ದೊಡ್ಡಬಳ್ಳಾಪುರ: ‘ಎನ್ಸಿಸಿ ದಿನ’ದ ಅಂಗವಾಗಿ ಶುಕ್ರವಾರ ಇಲ್ಲಿನ ಶ್ರೀಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಎನ್ಸಿಸಿ ವಿದ್ಯಾರ್ಥಿಗಳು ಹುಲುಕುಡಿ ಬೆಟ್ಟದವರೆಗೆ ಸೈಕ್ಲಿಂಗ್ ನಡೆಸಿದರು.
ಬೆಳಗ್ಗೆ 6:30ಕ್ಕೆ ಕಾಲೇಜಿನಿಂದ ಆರಂಭವಾದ ಸೈಕ್ಲಿಂಗ್ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹುಲುಕುಡಿ ಬೆಟ್ಟದವರೆಗೆ ನಡೆಯಿತು. ಎನ್ಸಿಸಿ ವಿದ್ಯಾರ್ಥಿಗಳು ಹುಲುಕುಡಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಮೂಲಕ ತೆರಳಿ ಬೆಟ್ಟದ ಮೇಲೆ ಸ್ವಚ್ಛತಾ ಕಾರ್ಯ ನಡೆಸಿದರು.
ವಿದ್ಯಾರ್ಥಿ ಜೀವನದಲ್ಲಿ ಓದಿಗೆ ಮಾತ್ರ ಸೀಮಿತವಾಗಿರದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಆ ಮೂಲಕ ತಮ್ಮ ಬದುಕಿನ ಅನುಭವ ಹೆಚ್ಚಿಸಿಕೊಳ್ಳಬೇಕು. ಉತ್ತಮ ಅರೋಗ್ಯ ಉತ್ತಮ ಸಮಾಜ ನಿರ್ಮಿಸುವಲ್ಲಿ ಎನ್ಸಿಸಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ. ಈ ದಿಸೆಯಲ್ಲಿ ಎನ್ಸಿಸಿ ದಿನದ ನೆನಪಿನಲ್ಲಿ ಸೈಕ್ಲಿಂಗ್ ನಡೆಸಲಾಗಿದೆ ಎಂದು ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಕ್ಯಾಪ್ಟನ್ ಎನ್.ಶ್ರೀನಿವಾಸ್ ತಿಳಿಸಿದರು.
ಆಧುನಿಕತೆಯ ಬಳುವಳಿಯಲ್ಲಿ ಮೂಲ ಬದುಕಿನ ರೂಢಿಗಳು ಮರೆಯಾಗುತ್ತಿವೆ. ದುಬಾರಿ ವಾಹನದ ಹುಚ್ಚು ಮನಸ್ಸನ್ನು ಬದಲಿಸುತ್ತಿದೆ. ಅದು ಬದಲಾಗಬೇಕು ಎಂದು ಕಾಲೇಜಿನ ಉಪ ಪ್ರಾಂಶುಪಾಲ ಎಸ್.ಎಸ್.ಶಿವಶಂಕರ್ ಹೇಳಿದರು.
ಮೇಜರ್ ಎಸ್.ಮಹಾಬಲೇಶ್ವರ್, ಲೆಫ್ಟಿನಂಟ್ ಪ್ರವೀಣ್, ಎನ್ಸಿಸಿ ಅಧಿಕಾರಿ ಸಿ.ಕೆ.ಶ್ರೀಕಾಂತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.