ADVERTISEMENT

ಎಲ್ಲ ಸಂಗೀತಕ್ಕೂ ಜಾನಪದ ಮೂಲಬೇರು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 14:08 IST
Last Updated 6 ಫೆಬ್ರುವರಿ 2020, 14:08 IST
ಚನ್ನಪಟ್ಟಣ ತಾಲ್ಲೂಕಿನ ಬಾಣಗಹಳ್ಳಿ ಗ್ರಾಮದಲ್ಲಿ ನಡೆದ ಜಾನಪದ ಕಲೋತ್ಸವ ಕಾರ್ಯಕ್ರಮವನ್ನು ಹನಿಯಂಬಾಡಿ ಶೇಖರ್ ಉದ್ಘಾಟಿಸಿದರು
ಚನ್ನಪಟ್ಟಣ ತಾಲ್ಲೂಕಿನ ಬಾಣಗಹಳ್ಳಿ ಗ್ರಾಮದಲ್ಲಿ ನಡೆದ ಜಾನಪದ ಕಲೋತ್ಸವ ಕಾರ್ಯಕ್ರಮವನ್ನು ಹನಿಯಂಬಾಡಿ ಶೇಖರ್ ಉದ್ಘಾಟಿಸಿದರು   

ಚನ್ನಪಟ್ಟಣ: ಎಲ್ಲ ಸಂಗೀತ ಪರಿಕರಗಳಿಗೂ ಜಾನಪದವೇ ತಾಯಿಬೇರು ಎಂದು ಕಲಾವಿದ ಹನಿಯಂಬಾಡಿ ಶೇಖರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಾಣಗಹಳ್ಳಿ ಗ್ರಾಮದಲ್ಲಿ ಶ್ರೀ ಹುಚ್ಚಮ್ಮ ಸಾಂಸ್ಕೃತಿಕ ಕಲಾ ಸಂಘದಿಂದ ಗುರುವಾರ ಆಯೋಜಿಸಿದ್ದ ಜಾನಪದ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ನಮ್ಮ ಪೂರ್ವಿಕರು ದುಡಿಮೆ ಮಾಡುವಾಗ ತಮ್ಮ ಆಯಾಸವನ್ನು ಕಡಿಮೆ ಮಾಡಿಕೊಳ್ಳಲು ಪದಗಳನ್ನು ಕಟ್ಟಿ ಹಾಡುತ್ತಿದ್ದರು. ಅದು ಎಲ್ಲ ಕಲೆಗಳಿಗೂ ಮೂಲವಾಯಿತು. ಬಾಯಿಂದ ಬಾಯಿಗೆ ಉಳಿದು ಬಂದ ಜ‌ನಪದ ಗೀತೆಗಳನ್ನು ನಾವು ಉಳಿಸಿ ಬೆಳೆಸಬೇಕಾಗಿದೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಗಾಯಕ ಜಯಸಿಂಹ ಮಾತನಾಡಿ, ‘ಕಲೆ ಸಾಹಿತ್ಯ ಸಂಸ್ಕೃತಿ ಜಾನಪದ ನಿಂತ ನೀರಾಗದೆ ಹರಿಯುವ ನೀರಾಗಬೇಕು. ಜಾನಪದ ಹಾಡುಗಳನ್ನು ಮಕ್ಕಳಿಗೆ ತರಬೇತಿ ನೀಡುವ ಮೂಲಕ ಚಿಕ್ಕಂದಿನಿಂದಲೇ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಆಧುನಿಕ ಮಾಧ್ಯಮಗಳಿಗೆ ಮಾರುಹೋಗಿರುವ ನಮ್ಮ ಯುವಸಮೂಹವನ್ನು ನಮ್ಮ ಸಂಸ್ಕೃತಿಗೆ ಮರಳಿ ಕರೆತಂದು ಜಾನಪದನ್ನು ಉಳಿಸಿ ಬೆಳೆಸಬೇಕು’ ಎಂದರು.

ಸಂಘದ ಅಧ್ಯಕ್ಷ ಚಕ್ಕೆರೆ ಸಿದ್ದರಾಜು, ಗ್ರಾಮದ ಮುಖಂಡರಾದ ಭೀಮೇಶ್, ಚಿಕ್ಕಹುಚ್ಚಯ್ಯ, ನಾರಾಯಣಮ್ಮ ಉಪಸ್ಥಿತರಿದ್ದರು. ಗಾಯಕರಾದ ಶ್ರೀನಿವಾಸ್, ರೋಜ್ ಮೇರಿ, ಪ್ರಕಾಶ್ ಬಾಣಂತಹಳ್ಳಿ, ಅರುಣ್, ದೇವರಾಜು, ಲಕ್ಷ್ಮಮ್ಮ, ಸುಕನ್ಯ ಜನಪದ ಗೀತಗಾಯನ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.