ದೇವನಹಳ್ಳಿ: ಹನುಮ ಜಯಂತಿ ಪ್ರಯುಕ್ತ ತಾಲ್ಲೂಕಿನಾದ್ಯಂತ ಆಂಜನೇಯಸ್ವಾಮಿ ದೇಗುಲಗಳಲ್ಲಿ ವಿಶೇಷ ಪೂಜೆ, ಅಲಂಕಾರ, ಹೋಮ ಹವನಾದಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರಿಗೆ ಪ್ರಸಾದ ವಿನಿಯೋಗ, ಅನ್ನದಾನ ನಡೆಯಿತು. ದಿನಪೂರ್ತಿ ದೇಗುಲಗಳಿಗೆ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಪಟ್ಟಣದ ಚಿಕ್ಕಕೆರೆ ಆಂಜನೇಯಸ್ವಾಮಿ ದೇಗುಲದಲ್ಲಿ 108 ಲೀಟರ್ ಹಾಲು, 54 ಲೀಟರ್ ಮೊಸರು, ಒಣಹಣ್ಣು ಸೇರಿದಂತೆ ತುಪ್ಪದಿಂದ ದೇವರಿಗೆ ವಿಶೇಷ ಅಭಿಷೇಕ ಮಾಡಲಾಯಿತು. ವಜ್ರಾಂಗಿ ಅಲಂಕಾರ ಭಕ್ತರ ಕಣ್ಮನ
ಸೆಳೆಯಿತು.
ಕೊಯಿರಾದ ಆಂಜನೇಯಸ್ವಾಮಿಗೆ ಫಲ ಪಂಚಾಮೃತ ಅಭಿಷೇಕ ಮಾಡಿ ವಿವಿಧ ಹೂವುಗಳ ಸಮೇತ ವಸ್ತ್ರಾಲಂಕಾರ ಮಾಡಲಾಗಿತ್ತು. ಶ್ರೀರಾಮ ಸಮೇತ ಓಂಕಾರವಿರುವ 108 ಬೆಳ್ಳಿನಾಣ್ಯಗಳ ಹಾರವನ್ನು ದೇವರಿಗೆ ಅರ್ಪಿಸಲಾಗಿತ್ತು. ಉದ್ದಿನ ವಡೆ ಮೂಲಕ ಹನುಮಂತನಿಗೆ ಸೇವೆ ಸಲ್ಲಿಸಿದ ಭಕ್ತರು, ಗ್ರಾಮದ ಕೋತಿಗಳಿಗೆ ಬಾಳೆಹಣ್ಣು
ವಿತರಿಸಿದರು.
ಪಟ್ಟಣದ ಪಾರಿವಾಟ ಗುಟ್ಟ, ತಾಲ್ಲೂಕು ಕಚೇರಿ, ಆವತಿ ತಿಮ್ಮರಾಯಸ್ವಾಮಿ, ಬಂಡೆಕೆರೆ, ಮಾರ್ಕೆಟ್ ಆಂಜನೇಯ, ಕೋಟೆ ರಾಘವೇಂದ್ರ ಸ್ವಾಮಿ ಮಠದಲ್ಲಿನ ಶ್ರೀವೀರಾಂಜನೇಯ, ಸರೋವರ ಬೀದಿ ಆಂಜನೇಯಸ್ವಾಮಿ, ಲಕ್ಷ್ಮಿಪುರ, ವಿಶ್ವನಾಥಪುರ, ಬನ್ನಿಮಂಗಲ, ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಹಾಗೂ ನಗರದ ಚೌಕ ಆಂಜನೇಯ ಸ್ವಾಮಿಗೆ ಮಾಡಿರುವ ಅಲಂಕಾರವನ್ನು ಭಕ್ತರು ಕಣ್ತುಂಬಿಕೊಂಡರು.
ತಾಲ್ಲೂಕಿನ ಕಾರಹಳ್ಳಿಯಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀಮದ್ ಹನುಮದ್ ಜಯಂತಿ ಮಹೋತ್ಸವದ ಅಂಗವಾಗಿ ದೇವತಾ ಪ್ರಾರ್ಥನೆ, ಗಣಪತಿ ಪೂಜಾ, ಸ್ವಸ್ತಿ ಪುಣ್ಯಾಹ ವಾಚನ, ಗಣಪತಿ ಹೋಮ, ಪವಮಾನ ಹೋಮ, ಶ್ರೀರಾಮತಾರಕ ಹೋಮ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.