ADVERTISEMENT

ನಮ್ಮೂರಿನ ಬೆಟ್ಟಗಳ ಕಾಡದಿರಲಿ ಕಾಡ್ಗಿಚ್ಚು: ಯುವ ಮನಸ್ಸುಗಳ ಮನದ ಮಾತು

ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಣೆಗೆ ದೊಡ್ಡಬಳ್ಳಾಪುರ ವಿದ್ಯಾರ್ಥಿಗಳ ಆಗ್ರಹ

ನಟರಾಜ ನಾಗಸಂದ್ರ
Published 5 ಫೆಬ್ರುವರಿ 2024, 5:26 IST
Last Updated 5 ಫೆಬ್ರುವರಿ 2024, 5:26 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಚನ್ನರಾಯಸ್ವಾಮಿ ಬೆಟ್ಟದಲ್ಲಿ ಒಣಗಿ ನಿಂತ ಹುಲ್ಲು
ದೊಡ್ಡಬಳ್ಳಾಪುರ ತಾಲ್ಲೂಕಿನ ಚನ್ನರಾಯಸ್ವಾಮಿ ಬೆಟ್ಟದಲ್ಲಿ ಒಣಗಿ ನಿಂತ ಹುಲ್ಲು   

ದೊಡ್ಡಬಳ್ಳಾಪುರ:  ಮಳೆಗಾಲಕ್ಕಿಂತಲೂ ಈ ಬಾರಿ ಬೇಸಿಗೆಯ ವಾತಾವರಣವೇ ಹೆಚ್ಚಾಗಿತ್ತು. ಹಾಗಾಗಿ ತಾಲ್ಲೂಕಿನ ಬೆಟ್ಟಗಳಲ್ಲಿ, ಬೆಟ್ಟದ ತಪ್ಪಲಿನ ಹಾಗೂ ಇತರೆಡೆಯ ಕುರುಚಲು ಕಾಡುಗಳಲ್ಲಿ ಒಣಗಿ ನಿಂತಿರುವ ಹುಲ್ಲಿಗೆ ಬೆಂಕಿ ಬಿದ್ದು ಹೆಚ್ಚಿನ ಪರಿಸರ ನಾಶ, ಸಣ್ಣಪುಟ್ಟ ಪ್ರಾಣಿಗಳು ಮೃತಪಡುವ ಅಪಾಯಗಳು ದಟ್ಟವಾಗಿದೆ.

ನಮ್ಮ ಕಾಡುಗಳ ಹಸಿರು ಮತ್ತು ವನ್ಯ ಸಂಪತ್ತು ರಕ್ಷಣೆಗೆ ಅರಣ್ಯ ಇಲಾಖೆಗೆ ಜತೆ ಎಲ್ಲರು ಟೊಂಕಕಟ್ಟಿ ನಿಲ್ಲಬೇಕಿದೆ...

–ಇದು ತಾಲ್ಲೂಕಿನ ವಿದ್ಯಾರ್ಥಿಗಳ ಮನದ ಮಾತು. ಕಾಡ್ಚಿಚ್ಚಿನಿಂದ ಅರಣ್ಯ ರಕ್ಷಣೆ ಮಾಡಬೇಕಿರುವ ಕುರಿತು ‘ಪ್ರಜಾವಾಣಿ’ಯೊಂದಿಗೆ‌ ಮಾತನಾಡಿದ್ದಾರೆ.

ADVERTISEMENT

ಈ ಹಿಂದಿನ ವರ್ಷಗಳಲ್ಲೂ ಸಾಕಷ್ಟು ಬೆಟ್ಟಗಳು, ಕುರುಚಲು ಕಾಡುಗಳು ಜನರ ಮೂಡು ನಂಬಿಕೆಯು ಸೇರಿದಂತೆ ಇತರೆ ಕಾರಣಗಳಿಂದಾಗಿ ಸುಟ್ಟು ಹೋಗಿವೆ. ಈಗ ಮತ್ತೆ ಕಡು ಬೇಸಿಗೆಯ ದಿನಗಳು ಪ್ರಾರಂಭವಾಗಿವೆ. ಕಾಡ್ಗಿಚ್ಚಿಗೆ ಸುತ್ತಮುತ್ತಲಿನ ಪರಿಸರ ಬಲಿಯಾಗದಂತೆ ರಕ್ಷಿಸುವ ಕಾರ್ಯಗಳು ನಡೆಯಬೇಕಿದೆ ಎನ್ನುತ್ತಾರೆ ಅವರು.

