ADVERTISEMENT

ಆರೋಗ್ಯದ ನಿರ್ಲಕ್ಷ್ಯ ಸಲ್ಲ: ಡಾ.ನರಸರೆಡ್ಡಿ

ದೇವನಹಳ್ಳಿ: ಪೌರ ಕಾರ್ಮಿಕರಿಗಾಗಿ ತಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 9:26 IST
Last Updated 23 ಏಪ್ರಿಲ್ 2020, 9:26 IST
ಆರೋಗ್ಯ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಗಣ್ಯರು ಉಪಸ್ಥಿತರಿದ್ದರು
ಆರೋಗ್ಯ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಗಣ್ಯರು ಉಪಸ್ಥಿತರಿದ್ದರು   

ದೇವನಹಳ್ಳಿ: ‘ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಬೇಡ’ ಎಂದು ನ್ಯೂ ಮಾನಸ ಸಮೂಹ ಆಸ್ಪತ್ರೆಗಳ ಆಡಳಿತ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ.ನರಸರೆಡ್ಡಿ ಹೇಳಿದರು.

ಇಲ್ಲಿನ ಲಯನ್ಸ್ ಸೇವಾಭವನದ ಸಭಾಂಗಣದಲ್ಲಿ ಮಾನಸ ಆಸ್ಪತ್ರೆ ಮತ್ತು ಲಯನ್ಸ್ ಸೇವಾ ಸಂಸ್ಥೆ ಸಹಭಾಗಿತ್ವದಲ್ಲಿ ನಡೆದ ಪುರಸಭೆ ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕೊರೊನಾ ಸೋಂಕು ಎಲ್ಲೆಡೆ ಸಾರ್ವಜನಿಕರಲ್ಲಿ ಭಯವನ್ನು ಸೃಷ್ಟಿಸುತ್ತಿದೆ. ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಂಜಾನೆ ಇಡಿ ನಗರದ ಬೀದಿ, ಚರಂಡಿಯನ್ನು ಸ್ವಚ್ಛ ಮಾಡುವುದು ಅಷ್ಟು ಸುಲಭವಲ್ಲ. ದುರ್ವಾಸನೆ ಸೊಳ್ಳೆಗಳ ಉಪಟಳದ ನಡುವೆ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಕಾಲದಲ್ಲಿ ಕರ್ತವ್ಯ ನಿರ್ವಹಿಸಿ ಕ್ರೋಡೀಕರಣಗೊಂಡ ಕಸದ ತ್ಯಾಜ್ಯವನ್ನು ರವಾನಿಸುವುದು ಸವಾಲಿನ ಕೆಲಸ. ಕೊರೊನಾ ಸೋಂಕು ಹರಡದಂತೆ ತಡೆಯುವುದರಲ್ಲಿ ಪೌರ ಕಾರ್ಮಿಕರ ಕರ್ತವ್ಯ ಶ್ಲಾಘನೀಯ’ ಎಂದು ಹೇಳಿದರು.

ADVERTISEMENT

ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ ಮಾತನಾಡಿ, ‘ಪುರಸಭೆ ವ್ಯಾಪ್ತಿಯಲ್ಲಿ ಈ ಹಿಂದೆ ಪೌರ ಕಾರ್ಮಿಕರ ಸಂಖ್ಯೆಗಿಂತ ಶೇ 50ರಷ್ಟು ಖಾಲಿಯಾಗಿದ್ದಾರೆ ಸ್ವಚ್ಛತೆ ಎಂಬುದು ಕಾರ್ಮಿಕರಿಗೆ ಸವಾಲಾಗಿದೆ. ರೋಗ ಬರುವುದಕ್ಕಿಂತ ರೋಗ ಬಾರದಂತೆ ಮೊದಲು ಎಚ್ಚೆತ್ತುಕೊಳ್ಳುವುದು ಅತಿ ಮುಖ್ಯ ಅನೇಕರು ಪೌರ ಕಾರ್ಮಿಕರನ್ನು ಕೀಳು ಭಾವನೆಯಿಂದ ಕಾಣುತ್ತಾರೆ. ತಮ್ಮ ಮನೆಯನ್ನು ಶುಚಿಗೊಳಿಸಲು ಹಿಂಜರಿಯುವ ಮಂದಿ ಪ್ರತಿಯೊಂದಕ್ಕೂ ಪೌರ ಕಾರ್ಮಿಕರನ್ನು ಅವಲಂಬಿಸುತ್ತಾರೆ. ಇಡೀ ನಗರದಲ್ಲಿ ಸ್ಯಾನಿಟೈಸರ್‌, ಮಾಸ್ಕ್ ಮತ್ತು ಕೊಳೆಗೇರಿ ಪ್ರದೇಶಗಳಲ್ಲಿ ಪ್ರತಿನಿತ್ಯ 1,200 ಲೀಟರ್ ಉಚಿತ ಹಾಲು ವಿತರಿಸಲಾಗುತ್ತಿದೆ ನಾಗರಿಕರು ಕಸ ತ್ಯಾಜ್ಯ ವಿಲೇವಾರಿ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಸಹಕರಿಸಬೇಕು ಎಂದು ಹೇಳೀದರು.

ಲಯನ್ಸ್ ಸಂಸ್ಥೆ ಅಧ್ಯಕ್ಷ ಶ್ರೀರಾಮಯ್ಯ, ಕಾರ್ಯದರ್ಶಿ ಮುನಿರಾಜು, ಸದಸ್ಯ ಸತೀಶ್, ಪುರಸಭೆ ಸದಸ್ಯ ಬಾಂಬೆ ನಾರಾಯಣಸ್ವಾಮಿ, ಮಾನಸ ಆಸ್ಪತ್ರೆ ಮತ್ತು ಪುರಸಭೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.