ಹೊಸಕೋಟೆ: ‘ಜನರಿಗೆ ಲಸಿಕೆ ನೀಡುವುದರಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದ ಪರಿಣಾಮವಾಗಿ ಇಂದು ಸಮಸ್ಯೆ ಎದುರಿಸುವಂತಾಗಿದೆ’ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ತಾಲ್ಲೂಕಿನ ಕೊಳತೂರು ಗ್ರಾಮದಲ್ಲಿ ಫೀವರ್ ಕ್ಯಾಂಪ್ಗೆ ಭೇಟಿ ನೀಡಿ ಮಾತನಾಡಿದರು.
‘ಪ್ರಾರಂಭದಲ್ಲಿ ಸರ್ಕಾರ ಲಸಿಕೆಗೆ ಹೆಚ್ಚಿನ ಪ್ರಚಾರ ನೀಡಬೇಕಾಗಿತ್ತು. ಜನತೆ ಕೇಂದ್ರ ಸರ್ಕಾರ ಹೇಳಿದಂತೆ ಕೇಳುತ್ತಿತ್ತು. ಕಳೆದ ವರ್ಷ ದೀಪ ಹಚ್ಚಿದವರು, ತಟ್ಟೆ ಬಾರಿಸಿದವರು ಈ ಬಾರಿ ಲಸಿಕೆಯ ಬಗ್ಗೆ ತಿಳಿಸಿದ್ದರೆ ಅದನ್ನು ಮಾಡುತ್ತಿದ್ದರು. ಆದರೆ ಸರ್ಕಾರ ಅದನ್ನು ಮಾಡದೆ ಕೊರೊನಾ ಎರಡನೇ ಅಲೆ ಹೆಚ್ಚಾದ ನಂತರ ಎಚ್ಚೆತ್ತುಕೊಂಡು ಈಗ ಸಮಸ್ಯೆ ತಂದೊಡ್ಡಿದೆ’ ಎಂದರು.
ರಾಜ್ಯದಲ್ಲಿಯೇ ಮೊದಲ ಬಾರಿ ಫೀವರ್ ಕ್ಲಿನಿಕ್ ವ್ಯವಸ್ಥೆಯನ್ನು ಎಂವಿಜೆ ಆಸ್ಪತ್ರೆ ಮತ್ತು ಜಿಲ್ಲಾ ಆಡಳಿತ ಮತ್ತು ತಾಲ್ಲೂಕು ಆಡಳಿತ ಸಹಯೋಗದೊಂದಿಗೆ ನಡೆಸಲಾಗುತ್ತಿದೆ. ಗ್ರಾಮಾಂತರದ ಜನತೆಯ ಅನುಕೂಲಕ್ಕಾಗಿ ಆಸ್ಪತ್ರೆಯನ್ನೇ ಜನರ ಬಳಿ ತೆಗೆದುಕೊಂಡು ಹೋಗುವ ಯೋಜನೆಯೇ ಫೀವರ್ ಕ್ಲಿನಿಕ್ ಎಂದರು.
ತಾಲ್ಲೂಕಿನಲ್ಲಿ 15 ವಾಹನಗಳಲ್ಲಿ ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೂ ತೆರಳಿ ಅಲ್ಲಿಯೇ ಜನರನ್ನು ಪರೀಕ್ಷಿಸಲಾಗುತ್ತದೆ. ಸೋಂಕಿನ ಲಕ್ಷಣ ಕಾಣಿಸಿದರೆ ಅವರಿಗೆ ಕೊರೊನಾ ಪರೀಕ್ಷೆ ಮಾಡಿಸಲು ಸಲಹೆ ನೀಡಿ, ಪ್ರಾಥಮಿಕ ಹಂತದ ಔಷಧಿ ನೀಡಲಾಗುತ್ತದೆ ಎಂದರು.
ಮುಖಂಡ ಕೋಡಿಹಳ್ಳಿ ಸುರೇಶ್, ಹನುಮಂತೇಗೌಡ, ಕೃಷ್ಣಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.