ತಾಲ್ಲೂಕಿನಲ್ಲಿ ಹೆಸರಾಂತ ಮಾಕಳಿ ಬೆಟ್ಟ, ದೇವರ ಬೆಟ್ಟ, ಜಾಲಿಗೆ ಬೆಟ್ಟ,ಹುಲುಕುಡಿ ಬೆಟ್ಟ, ಉಜ್ಜನಿ ಬೆಟ್ಟಗಳ ಸಾಲು, ಹಾಗೆಯೇ ತಾಲ್ಲೂಕಿನ ಪೂರ್ವ ದಿಕ್ಕಿನ ಗಡಿ ಭಾಗದ ಪಂಚಗಿರಿ (ನಂದಿಗಿರಿ, ಚನ್ನಗಿರಿ, ಸ್ಕಂದಗಿರಿ, ದಿಬ್ಬಗಿರಿ, ಬ್ರಹ್ಮಗಿರಿ) ಶ್ರೇಣಿಗಳು ಇವೆ. ಗಂಡ್ರಗೊಳ್ಳಿಪುರ ಅರಣ್ಯ, ಸಾಸಲು ಅರಣ್ಯ ಪ್ರದೇಶಗಳು ಇವೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಕಳಿ ಬೆಟ್ಟದ ತಪ್ಪಲಿನಲ್ಲಿ ಕಳೆದ ವರ್ಷ ಕಾಣಿಸಿಕೊಂಡಿದ್ದ ಬೆಂಕಿ (ಸಂಗ್ರಹ ಚಿತ್ರ)

ಈ ಬೆಟ್ಟದ ಸಾಲುಗಳಿಗೆ ಸೌದೆ, ಸಣ್ಣ ಪುಟ್ಟ ಪ್ರಾಣಿಗಳ ಬೇಟೆ ಸೇರಿದಂತೆ ಇತರೆ ಆಸೆಗಳಿಂದಾಗಿ ಕಿಡಿಗೇಡಿಗಳು ಬೆಂಕಿ ಹಾಕುತ್ತಾರೆ. ಪ್ರತಿ ವರ್ಷವು ಸಸಿಗಳನ್ನು ನೆಟ್ಟು ಬೆಳೆಸುವಷ್ಟೇ ಪ್ರಾಮುಖ್ಯತೆಯನ್ನು ಬೆಳೆದಿರುವ ಸಸಿಗಳು ಬೆಂಕಿಗೆ ಆಹುತಿಯಾಗದಂತೆ ರಕ್ಷಿಸುವ ಕಡೆಗೂ ಅಷ್ಟೇ ಕಾಳಜಿ ವಹಿಸಬೇಕಾದ ತುರ್ತು ಅಗತ್ಯವಿದೆ ಎನ್ನುವುದು ಪರಿಸರವಾದಿಗಳ ಆಗ್ರಹವಾಗಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಕಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ವತಿಯಿಂದ ಕಾಡ್ಗಿಚ್ಚು ತಡೆಯುವ ಕುರಿತಂತೆ ಜಾಗೃತಿ ಸಭೆ ನಡೆಸಲಾಯಿತು

ವಿದ್ಯಾರ್ಥಿಗಳ ಸಲಹೆಗಳಿವು...

