇತ್ರದ ಹಾಲಿ ಶಾಸಕ ಧೀರಜ್‌ ಮುನಿರಾಜು ಹಾಗೂ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಇಬ್ಬರನ್ನು ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತುಕೊಳ್ಳುವಂತೆ ಮಾಡಿದ್ದ ಜಿಲ್ಲಾಸ್ಪತ್ರೆ ಹೋರಾಟ.

ನಗರದ ಕನ್ನಡ ಜಾಗೃತ ಭವನದಲ್ಲಿ ಜಿಲ್ಲಾ ಆಸ್ಪತ್ರೆ ಶೀಘ್ರವಾಗಿ ನಿರ್ಮಾಣ ಮಾಡುವಂತೆ ವಿವಿಧ ಸಂಘಟನೆಗಳಿಂದ ನಡೆದ ಸಭೆಯಲ್ಲಿ ಜಿಲ್ಲಾಸ್ಪತ್ರೆಗಾಗಿ ಹಾಲಿ ಹಾಗೂ ಮಾಜಿ ಶಾಸಕರು ಒಂದಾಗಿ ವೈಯಕ್ತಿಕ ರಾಜಕೀಯ ಭಿನ್ನಾಭಿಪ್ರಾಯ ಬದಿಗೊತ್ತಿ ಜಿಲ್ಲೆ ಆಸ್ಪತ್ರೆ ನಿರ್ಮಾಣ ಕುರಿತು ಚರ್ಚಿಸಿದರು.

ADVERTISEMENT

ಶಾಸಕ ಧೀರಜ್‌ ಮುನಿರಾಜು ಮಾತನಾಡಿ, ನಗರದ ಹೊರಭಾಗದ ಸುಮಾರು ಒಂಬತ್ತು ಎಕರೆ ಪ್ರದೇಶದಲ್ಲಿ ಶಂಕುಸ್ಥಾಪನೆ ಆಗಿರುವ ಜಿಲ್ಲಾ ಆಸ್ಪತ್ರೆ ಕೈತಪ್ಪುವ ಪ್ರಶ್ನೆಯೇ ಇಲ್ಲ. ಇಲ್ಲಿಯೇ ಜಿಲ್ಲಾ ಆಸ್ಪತ್ರೆ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಜಿಲ್ಲಾಸ್ಪತ್ರೆಯ ಬಗ್ಗೆ ಸದನದಲ್ಲಿ ಈಗಾಗಲೇ ಪ್ರಶ್ನೆ ಮಾಡಲಾಗಿದೆ. ಇಲ್ಲಿನ ಸಮಸ್ಯೆಗಳು, ಬೇಡಿಕೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಆಸ್ಪತ್ರೆ ಕೈ ತಪ್ಪುವ ತಪ್ಪುವ ಆತಂಕ ಬೇಡ. ಜಿಲ್ಲಾ ಆಸ್ಪತ್ರೆ ಹೋರಾಟ ಸಮಿತಿಯಲ್ಲಿ ಅನೇಕ ಹೋರಾಟಗಾರರು, ಹಿರಿಯರು ಭಾಗಿಯಾಗಿದ್ದಾರೆ ಎಂದರು.

‘ದೇವನಹಳ್ಳಿಯಲ್ಲಿ ನಡೆದ ಗ್ಯಾರೆಂಟಿ ಸಮಾವೇಶದಲ್ಲಿ ₹163 ಕೋಟಿ ವೆಚ್ಚದ ಜಿಲ್ಲಾ ಆಸ್ಪತ್ರೆ ಯೋಜನೆಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ಮಾಡಿದ್ದಾರೆ. ನಿಗದಿ ಪಡಿಸಿರುವ ಅನುದಾನ ಕೊಡಬೇಕಿದೆ. ದೊಡ್ಡಬಳ್ಳಾಪುರದಲ್ಲಿನ ತಾಯಿ ಮಗು ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 200-250 ಹೆರಿಗೆಗಳು ಆಗುತ್ತಿದೆ. ಜಿಲ್ಲೆಯೆ ಇತರೆ ತಾಲ್ಲೂಕುಗಳಲ್ಲಿ 100-120 ಆಗುತ್ತಿವೆ. ಇಲ್ಲಿನ ಜನ ಸಂಖ್ಯೆಗೆ ತಕ್ಕಂತೆ ಜಿಲ್ಲಾ ಆಸ್ಪತ್ರೆ ತುರ್ತು ಆಗತ್ಯವಾಗಿದೆ.ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರೊಂದಿಗೆ ಮಾತನಾಡಿದ್ದೇನೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ, ಜೆಡಿಎಸ್‌ ಮುಖಂಡ ಹರೀಶ್‌ಗೌಡ, ಹಿರಿಯ ಹೋರಾಟಗಾರರಾದ ಸಂಜೀವ್‌ನಾಯಕ್, ತ.ನ.ಪ್ರಭುದೇವ್, ಆರ್‌.ಕೆಂಪರಾಜ್‌, ರಾಜಘಟ್ಟರವಿ, ಮರುಳಾರಾಧ್ಯ, ಪಿ.ಎ.ವೆಂಕಟೇಶ್,ಹುಲಿಕಲ್‌ ನಟರಾಜ್,ರೇವತಿ, ಕವಿತಾ,ನಾಗರತ್ನ,ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಗೋವಿಂದರಾಜು, ಯುವ ಸಂಚಲ ಅಧ್ಯಕ್ಷ ಚಿದಾನಂದಮೂರ್ತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು ಇದ್ದರು.

ಮುಖ್ಯಮಂತ್ರಿಗೆ ಮನವರಿಕೆ

‘2013-14ರ ಸಾಲಿನ ಬಜೆಟ್‌ನಲ್ಲಿ ಜಿಲ್ಲಾ ಆಸ್ಪತ್ರೆ ವಿಚಾರ ಪ್ರಸ್ತಾಪ ಆಗಿತ್ತು. ಆದರೆ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಕಾರಣದಿಂದ ಸಾಧ್ಯವಾಗಲಿಲ್ಲ. 2018-19 ರಲ್ಲಿ ಜಿಲ್ಲಾ ಆಸ್ಪತ್ರೆಯು ಕೆಸಿ ಜನರಲ್‌ ಆಸ್ಪತ್ರೆಗೆ ವರ್ಗಾಯಿಸುವ ಪ್ರಸ್ತಾವನೆ ಬಂದಿತ್ತು. ಈ ಹಿಂದೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿದ್ದ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಆಸ್ಪತ್ರೆ ಇಲ್ಲಿಯೇ ಉಳಿಯುವಂತೆ ಮಾಡಲಾಯಿತು. ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಖಾಸಗಿ ಮೆಡಿಕಲ್‌ ಕಾಲೇಜುಗಳು ಇವೆ. ನಮ್ಮಲ್ಲಿ ಇಲ್ಲದೇ ಇರುವುದರಿಂದ ಜಿಲ್ಲಾ ಆಸ್ಪತ್ರೆಯನ್ನು ನಮ್ಮ ತಾಲ್ಲೂಕಿನಲ್ಲಿಯೇ ನಿರ್ಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ’ ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.