ದೊಡ್ಡಬಳ್ಳಾಪುರ: ತಾಲ್ಲೂಕಿನ ಮೆಳೇಕೋಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ತೋಟಗಾರಿಕಾ ಇಲಾಖೆ, ತಾಲ್ಲೂಕು ಪಂಚಾಯಿತಿ ಸಹಯೋಗದೊಂದಿಗೆ ’ಮನೆಯಂಗಳದಲ್ಲಿ ಕೈತೋಟ’ ಕಾರ್ಯಕ್ರಮಕ್ಕೆ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ ಸಿ.ಗೀತಾಮಣಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿ.ಗೀತಾಮಣಿ, ’ನಗರ ಪ್ರದೇಶದಲ್ಲಿ ತಾರಸಿ ತೋಟ ಇತ್ತೀಚೆಗೆ ಹೆಚ್ಚು ಜನ ಮನ್ನಣೆ ಪಡೆದಿದೆ. ಗ್ರಾಮೀಣ ಭಾಗದಲ್ಲಿ ಹಿತ್ತಲಿನಲ್ಲಿ ಮನೆಗೆ ಅಗತ್ಯ ಇರುವ ಬಹುತೇಕ ತರಕಾರಿಗಳನ್ನು ಬೆಳೆದುಕೊಳ್ಳುವ ಪದ್ದತಿ ಹಿಂದಿನಿಂದಲೂ ಇತ್ತು. ಸದ್ಯಕ್ಕೆ ಎಲ್ಲದ್ದಕ್ಕೂ ನಗರದಲ್ಲಿನ ಮಾರುಕಟ್ಟೆಯನ್ನು ಆಶ್ರಯಿಸುತ್ತಿರುವುದರಿಂದ ಅಪೌಷ್ಟಿಕತೆ ಹೆಚ್ಚುತ್ತಿದೆ’ ಎಂದು ಅಭಿಪ್ರಾಯಪಟ್ಟರು.
ಮನೆಯ ಹಿತ್ತಲು ಮತ್ತು ಅಂಗಳದಲ್ಲಿ ಹಣ್ಣು, ತರಕಾರಿ ಬೆಳೆದುಕೊಳ್ಳಲು ಸಹಾಯವಾಗಲೆಂದೇ ವಿವಿಧ ಬಗೆಯ ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ. ಆರೋಗ್ಯವಂತ ನಾಗರಿಕರೇ ದೇಶದ ಸಂಪತ್ತು ಎಂದು ಹೇಳಿದರು.
ಫಲಾನುಭವಿಗಳಿಗೆ ವಿವಿಧ ಬಗೆಯ ಕೈತೋಟದ ಗಿಡಗಳನ್ನು ವಿತರಿಸಲಾಯಿತು. ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ಮಹೇಶ್, ವಲಯ ಅರಣ್ಯ ಅಧಿಕಾರಿ ಶ್ರೀಧರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮಿತಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.