ದೇವನಹಳ್ಳಿ: ‘ಗ್ರಾಮೀಣರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದರಿಂದ ದೈಹಿಕವಾಗಿ ಸದೃಢರಾಗಿರುತ್ತಾರೆ. ಹಾಗಾಗಿ, ಗ್ರಾಮೀಣ ಕ್ರೀಡೆಗಳಲ್ಲಿ ಇಲ್ಲಿನ ಯುವಕರು ಭಾಗಿಯಾಗಲು ಪಂಚಾಯತ್ ರಾಜ್ ಇಲಾಖೆಯಿಂದ ಕ್ರೀಡಾಕೂಟ ಆಯೋಜಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ. ರೇವಣಪ್ಪ ಹೇಳಿದರು.
ತಾಲ್ಲೂಕಿನ ವಿಶ್ವನಾಥಪುರದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ವಿಶ್ವನಾಥಪುರ ಗ್ರಾ.ಪಂ.ನಿಂದ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಭೆಗಳನ್ನು ಗುರುತಿಸಿ ತಾಲ್ಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಗ್ರಾಮೀಣ ಕ್ರೀಡಾಕೂಟ ಹಮ್ಮಿಕೊಳ್ಳಲಾಗುತ್ತದೆ. ಸೋಲು, ಗೆಲುವು ಮುಖ್ಯವಲ್ಲ. ಉತ್ತಮ ಪ್ರದರ್ಶನ ನೀಡಿ ಗ್ರಾಮೀಣ ಸೊಗಡನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಕ್ರೀಡೆಗಳಿಗೆ ಸಮುದಾಯಗಳನ್ನು ಒಗ್ಗೂಡಿಸುವ ಶಕ್ತಿಯಿದೆ. ನೆಲದ ಸಂಸ್ಕೃತಿಯನ್ನು ವಿಶ್ವ ವ್ಯಾಪಿ ಸಾರುವಲ್ಲಿ ಪ್ರತಿಭಾವಂತ ಯುವಕರಿಗೆ ಈ ಕಾರ್ಯಕ್ರಮ ಉತ್ತಮ ವೇದಿಕೆ ಒದಗಿಸಿದೆ. ಆತ್ಮವಿಶ್ವಾಸದಿಂದ ತಂಡಗಳು ಪೈಪೋಟಿ ನೀಡಿ ಕ್ರೀಡಾಭಿಮಾನ ಮೆರೆಯಬೇಕು ಎಂದರು.
ಗ್ರಾ.ಪಂ. ಉಪಾಧ್ಯಕ್ಷ ವಿನಯ್ ಕುಮಾರ್, ಗ್ರಾ.ಪಂ. ಕಾರ್ಯದರ್ಶಿ ಪದ್ಮಮ್ಮ ಮಾತನಾಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೀರೇಶ್, ಗ್ರಾ.ಪಂ. ಅಧ್ಯಕ್ಷೆ ಕಲ್ಪನಾ ನಾರಾಯಣಸ್ವಾಮಿ, ತಾ.ಪಂ. ಇಒ ವಸಂತ್ ಕುಮಾರ್, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ, ಗ್ರಾ.ಪಂ. ಸದಸ್ಯರಾದ ಸುಂದರೇಶ್, ಮಂಗಳಮ್ಮ, ಶ್ರೀನಿವಾಸ್, ನಾಗಮ್ಮ, ವೆಂಕಟಮ್ಮ, ನಾಗರಾಜು, ರವಿಕುಮಾರ್, ಸಿ. ಮುನೇಗೌಡ, ಭವ್ಯ, ನರಸಿಂಹರಾಜು, ದಿವ್ಯ ಭಾರತಿ, ಮಂಜುನಾಥ್, ವೆಂಕಟಾಚಲ, ಆಂಜಿನಮ್ಮ, ಮಂಜುಳ, ಲಕ್ಷ್ಮೀನರಸಮ್ಮ, ನವೀನ್
ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.