
ದೊಡ್ಡಬಳ್ಳಾಪುರ: ಒಂದು ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದಲ್ಲಿ ಅವರನ್ನು ಪಕ್ಷದ ಸ್ಥಳೀಯ ಮುಖಂಡರೇ ಸೋಲಿಸುತ್ತಾರೆ. ಅಂತಹ ಕಾಲೆಳೆಯುವ ಮುಖಂಡರು ಸ್ಥಳೀಯ ಜೆಡಿಎಸ್ನಲ್ಲಿದ್ದಾರೆ...
ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ನಡೆದ ಜೆಡಿಎಸ್ ಕೋರ್ ಕಮಿಟಿ ಮತ್ತು ಕಾರ್ಯಕರ್ತರ ಸಭೆಯಲ್ಲಿ ಸಕ್ಕರೆಗೊಲ್ಲಹಳ್ಳಿಯ ಜೆಡಿಎಸ್ ಕಾರ್ಯಕರ್ತ ವೆಂಕಟೇಶ್ ಎಂಬುವರು ರಾಜ್ಯ ಅಧ್ಯಕ್ಷ ಕೃಷ್ಣಾರೆಡ್ಡಿ ಎದುರು ಈ ರೀತಿ ಆಕ್ರೋಶ ಹೊರ ಹಾಕಿದರು.
ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಹೃದಯದಲ್ಲಿದ್ದಾರೆ. ಆದರೆ, ಸದಾ ಒಬ್ಬರ ಕಾಲು ಮತ್ತೊಬ್ಬರು ಎಳೆಯುವುದರಲ್ಲೇ ಮುಳುಗಿರುವ ಸ್ಥಳೀಯ ಜೆಡಿಎಸ್ ಮುಖಂಡರಿಂದಾಗಿ ಇಲ್ಲಿರುವವರೆಗೂ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ನೇರವಾಗಿ ಆರೋಪ ಮಾಡಿದರು.
‘ತಾಲ್ಲೂಕಿನ ಜೆಡಿಎಸ್ ಮುಖಂಡರಿಗೆ ಪಕ್ಷ ಅಧಿಕಾರಕ್ಕೆ ಬರುವುದಕ್ಕಿಂತಲೂ ಅವರ ಸ್ವಯಂ ಪ್ರತಿಷ್ಠೆ ಮುಖ್ಯವಾಗಿದೆ. ಪಕ್ಷವನ್ನು ಅಧಿಕಾರಕ್ಕೆ ಬರದಂತೆ ಸೋಲಿಸುತ್ತಿರುವುದು ಬೇರೆ ಯಾರೂ ಅಲ್ಲ. ನಮ್ಮ ಪಕ್ಷದ ಮುಖಂಡರೇ. ಇಂಥವರನ್ನು ಪಕ್ಷದಿಂದ ಹೊರಹಾಕುವವರೆಗೂ ಪಕ್ಷ ಉದ್ಧಾರ ಆಗುವುದಿಲ್ಲ’ ಎಂದರು.
‘ನಿಷ್ಠಾವಂತ ಸಾಮಾನ್ಯ ಕಾರ್ಯಕರ್ತರಿಗೆ ಇಲ್ಲಿಯವರೆಗೂ ಪಕ್ಷದಲ್ಲಿ ಒಂದೂ ಹುದ್ದೆ ನೀಡಿಲ್ಲ.ಸ್ಥಳೀಯ ಮುಖಂಡರ ವರ್ತನೆಯಿಂದ ಬೇಸರಗೊಂಡು ಪಕ್ಷದ ಶಾಲು ಕೆಳಗಿಟ್ಟು ಹೋಗುತ್ತಿದ್ದೇನೆ’ ಎಂದು ವೆಂಕಟೇಶ್ ಕಾರ್ಯಕರ್ತರ ಸಭೆಯಿಂದ ಹೊರನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.