ಆನೇಕಲ್ : ಆನೇಕಲ್ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ಮತ್ತು ಸರ್ಕಲ್ ಇನ್ಸ್ಟೆಕ್ಟರ್ ತಿಪ್ಪೇಸ್ವಾಮಿ ಅವರು ಶುಕ್ರವಾರ ರೌಡಿ ಪರೇಡ್ ನಡೆಸಿ ಎಚ್ಚರಿಕೆ ನೀಡಿದರು.
ಡಿವೈಎಸ್ಪಿ ಮೋಹನ್ ಕುಮಾರ್ ಮಾತನಾಡಿ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು. ಇಲ್ಲವಾದಲ್ಲಿ ಪೊಲೀಸರು ಕಠಿಣ ನಿಲುವು ತಾಳಬೇಕಾಗುತ್ತದೆ. ಆನೇಕಲ್ ಪೊಲೀಸ್ ಉಪವಿಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ಕ್ರಮ ವಹಿಸಲಾಗುತ್ತಿದೆ. ರೌಡಿಗಳು ತಮ್ಮ ಚಾಳಿ ಮುಂದುವರಿಸಿದರೆ ಪೊಲೀಸ್ ಭಾಷೆಯಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೌಡಿಗಳು ಎಚ್ಚರಿಕೆಯಿಂದ ತಮ್ಮ ಕೆಲಸ ನಿರ್ವಹಿಸಿಕೊಂಡು ಹೋಗಬೇಕು. ರೌಡಿ ಪರೇಡ್ಗೆ ಶೇ50ರಷ್ಟು ರೌಡಿಶೀಟರ್ಗಳು ಬಂದಿಲ್ಲ. ಈ ಬಗ್ಗೆ ಆದ್ಯತೆ ಮೇರೆಗೆ ಕ್ರಮ ವಹಿಸಲಾಗುವುದು. ಉತ್ತಮ ರೀತಿಯಲ್ಲಿ ನಡೆದುಕೊಂಡಿದ್ದರೆ ಪೊಲೀಸರು ಕರೆದಾಗ ಬರುತ್ತಿದ್ದರು. ಕಳೆದ ಆರೇಳು ತಿಂಗಳಿನಿಂದ ಆನೇಕಲ್ ಉಪವಿಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಅನುಸರಿಸಲಾಗುತ್ತಿದೆ. ರೌಡಿ ಚಟುವಟಿಕೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.
ವಯಸ್ಸು ಕಳೆದಂತೆ ಪತ್ನಿ, ಮಕ್ಕಳ ಬಗ್ಗೆ ಯೋಚಿಸಬೇಕು. ಶಾಲೆಯಲ್ಲಿ ತಂದೆ ಬಗ್ಗೆ ಕೇಳಿದಾಗ ಮಕ್ಕಳು ರೌಡಿ ಎಂದು ಹೇಳುವಂತಾಗಬಾರದು. ಉತ್ತಮ ರೀತಿಯಲ್ಲಿ ಜೀವನ ನಡೆಸಿ. ರೌಡಿಸಂ ಮಾಡಿದರೆ ಹಫ್ತಾ ಬರುತ್ತದೆ ಎಂಬ ಭಾವನೆ ಇದ್ದರೆ ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಆನೇಕಲ್ಗೆ ರೌಡಿಸಂಯಿಂದಾಗಿ ಕೆಟ್ಟ ಹೆಸರು ಬರುತ್ತಿದೆ. ಇದನ್ನು ಬದಲಾಯಿಸಬೇಕಾದದ್ದು ಪೊಲಿಸರ ಜವಾಬ್ದಾರಿಯಾಗಿದೆ. ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಿಗೆ ಪೊಲೀಸ್ ಭಾಷೆಯಲ್ಲಿಯೇ ಉತ್ತರ ನೀಡಲಾಗುವುದು ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ಮಾತನಾಡಿ, ಸಮಾಜದಲ್ಲಿ ಶಾಂತಿ ಕದಡುವವರನ್ನು ಸುಮ್ಮನೆ ಬಿಡುವುದಿಲ್ಲ. ಒಳ್ಳೆತನದಲ್ಲಿ ಜೀವನ ಸಾಗಿಸಿದರೆ ಒಳ್ಳೆಯದು. ಇಲ್ಲವಾದ್ದಲ್ಲಿ ಪೊಲೀಸ್ ಇಲಾಖೆ ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.
ಶೇ50ರಷ್ಟು ಮಂದಿ ಗೈರು: ಆನೇಕಲ್ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ರೌಡಿ ಪರೇಡ್ನಲ್ಲಿ 113 ರೌಡಿಶೀಟರ್ಗಳ ಪೈಕಿ 47 ಮಂದಿ ರೌಡಿಗಳು ಪಾಲ್ಗೊಂಡಿದ್ದರು. ಶೇ50ರಷ್ಟು ರೌಡಿಶೀಟರ್ಗಳು ಪರೇಡ್ನಲ್ಲಿ ಪಾಲ್ಗೊಂಡಿರಲಿಲ್ಲ. ರೌಡಿ ಪರೇಡ್ಗೆ ಬಾರದ ರೌಡಿಶೀಟರ್ಗಳ ಮೇಲೆ ಕ್ರಮ ವಹಿಸಲಾಗುವುದು ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.