ಹೊಸಕೋಟೆ: ನಗರಕ್ಕೆ ಕಸದ ವಿಲೇವಾರಿ ಒಂದು ಸವಾಲಾಗಿ ಪರಿಣಮಿಸಿದ್ದು, ನಗರದ ಖಾಲಿ ನಿವೇಶನಗಳು ತ್ಯಾಜ್ಯ ವಿಲೇವಾರಿ ತಾಣವಾಗಿ ಪರಿಣಮಿಸುತ್ತಿದ್ದ, ಅಕ್ಕಪಕ್ಕದ ಮನೆಯವರು ಭಯದಿಂದ ಜೀವನ ನಡೆಸುವ ವಾತಾವರಣ ನಿರ್ಮಾಣವಾಗಿದೆ.
ಖಾಲಿ ನಿವೇಶನಗಳಲ್ಲಿ ಕಸ ಸುರಿಯುತ್ತಿರುವುದರಿಂದ ಅಶುಚಿತ್ವ ತಾಂಡವವಾಡುತ್ತಿತು. ದುರ್ವಾಸನೆ ಬೀರುತ್ತದೆ. ಅಲ್ಲದೆ ವಿಷಜಂತುಗಳು ಹೆಚ್ಚಾಗಿದೆ. ಈ ಬಗ್ಗೆ ಯಾರನ್ನು ಪ್ರಶ್ನಿಸಬೇಕೆಂದು ತಿಳಿಯದೆ ಸುತ್ತಮುತ್ತಲಿನ ಮನೆಯವರು ಆತಂಕದಿಂದಲೇ ದಿನ ದೂಡುವಂತಾಗಿದೆ.
ನಿತ್ಯ ಬೆಳಗಿನ ಜಾವ ಮನೆ ಬಾಗಿಲಿಗೆ ನಗರಸಭೆಯ ಕಸ ವಿಲೇವಾರಿ ವಾಹನ ಬಂದರೂ ಕಸ ನೀಡದ ನಗರವಾಸಿಗಳು ಹಾಗೂ ಮಳಿಗೆದಾರರು ಖಾಲಿ ನಿವೇಶನಗಳಲ್ಲಿ ಕಸ ಸುರಿಯುತ್ತಿದ್ದಾರೆ. ಇದರಿಂದ ನಗರದ ಅಂದ ಮತ್ತು ಆರೋಗ್ಯ ಎರಡೂ ಹಾಳಾಗುತ್ತಿದೆ.
ಖಾಲಿ ನಿವೇಶನಗಳಲ್ಲಿ ಕಸಕಡ್ಡಿ ತುಂಬಿರುವುದರಿಂದ ಇಲಿ, ಹಾವುಗಳು ಮತ್ತು ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಇವು ಆಗ್ಗಾಗ್ಗೆ ಮನೆಗಳಿಗೆ ನುಗ್ಗಿ ಕಾಟ ಕೊಡುತ್ತಿವೆ ಎನ್ನುತ್ತಾರೆ ಸ್ಥಳೀಯರು.
ಖಾಲಿನಿವೇಶನ ಮೂಲಕ ಹಾದು ಹೋಗಿರುವ ಚರಂಡಿಗಳಲ್ಲಿ ತ್ಯಾಜ್ಯ ಸೇರಿಕೊಂಡು ಕೊಳಚೆ ನೀರು ಸರಾಗಿ ಹರಿಯದೇ, ಒಂದೆಡೆ ಶೇಖರಣೆಗೊಂಡು ದುರ್ನಾತ ಬೀರುತ್ತಿದೆ.
ನಾಯಿಗಳ ಹಾವಳಿ:
ನಿವೇಶನಗಳಲ್ಲಿ ಬೀಳುವ ತ್ಯಾಜ್ಯಕ್ಕೆ ಆಗ್ಗಾಗ್ಗೆ ನಾಯಿಗಳು ದಾಂಗುಡಿಯಿಡುತ್ತಿದೆ. ಆ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು, ಸಣ್ಣಪುಟ್ಟ ಮಕ್ಕಳು ಭಯಬೀತರಾಗಿ ನಡೆದಾಡಬೇಕಾಗಿದೆ. ಸಣ್ಣಪುಟ್ಟ ಮಕ್ಕಳಂತೂ ಸ್ವಲ್ಪ ಯಾಮಾರಿದರೆ ನಾಯಿಗಳ ದಾಳಿಗೆ ಬಲಿಯಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇವೆಲ್ಲವನ್ನು ಪರಿಗಣಿಸಿ ನಗರಸಭೆ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.
ನಿವೇಶನದ ಕಸದ ಸಮಸ್ಯೆಯಾಗಲಿ ಇತರೆಡೆ ಕಸದ ಸಮಸ್ಯೆಯಾಗಲಿ ಪರಿಹಾರವಾಗುವುದು ಸಾರ್ವಜನಿಕರು ಆಲೋಚಿಸಿ ಕಸ ವಿಲೇವಾರಿ ಮಾಡಿದಾಗ ಮಾತ್ರ.ಕೇಶವಮೂರ್ತಿ ನಗರಸಭೆ ಸದಸ್ಯ
ಸೂಕ್ತ ಕಸ ವಿಲೇವಾರಿಯಾಗಬೇಕೆಂದರೆ ನಾಗರಿಕರ ಜವಾಬ್ದಾರಿಯೂ ಮುಖ್ಯ. ನಗರಸಭೆಯ ಕಸ ವಿಲೇವಾರಿ ವಾಹನಕ್ಕೆ ನಿತ್ಯ ತಪ್ಪದೆ ಕಸ ನೀಡಬೇಕು. ಜತೆಗೆ ನಗರಸಭೆ ಅಧಿಕಾರಿಗಳು ಖಾಲಿ ನಿವೇಶನಗಳ ಮಾಲೀಕರಿಗೆ ಈ ಕುರಿತು ಮನವರಿಕೆ ಮಾಡಿಕೊಡಬೇಕು. ನಿಯಮ ಪಾಲಿಸದಿದ್ದರೆ ನೋಟಿಸ್ ನೀಡಬೇಕು– ಸಮೀರ್ ಅಸದ್ ಎಎಪಿ ತಾಲ್ಲೂಕು ಅಧ್ಯಕ್ಷ ಹೊಸಕೋಟೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.