ADVERTISEMENT

ಕಾಲು ಬಾಯಿ ರೋಗ ನಿರ್ಮೂಲನೆಗೆ ಪಣ: 8ನೇ ಸುತ್ತಿನ ಲಸಿಕೆ ಅಭಿಯಾನ ಆರಂಭ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 6:39 IST
Last Updated 7 ನವೆಂಬರ್ 2025, 6:39 IST
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 8ನೇ ಸುತ್ತಿನ ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ ಅಭಿಯಾನ ನಡೆಯುತ್ತಿದೆ
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 8ನೇ ಸುತ್ತಿನ ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ ಅಭಿಯಾನ ನಡೆಯುತ್ತಿದೆ   

ದೊಡ್ಡಬಳ್ಳಾಪುರ: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಬೆಂಗಳೂರು ಹಾಲು ಒಕ್ಕೂಟದ ಸಹಯೋಗದೊಂದಿಗೆ ಡಿ.2 ರವರೆಗೆ ನಡೆಯಲಿರುವ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮ 8ನೇ ಸುತ್ತಿನ ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ ಅಭಿಯಾನ ತಾಲ್ಲೂಕಿನಲ್ಲಿ ಆರಂಭವಾಗಿದೆ.

ಪಶು ವೈದ್ಯಕೀಯ ಇಲಾಖೆ ಸಿಬ್ಬಂದಿ ನಗರ ಪ್ರದೇಶ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ರಾಸುಗಳಿಗೆ ಲಸಿಕೆ ಹಾಕುತ್ತಿದ್ದಾರೆ.

ಕಾಲು ಬಾಯಿ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಸುಗಳಿಗೆ ಲಸಿಕೆ ಹಾಕುವುದರಿಂದ ಕಾಲು ಬಾಯಿ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಕಾಲುಬಾಯಿ ರೋಗವು ಸಾಂಕ್ರಾಮಿಕ ರೋಗವಾಗಿದ್ದು, ಅತಿ ಬೇಗನೆ ರಾಸುವಿನಿಂದ ರಾಸುವಿಗೆ ಹರಡುತ್ತಿದೆ. 2030ಕ್ಕೆ ನಮ್ಮ ದೇಶದಿಂದ ಸಂಪೂರ್ಣ ಕಾಲು ಬಾಯಿ ರೋಗ ನಿರ್ಮೂಲನೆ ಮಾಡಬೇಕು ಎನ್ನುವ ಉದ್ದೇಶದಿಂದ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ ಎಂದು ತಾಲ್ಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ.ಸದಾಶಿವ ಮೂರ್ತಿ ತಿಳಿಸಿದರು.

ADVERTISEMENT

ರೈತರು ರಾಸುಗಳಿಗೆ ಲಸಿಕೆ ಹಾಕಿಸಿಕೊಳ್ಳುವುದರಿಂದ ರಾಸುಗಳಲ್ಲಿನ ಹಾಲಿನ ಪ್ರಮಾಣ ಕಡಿಮೆ ಆಗುವುದಿಲ್ಲ. ರಾಸುಗಳ ಗಾಯಗಳ ಸೂಕ್ತ ಉಪಚಾರದ ಜೊತೆಯಲ್ಲಿ ಖನಿಜ ಮಿಶ್ರಣ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿಗಳನ್ನು ಬಳಸುವುದರಿಂದ ಜಾನುವಾರುಗಳು ನಿಶ್ಯಕ್ತವಾಗುವುದನ್ನು ತಪ್ಪಿಸಬಹುದು. ಕಾಲು ಬಾಯಿ(ಗೆರಸಲು) ಜ್ವರ ರೋಗವು ವೈರಾಣುವಿನಿಂದ ಉಂಟಾಗಲಿದ್ದು, ಇದು ಸೀಳು ಗೊರಸುಗಳುಳ್ಳ ರಾಸುಗಳಲ್ಲಿ ಕಂಡುಬರುತ್ತದೆ. ಈ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದ ಕಾರಣ, ಕಾಲು ಬಾಯಿ ರೋಗ ನಿಯಂತ್ರಿಸಲು ರಾಸುಗಳಿಗೆ ಲಸಿಕೆ ಹಾಕಿಸುವುದೇ ಏಕೈಕ ಮಾರ್ಗವಾಗಿದೆ ಎಂದು ತಿಳಿಸಿದರು.

ಚರ್ಮಗಂಟು ರೋಗ ಸಹ ವೈರಾಣುವಿನಿಂದ ಬರುವ ರೋಗವಾಗಿದ್ದು,ರಾಸುಗಳಿಗೆ ತೀವ್ರ ತೊಂದರೆ ನೀಡುತ್ತದೆ. ಹಾಗಾಗಿ ಜಾನುವಾರುಗಳಿಗೆ ಪ್ರತಿ 6 ತಿಂಗಳಿಗೊಮ್ಮೆ ಲಸಿಕೆ ಹಾಕಿಸುವುದು ಅಗತ್ಯವಾಗಿದೆ ಎಂದರು.

ಲಸಿಕೆ ವೇಳೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಎನ್.ಜಗದೀಶ್ ಕುಮಾರ್, ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ವೈ.ಕುಮಾರಸ್ವಾಮಿ,ಡಾ.ಎಸ್‌.ಜೆ.ದೀಪಕ್ ಹಾಗೂ ಇಲಾಖೆ ಸಿಬ್ಬಂದಿ ಇದ್ದರು.

46618 ರಾಸುಗಳಿಗೆ ಲಸಿಕೆ ಗುರಿ

ತಾಲ್ಲೂಕಿನಲ್ಲಿ ನಡೆದ 7ನೇ ಸುತ್ತಿನ ಕಾಲುಬಾಯಿ ಲಸಿಕೆ ಮಾಹಿತಿಯನ್ವಯ 46618 ರಾಸುಗಳಿಗೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು ಇದರೊಂದಿಗೆ 3 ತಿಂಗಳು ಮೇಲ್ಪಟ್ಟ ಕರುಗಳಿಗೆ ಲಸಿಕೆ ಹಾಕಲಾಗುವುದು. ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ನಿಗದಿತ ವೇಳಾಪಟ್ಟಿಯಂತೆ ಗ್ರಾಮಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಮಾಹಿತಿಯನ್ನು ಭಾರತ್ ಪಶುಧನ ತಂತ್ರಾಂಶದಲ್ಲಿ ನಮೂದಿಸಲಾಗುವುದು ಎಂದು ಮುಖ್ಯ ಪಶುವೈದ್ಯಾಧಿಕಾರಿ ಡಾ.ಸದಾಶಿವ ಮೂರ್ತಿ ತಿಳಿಸಿದರು.

ತಾಲ್ಲೂಕಿನಲ್ಲಿ 40 ತಂಡಗಳಲ್ಲಿ 470ಬ್ಲಾಕ್‌ಗಳಲ್ಲಿ ಒಟ್ಟು 97 ಅಧಿಕಾರಿ ಹಾಗೂ ಸಿಬ್ಬಂದಿಗಳು ರಾಸುಗಳಿಗೆ ಲಸಿಕೆ ಹಾಕುತ್ತಿದ್ದಾರೆ. ರೈತರು ತಮ್ಮ 3 ತಿಂಗಳ ಮೇಲ್ಪಟ್ಟ ಎಲ್ಲಾ ರಾಸುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.