ಆನೇಕಲ್: ತಾಲ್ಲೂಕಿನ ಹುಸ್ಕೂರು ಸಮೀಪದಲ್ಲಿ ಒತ್ತುವರಿಯಾಗಿದ್ದ ಕೆರೆ ಜಾಗವನ್ನು ಜಿಲ್ಲಾಡಳಿತ ಶುಕ್ರವಾರ ತೆರವುಗೊಳಿಸಿ ಅಂದಾಜು ₹90ಲಕ್ಷ ಮೌಲ್ಯದ ಜಾಗವನ್ನು ರಕ್ಷಿಸಿ ವಶಪಡಿಸಿಕೊಂಡಿತು.
ಹುಸ್ಕೂರು ಸರ್ವೆ ನಂ.163ರಲ್ಲಿ 20ಗುಂಟೆ ಕೆರೆಯ ಜಾಗ ಹಲವು ವರ್ಷಗಳಿಂದ ಒತ್ತುವರಿಯಾಗಿತ್ತು. ಜಿಲ್ಲಾಧಿಕಾರಿ ಜಗದೀಶ್ ಮತ್ತು ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಜೆಸಿಬಿ ಮೂಲಕ ಒತ್ತುವರಿ ತೆರವುಗೊಳಿಸಿದರು.
ಸರ್ಕಾರಿ ಜಾಗಗಳನ್ನು ರಕ್ಷಣೆ ಮಾಡಬೇಕಾದುದ್ದು ಜಿಲ್ಲಾಡಳಿತದ ಗುರಿ. ಈ ನಿಟ್ಟಿನಲ್ಲಿ ಸರ್ಕಾರಿ ಜಾಗಗಳ ಒತ್ತುವರಿ ತೆರವಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಕೆರೆಯ ಜಾಗ ಒತ್ತುವರಿಯನ್ನು ತೆರವುಗೊಳಿಸಿದ್ದರಿಂದ ಜಲಮೂಲ ರಕ್ಷಿಸಿದಂತಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲೆಡೆ ಕಂದಾಯ ಇಲಾಖೆಯ ಸಕ್ರಿಯರಾಗಿ ಸರ್ಕಾರಿ ಭೂಮಿಗಳ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.
ತಹಶೀಲ್ದಾರ್ ಶಶಿಧರ್ ಮಾಡ್ಯಾಳ್, ಎಡಿಎಲ್ಆರ್ ಮದನ್, ಉಪತಹಶೀಲ್ದಾರ್ ಮಂಜುನಾಥ್ ಸ್ವಾಮಿ, ರಾಜಸ್ವ ನಿರೀಕ್ಷಕ ಪ್ರಶಾಂತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.