ಪ್ರಜಾವಾಣಿ ವಾರ್ತೆ
ಆನೇಕಲ್: ವರ್ಷದಲ್ಲಿ ಒಂದು ತಿಂಗಳು ಮಾತ್ರ ಪೂಜೆ ಸ್ವೀಕರಿಸುವ ಗುಮ್ಮಳಾಪುರ ಗೌರಿ ದೇವಿ ದೇವಾಲಯದಲ್ಲಿ ಗೌರಿಹಬ್ಬದಿಂದ ಇಲ್ಲಿಯವರೆಗೆ ಪೂಜಾ ಕೈಂಕರ್ಯ ಮುಕ್ತಾಯವಾಗಿದ್ದು, ಸೆ.25ರಂದು ಗೌರಿ ದೇವಿಯನ್ನು ಜಲಧಿವಾಸಕ್ಕೆ ಕಳುಹಿಸಲು ಗುಮ್ಮಳಾಪುರ ಸಜ್ಜಾಗಿದೆ.
ಈ ವರ್ಷದ ಗುಮ್ಮಳಾಪುರದ ಗೌರಿ ದೇವಿ ಜಾತ್ರೆಯು ಸೆ.25ರಂದು ನಡೆಯಲಿದೆ. ಜಾತ್ರೆಯ ಪ್ರಯುಕ್ತ ಸೋಮವಾರದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ರೂಪಿಸಲಾಗಿದೆ. ಸೆ.22 ಬಸವನ ಜಾತ್ರೆ, ಸೆ.23 ವೀರಭದ್ರಸ್ವಾಮಿ ಜಾತ್ರೆಯ ಪ್ರಯುಕ್ತ ಗುಮ್ಮಳಾಪುರದಲ್ಲಿ ವೀರಗಾಸೆ, ಅಗ್ನಿಕೊಂಡ, ಆರತಿ ಪೂಜೆ, ಸೆ.24 ಗ್ರಾಮದ ಸಮಸ್ತ ದೇವರುಗಳ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಗೌರಿ ಹಬ್ಬದ ದಿನ ಗೌರಿ ದೇವಿಯ ಮೂರ್ತಿಯನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಈ ಮೂರ್ತಿಯನ್ನು ಗುಮ್ಮಳಾಪುರದ ಹಿರೇಮಠದಲ್ಲಿಯೇ ತಿದ್ದಿ ಸಿದ್ದಪಡಿಸುವುದು ವಿಶೇಷ. ನಂತರ ಗಣೇಶ ಚತುರ್ಥಿ ದಿನದಂದು ಗಣೇಶನ ಮೂರ್ತಿಯನ್ನು ಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಅಂದಿನಿಂದ ಒಂದು ತಿಂಗಳವರೆಗೂ ಮಾತ್ರ ದೇವಾಲಯ ತೆರೆದಿರುತ್ತದೆ.
ಒಂದು ತಿಂಗಳ ಕಾಲ ಗೌರಿ ದೇವಿಯ ಆತಿಥ್ಯ ನಡೆಸುವ ಭಕ್ತರು ಜಾತ್ರೆಯ ದಿನದಂದು ಗುಮ್ಮಳಾಪುರದ ಬಳಿ ಇರುವ ಗೌರಮ್ಮನ ಕೆರೆಯವರೆಗೂ ಗಣಪತಿ ಮತ್ತು ಗೌರಿಯ ಪ್ರತ್ಯೇಕ ತೇರುಗಳನ್ನು ನಿರ್ಮಿಸಿ ಉತ್ಸವದೊಂದಿಗೆ ಕೊಂಡೊಯ್ದು ವಿಸರ್ಜಿಸುತ್ತಾರೆ. ಬೇರೆ ಕಡೆ ತೇರುಗಳನ್ನು ಎಳೆದರೆ ಇಲ್ಲಿ ತೇರುಗಳನ್ನು ನೂರಾರು ಭಕ್ತರು ಹೊತ್ತು ವೇಗವಾಗಿ ಓಡುತ್ತಾ ಕೊಂಡೊಯ್ಯುವುದು ರೋಮಾಂಚಕಾರಿಯಾಗಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.