ನಮ್ಮ ಜವಾಬ್ದಾರಿಯೂ ಇದೆ
ಸಣ್ಣ ಬೆಂಕಿ ಕಿಡಿ ಇಡೀ ಅರಣ್ಯವನ್ನೇ ನಾಶಪಡಿಸುತ್ತದೆ. ಆದರೆ ಮತ್ತೆ ಅಷ್ಟೇ ಪ್ರಮಾಣದ ಅರಣ್ಯ ಬೆಳಸಲು ವರ್ಷಗಳ ಕಾಲ ಶ್ರಮವಹಿಸಬೇಕಾಗುತ್ತದೆ. ಪ್ರಾಣಿ ಪಕ್ಷಿಗಳು ಕಾಡ್ಗಿಚ್ಚಿಗೆ ಬಲಿಯಾಗಲಿವೆ. ಬೆಂಕಿ ಹಾರಿಸುವ ಕೆಲಸ ಅರಣ್ಯ ಇಲಾಖೆಗೆ ಸೇರಿದ್ದು ಎನ್ನುವ ನಮ್ಮ ಮನೋಭಾವನೆ ಬದಲಾಗಬೇಕಿದೆ. ಅರಣ್ಯ ಇಲಾಖೆಯನ್ನು ದೂರವುದರ ಜೊತೆಗೆ ನಮ್ಮ ಜವಾಬ್ದಾರಿ ಅರಿತು ಪರಿಸರ ರಕ್ಷಣೆಗೆ ಮುಂದಾಗಬೇಕಿದೆ. –ಎಂ.ಮಾನಸ ವಿದ್ಯಾರ್ಥಿನಿ
ಎಂ.ಮಾನಸ
ಬೀಗಿ ಕ್ರಮ ಅಗತ್ಯ
ತಿ ವರ್ಷವು ಬೇಸಿಗೆಯಲ್ಲಿ ಬೆಟ್ಟೆಗಳಿಗೆ ಬೆಂಕಿ ಬಿಳುವುದು ಸಾಮಾನ್ಯ ಎನ್ನುವಂತಾಗಿದೆ. ಇದರಿಂದ ಪ್ರಾಣಿ ಸಂಕುಲವಷ್ಟೇ ನಾಶವಾಗುತ್ತಿಲ್ಲ ನಮ್ಮ ಕೃಷಿಗೆ ಪೂರಕವಾದ ಕೀಟ ಪ್ರಭೇದಗಳು ಹಾಗೂ ಜೀವ ವೈವಿದ್ಯ ನಾಶವಾಗುತ್ತಿವೆ. ಇತರೆ ಕಾಡು ಬೆಟ್ಟಗಳಿಗೆ ಹೋಲಿಕೆ ಮಾಡಿದರೆ ನಮ್ಮ ತಾಲ್ಲೂಕಿನ ಬೆಟ್ಟಗಳಲ್ಲಿ ಮನುಷ್ಯರ ಕೈವಾಡ ಇಲ್ಲದೆ ಬೆಂಕಿ ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲ. ಬೆಟ್ಟ ಹಾಗೂ ಬೆಟ್ಟದ ತಪ್ಪಲಿನಲ್ಲಿ ಬೆಂಕಿ ಹಚ್ಚಲು ಕಾರಣರಾದವರ ಪತ್ತೆ ಮಾಡಿ ಅರಣ್ಯ ಇಲಾಖೆ ದೂರುಗಳನ್ನು ದಾಖಲು ಮಾಡುವ ಬಿಗಿ ಕ್ರಮಗಳು ಅನಿವಾರ್ಯವಾದಾಗ ಮಾತ್ರ ಬೆಂಕಿಯಿಂದ ನಮ್ಮೂರಿನ ಬೆಟ್ಟಗಳನ್ನು ರಕ್ಷಿಸಲು ಸಾಧ್ಯವಾಗಲಿದೆ. –ಎಲ್‌.ಮಹಾಲಕ್ಷ್ಮೀ ವಿದ್ಯಾರ್ಥಿನಿ
ಎಲ್.ಮಹಾಲಕ್ಷ್ಮೀ
ಶಾಲಾ ಹಂತದಿಂದಲೇ ಅರಿವು ಅಗತ್ಯ
ಪರಿಸರ ಸಂರಕ್ಷಣೆ ಕುರಿತಂತೆ ಶಾಲಾ–ಕಾಲೇಜು ಹಂತಗಳಿಂದಲೇ ಜಾಗೃತಿ ಮೂಡಿಸಬೇಕು. ನಮ್ಮ ಸುತ್ತಲಿನ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವ ಅನಿವಾರ್ಯತೆ ಇದರಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆಯು ಅರಿವು ಮೂಡಿಸುವಂತಹ ವಿಚಾರ ಒಳಗೊಂಡ ಪಾಠಗಳ ಅಗತ್ಯವಿದೆ– ಆರ್‌.ಭರತ್‌  ವಿದ್ಯಾರ್ಥಿ
ಆರ್.ಭರತ್
ಸಹಜ ಅರಣ್ಯ ಬೆಳವಣಿಗೆ
ಅರಣ್ಯ ನಾಶದಿಂದ ಏನೆಲ್ಲಾ ಅನಾಹುತಗಳು ಸಂಭವಿಸುತ್ತಿವೆ ಎನ್ನುವ ಸತ್ಯ ನಮ್ಮ ಕಣ್ಣ ಮುಂದೆಯೇ ಇದೆ. ಇದಕ್ಕೆ ತಾಜಾ ನಿದರ್ಶನ ದೆಹಲಿ ಸುತ್ತ ಉಂಟಾಗುತ್ತಿರುವ ವಾಯುಮಾಲಿನ್ಯ ಮಳೆ ಪಂಚಾಗದಲ್ಲಿ ಉಂಟಾಗಿರುವ ಬದಲಾವಣೆ. ನಮ್ಮ ಯಾವುದೇ ಪರಿಶ್ರಮ ಇಲ್ಲದೆಯೂ ನೈಸರ್ಗಿಕವಾಗಿ ಅರಣ್ಯ ಬೆಳೆಯುವಂತೆ ನೋಡಿಕೊಳ್ಳಬೇಕು. ಆಕಸ್ಮಿಕ ನೆಪದಲ್ಲಿ ಬೀಳುವ ಬೆಂಕಿಯನ್ನು ತಡೆದರೂ ಸಾಕು ತನಗೆ ತಾನೇ ಅರಣ್ಯ ವೃದ್ಧಿಯಾಗಲಿದೆ. ಇದು ನಮ್ಮ ಪೂರ್ವಜರ ಕಾಲದಲ್ಲಿ ಇದ್ದ ಅರಣ್ಯ ಬೆಳೆಸುವ ಪದ್ದತಿ. ಇದು ಮರುಕಳುಹಿಸುವಂತೆ ನೋಡಿಕೊಂಡರೆ ಸಮೃದ್ಧ ಅರಣ್ಯ ನಮ್ಮ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಸಹಜವಾಗಿಯೇ ಬೆಳವಣಿಗೆಯಾಗಲಿದೆ– ಎನ್.ಆರ್.ರಂಜಿತಾ ವಿದ್ಯಾರ್ಥಿನಿ
ಎನ್.ಆರ್.ರಂಜಿತಾ

