ವಿಜಯಪುರ: ಪುರಾತನ ನಗರೇಶ್ವರಸ್ವಾಮಿ ದೇವಾಲಯದ ಹರಿಹರ ಕಲ್ಲುಗಾಲಿ ಬ್ರಹ್ಮರಥೋತ್ಸವ ಹಾಗೂ ಬಲಮುರಿ ಗಣಪತಿ, ಭದ್ರಕಾಳಿ ಸಮೇತ ರುದ್ರದೇವರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಗಾಂಧಿ ಚೌಕದಲ್ಲಿ ಶುಕ್ರವಾರ ನಗರೇಶ್ವರಸ್ವಾಮಿ ದೇವಾಲಯದ ಅಭಿವೃದ್ಧಿ ಟ್ರಸ್ಟ್, ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ಯುವಕ ಸಂಘ ಆಶ್ರಯದಲ್ಲಿ ನಡೆದ ನಗರೇಶ್ವರ ಹಾಗೂ ಆದಿನಾರಾಯಣಸ್ವಾಮಿ ಆರನೇ ವರ್ಷದ ಕಲ್ಲುಗಾಲಿ ಬ್ರಹ್ಮರಥೋತ್ಸವಕ್ಕೆ ಸಾವಿರಾರು ಮಂದಿ ಭಕ್ತಾದಿಗಳು ಸಾಕ್ಷಿಯಾದರು.
ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಅಭಿಷೇಕ, ರಥಾಂಗ ಹೋಮ ನಡೆಯಿತು. ಮಧ್ಯಾಹ್ನ ಜ್ಯೋತಿನಗರ ವೈಶ್ಯ ಶ್ರೀಲಕ್ಷ್ಮಿ ವೆಂಕಟರಮಣ ಗಾಣಿಗರ ಸೇವಾ ಟ್ರಸ್ಟ್ ವತಿಯಿಂದ ಭಾಗವತ ಸೇವೆ ನಡೆಯಿತು.
ರಥೋತ್ಸವದಲ್ಲಿ ಸೇರಿದ್ದ ಭಕ್ತ ಸಮೂಹ ಹರೋಹರ ಹಾಗೂ ಗೋವಿಂದ ನಾಮಸ್ಮರಣೆ ಜಯಘೋಷದೊಂದಿಗೆ ರಥಕ್ಕೆ ಹೂವು ಎಸೆಯುವ ಮೂಲಕ ಇಷ್ಟಾರ್ಥ ನೆರವೇರಿಸುವಂತೆ ಭಕ್ತಿಯಿಂದ ಪ್ರಾರ್ಥಿಸಿದರು.
ರಥೋತ್ಸವದ ಅಂಗವಾಗಿ ಕಾಮಧೇನು ಪ್ರಾಕಾರೋತ್ಸವ, ಚಂದ್ರ ಮಂಡಲೋತ್ಸವ, ಉಯ್ಯಾಲೋತ್ಸವ, ಗಜೇಂದ್ರ ಮೋಕ್ಷ, ಶೇಷವಾಹನ ಸೇವೆ, ಉಯ್ಯಾಲೋತ್ಸವ, ಗಿರಿಜಾ ಕಲ್ಯಾಣೋತ್ಸವ, ತಿರು ಕಲ್ಯಾಣೋತ್ಸವ ಮುಂತಾದ ವಿಶೇಷ ಪೂಜಾ ವಿಧಾನಗಳೊಂದಿಗೆ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ನಡೆಸಲಾಯಿತು.
ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕೋಸಂಬರಿ, ಪಾನಕ, ಮಜ್ಜಿಗೆ ವಿತರಣೆ ಮಾಡಲಾಯಿತು.
ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ತಂದು ರಥದಲ್ಲಿ ಕುಳ್ಳಿರಿಸಲಾಯಿತು. ಪುರಸಭಾ ಸದಸ್ಯ ಎಂ.ಸತೀಶ್ಕುಮಾರ್ ಪೂಜೆ ಸಲ್ಲಿಸಿದರು. ರೇಣುಕಾ ಎಲ್ಲಮ್ಮ ದೇವಿ ಕರಗದ ಪೂಜಾರಿ ಜೆ.ಎನ್.ಶ್ರೀನಿವಾಸ್ ರಥೋತ್ಸವಕ್ಕೆ ಪೂಜೆ ಸಲ್ಲಿಸಿದರು. ವೀರಗಾಸೆ ಕುಣಿತ ಗಮನ ಸೆಳೆಯುವಂತಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.