ADVERTISEMENT

ಪಶು ಪಾಲನೆಯಿಂದ ಆರ್ಥಿಕತೆ ವೃದ್ಧಿ; ಅಪಹಾಸ್ಯ ಮಾಡಿದ ಸ್ನೇಹಿತರಿಂದಲೇ ಮೆಚ್ಚುಗೆ!

ಅಪಹಾಸ್ಯ ಮಾಡಿದ ಸ್ನೇಹಿತರೇ ಮೆಚ್ಚಿಕೊಂಡರು

ವಡ್ಡನಹಳ್ಳಿ ಬೊಜ್ಯನಾಯ್ಕ
Published 3 ಸೆಪ್ಟೆಂಬರ್ 2019, 19:30 IST
Last Updated 3 ಸೆಪ್ಟೆಂಬರ್ 2019, 19:30 IST
ಗೋ ಶಾಲೆಯಲ್ಲಿ ಎಳೆ ಕರುಗಳು
ಗೋ ಶಾಲೆಯಲ್ಲಿ ಎಳೆ ಕರುಗಳು   

ದೇವನಹಳ್ಳಿ:ಅಂಬಾ ಎಂಬ ಹಸುಗಳು, ಕುಣಿಯುವ ಕಂದ ಕರುಗಳು...ಇದೆಲ್ಲ ಕೋಡಿಮಂಚೇನಹಳ್ಳಿ ಗೋಶಾಲೆ ಆವರಣದಲ್ಲಿ ಕಂಡು ಬರುವ ದೃಶ್ಯಗಳು.

ಇಲ್ಲಿನ ಪಶುಪಾಲಕರೊಬ್ಬರು ಯೋಗ ಗುರು ಅಶ್ವಥ್‌ಜೀ ಸಲಹೆ ಮೇರೆಗೆ ಎರಡು ವರ್ಷಗಳ ಹಿಂದೆ ಎರಡು ಹಸುಗಳಿಂದ ಗೋಶಾಲೆ ಆರಂಭಿಸಿದ್ದಾರೆ. ಬಿಡಾಡಿ ಹಸುಗಳಿಗೂ ಇಲ್ಲಿ ಆಶ್ರಯ ನೀಡಿದ್ದಾರೆ. ಅಕ್ರಮ ಸಾಗಣೆ ಸಂದರ್ಭ ವಶಪಡಿಸಿಕೊಂಡ ಹಸುಗಳನ್ನು ಪೊಲೀಸರು ಇಲ್ಲಿ ತಂದು ಬಿಡುತ್ತಾರೆ ಎಂದು ಗೋಶಾಲೆ ಪಾಲಕ ಮತ್ತು ಮಾಲೀಕ ಉಮೇಶ್ ತಿಳಿಸಿದರು.

‘ಪ್ರಸ್ತುತ ಒಂದು ಎಕರೆಯಲ್ಲಿ ಗೋಶಾಲೆ ನಿರ್ಮಾಣವಾಗಿದೆ. ಒಣಮೇವು ದಾಸ್ತಾನು ಇದೆ. ದಿನನಿತ್ಯದ ಹಸುವಿನ ಗಂಜಲ ಸಿಮೆಂಟ್ ತೊಟ್ಟಿಗೆ ಶೇಖರಣೆ ಮಾಡಲಾಗುತ್ತದೆ. ದಾಸ್ತಾನು ಮಾಡಿದ ಗಂಜಲ ಮತ್ತು ಸೆಗಣಿಯನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ’ ಎಂದು ಉಮೇಶ್‌ ವಿವರಿಸಿದರು.

ADVERTISEMENT

ಯಂತ್ರೋಪಕರಣ ಅವಲಂಬಿಸಿರುವ ರೈತರು ಪಶುಗಳ ಅವಲಂಬನೆ ಕಡಿಮೆ ಮಾಡಿದ್ದಾರೆ. ಬೆರಳೆಣಿಕೆಯಷ್ಟು ರೈತರು ಮಾತ್ರ ಪಶುಪಾಲನೆಯಲ್ಲಿ ತೊಡಗಿದ್ದಾರೆ. ಅದರಲ್ಲೂ ನಾಟಿ ಹಸುಗಳ ಮೇಲೆ ಪಾಲಕರ ಗಮನ ಕಡಿಮೆಯಾಗಿದೆ. ನಾಟಿ ಹಸುಗಳನ್ನು ಸಾಕುವುದು ವ್ಯರ್ಥ ಕಸರತ್ತು. ಇದರ ಬದಲು ವಿವಿಧ ಜಾತಿಯ ಮಿಶ್ರತಳಿ ಪಶುಗಳನ್ನು ಪಾಲನೆ ಮಾಡಿದರೆ ಹೈನುಗಾರಿಕೆಯಿಂದ ಆರ್ಥಿಕ ಪ್ರಗತಿ ಸಾಧಿಸಬಹುದೆಂಬ ಲೆಕ್ಕಾಚಾರ ರೈತರದ್ದು.

ಮಿಶ್ರತಳಿ: ಪಾಲನೆ ಮಾಡಿದ ಆರೋಗ್ಯಯುತ ‌ಮಿಶ್ರತಳಿ ಹಸುವಿನಿಂದ ಕನಿಷ್ಠ 15ರಿಂದ 20ಲೀಟರ್ ಗುಣಮಟ್ಟದ ಹಾಲು ಪಡೆಯಬಹುದು. ಸೆಗಣಿ ಮಾರಾಟದಿಂದಲೂ ಲಾಭ ನಿರೀಕ್ಷೆ ಮಾಡಬಹುದು ಎನ್ನುವುದು ಕೆಲವರ ವಾದ. ನಾಟಿ ಹಸುವಿನ ಹಾಲು, ಮೊಸರು, ಬೆಣ್ಣೆ, ಮಜ್ಜಿಗೆ, ತುಪ್ಪದ ಗುಣಮಟ್ಟ ಮಿಶ್ರತಳಿಯಿಂದ ಸಾಧ್ಯವೇ? ಎನ್ನುವುದು ಕೆಲವು ಪಶುಪಾಲಕರ ಪ್ರಶ್ನೆ.

ಪಶುಪಾಲನೆ ಕೈತುಂಬಾ ಕೆಲಸ ನೀಡಿದೆ. ಆರೋಗ್ಯ ಸುಧಾರಣೆಗೂ ವರದಾನವಾಗಿದೆ. ಆರಂಭದಲ್ಲಿ ಗೋಶಾಲೆ ಆರಂಭಿಸುವುದಾಗಿ ಸ್ನೇಹಿತರ ಬಳಿ ಪ್ರಸ್ತಾವ ಮಾಡಿದಾಗ ಅಪಹಾಸ್ಯ ಮಾಡಿದವರೇ ಹೆಚ್ಚು. ಈಗ ಎಲ್ಲರೂ ಮೆಚ್ಚಿಕೊಂಡಿದ್ದಾರೆ ಎಂದು ಸಂತಸ ಹಂಚಿಕೊಂಡರು ಉಮೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.