ಉಪಗ್ರಹ ತಂತ್ರಜ್ಞಾನ ಬಳಕೆ

ದೇಶದ ಉಪಗ್ರಹಗಳ ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಬೆಳವಣಿಗೆ ಉಪಯೋಗವು ಈಗ ಅರಣ್ಯ ಇಲಾಖೆಗೂ ಲಭ್ಯವಾಗುತ್ತಿದೆ. ಯಾವುದೇ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಉಪಗ್ರಹದ ಮೂಲಕ ಎಚ್ಚರಿಕೆ ಸಂದೇಶ ರಾಜ್ಯದ ಅರಣ್ಯ ಇಲಾಖೆಯ ಬೆಂಕಿ ನಿಯಂತ್ರಣ ಕೊಠಡಿಗೆ ಬರಲಿದೆ. ಅಲ್ಲಿಂದ ತಾಲ್ಲೂಕು ಹಂತದದಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಯ ಮೊಬೈಲ್‌ಗಳಿಗೆ ಸಂದೇಶ ರವಾನೆಯಾಗಲಿದೆ. ಇದರಿಂದ ತಕ್ಷಣ ಎಚ್ಚೆತ್ತುಕೊಂಡು ಬೆಂಕಿ ನಂದಿಸುವ ಮೂಲಕ ಹೆಚ್ಚಿನ ನಾಶವಾಗುವುದನ್ನು ತಡೆಯಲು ಸಹಕಾರಿಯಾಗಿದೆ.

ತಾಲ್ಲೂಕಿನ ಅರಣ್ಯದಂಚಿನ ಬೆಟ್ಟದ ತಪ್ಪಲಿನ ಗ್ರಾಮಗಳಲ್ಲಿ ಬೆಂಕಿ ನಂದಿಸುವ ಪ್ರಾಮುಖ್ಯತೆ ಬೆಂಕಿ ಕಾಣಿಸಿಕೊಂಡ ತಕ್ಷಣ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಗೃತಿ ಜಾಥಾ ನಡೆಸಲಾಗುತ್ತಿದೆ. ಅರಣ್ಯ ಬೆಟ್ಟದ ಸಮೀಪದ ರಸ್ತೆ ಬದಿಯಲ್ಲಿ ಬೀಡಿ ಸಿಗರೇಟ್‌ ಬಿಸಾಡುವುದರಿಂದ ಕಾಣಿಸಿಕೊಳ್ಳುವ ಬೆಂಕಿ ಬೇರೆಡೆಗೆ ವ್ಯಾಪಿಸದಂತೆ ತಡೆಯಲು ಹುಲ್ಲು ಪೋದೆ ಗಿಡಗಳನ್ನು ಕಿತ್ತು ಸ್ವಚ್ಛ ಮಾಡಲಾಗುತ್ತಿದೆ
ಕೃಷ್ಣೇಗೌಡ ವಲಯ ಅರಣ್ಯ ಅಧಿಕಾರಿ ದೊಡ್ಡಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.