ಆನೇಕಲ್: ಪಟ್ಟಣದ ರಾಮಕುಟಿರದಲ್ಲಿ ರೇಣುಕಾರಾಧ್ಯ ಕಲಾವಿದರ ಬಳಗ ಮತ್ತು ಆನೇಕಲ್ ಚಂದ್ರ ಸೇವಾ ಟ್ರಸ್ಟ್ನಿಂದ ಗುರುವಂದನ ಮಹೋತ್ಸವದ ಪ್ರಯುಕ್ತ ರಂಗಭೂಮಿಯ ಗುರುಗಳಿಗೆ ಅಭಿನಂದನೆ ಮತ್ತು ರಂಗಗೀತೆಗಳ ಗಾಯನ ಬುಧವಾರ ನಡೆಯಿತು.
ಗುರುಪೂರ್ಣಿಮೆ ಪ್ರಯುಕ್ತ ರಾಜ್ಯದ ವಿವಿಧಡೆಯ 30ಕ್ಕೂ ಹೆಚ್ಚು ರಂಗಭೂಮಿ ಗುರುಗಳನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ರಂಗಗೀತೆಗಳ ಗಾಯನ ನಡೆಸಿಕೊಟ್ಟರು.
ಶಾಸಕ ಬಿ.ಶಿವಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಂಗಭೂಮಿ ಕಲಾವಿದರಿಗೆ ಹೆಚ್ಚಿನ ಸ್ಥಾನಮಾನ ಮತ್ತು ಗೌರವ ದೊರೆಯುತ್ತಿಲ್ಲ. ರಂಗಭೂಮಿ ಕಲಾವಿದರು ಸಮಾಜದ ಬದಲಾವಣೆಗೆ ಅವಶ್ಯಕ. ನಗರೀಕರಣದ ಪ್ರಭಾವ ಮತ್ತು ಟಿವಿ ಮೊಬೈಲ್ ಬಳಕೆಯಿಂದ ರಂಗಭೂಮಿಗೆ ಆದ್ಯತೆ ದೊರೆಯುತ್ತಿಲ್ಲ ಎಂದು ಬೇಸರಿಸಿದರು.
ರಾಜಪುರ ಸಂಸ್ಥಾನ ಮಠದ ಡಾ. ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಯುವ ಸಮುದಾಯಕ್ಕೆ ರಂಗಭೂಮಿಯ ಮಹತ್ವ ತಿಳಿಯುತ್ತಿಲ್ಲ. ಹಾಗಾಗಿ ರಂಗಭೂಮಿಯ ಸಾರ ತಿಳಿಸಲು ಸಂಘ–ಸಂಸ್ಥೆಗಳು ಹೆಚ್ಚಿನ ಕಾರ್ಯಕ್ರಮ ರೂಪಿಸಬೇಕು. ಶಾಲಾ- ಕಾಲೇಜುಗಳಲ್ಲಿ ರಂಗಭೂಮಿ ಕಲೆಗೆ ಪ್ರಾಮುಖ್ಯತೆ ನೀಡಬೇಕು ಎಂದರು.
ಪುರಸಭಾ ಅಧ್ಯಕ್ಷೆ ಸುಧಾ ನಿರಂಜನ್, ಉಪಾಧ್ಯಕ್ಷೆ ಭುವನ ದಿನೇಶ್, ಸದಸ್ಯರಾದ ಎನ್.ಎಸ್.ಪದ್ಮನಾಭ, ರಾಜೇಂದ್ರ ಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆದೂರು ಪ್ರಕಾಶ್, ರೇಣುಕಾರಾಧ್ಯ ಕಲಾವಿದರ ಬಳಗದ ಮುಖ್ಯಸ್ಥರಾದ ವಿಜಯ್ ಕುಮಾರ್ ಗೌಡ, ರೇಣುಕಾರಾಧ್ಯ, ಶೆಟ್ಟಿಹಳ್ಳಿ ಮಲ್ಲಿಕಾರ್ಜುನ್, ಪದಾಧಿಕಾರಿಗಳಾದ ಕೆ.ಚಂದ್ರಪ್ಪ, ಕೃಪೇಂದ್ರ ಗೌಡ, ಮಹದೇಶ ಗೌಡ, ನವೀನ್, ಸಾಗರ್, ಲೋಕೇಶ್, ಶ್ರೀನಿವಾಸ ರೆಡ್ಡಿ, ಅನಿಲ್ ರೆಡ್ಡಿ, ತಿರುಮಲೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.