ಆನೇಕಲ್: ತಾಲ್ಲೂಕಿನ ಏಕೈಕ ನಗರಸಭೆ ಹೆಬ್ಬಗೋಡಿ ನಗರಸಭೆ ಅಧ್ಯಕ್ಷರಾಗಿ ಬಿಜೆಪಿ ಪ್ರಮೀಳಾ ರಾಮಚಂದ್ರ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್ನ ಸುಜಾತ.ಕೆ.ಪಿ.ರಾಜು ಚುನಾಯಿತರಾದರು.
ಹೆಬ್ಬಗೋಡಿ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪ್ರಮೀಳಾ ರಾಮಚಂದ್ರ ಮತ್ತು ತೇಜಸ್ವಿನಿ ದೀಪು ನಾಮಪತ್ರ ಸಲ್ಲಿಸಿದ್ದರು. ಪ್ರಮೀಳಾ ಅವರು 20 ಮತಗಳನ್ನು ಪಡೆದು ಅಧ್ಯಕ್ಷರಾದರು. ಇವರ ಪ್ರತಿಸ್ಪರ್ಧಿ ತೇಜಸ್ವಿನಿ ದೀಪು 12 ಮತಗಳನ್ನು ಪಡೆದರು.
ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ನ ಸುಜಾತ.ಕೆ.ಪಿ.ರಾಜು ಮತ್ತು ಕಾಂಗ್ರೆಸ್ನ ಜ್ಯೋತಿ ಕೃಷ್ಣ ನಾಮಪತ್ರ ಸಲ್ಲಿಸಿದ್ದರು. ಸುಜಾತ 20 ಮತಗಳನ್ನು ಪಡೆದು ಉಪಾಧ್ಯಕ್ಷರಾದರು. ಜ್ಯೋತಿ ಅವರು 12 ಮತ ಪಡೆದರು.
31 ಸದಸ್ಯ ಬಲದ ಹೆಬ್ಬಗೋಡಿಯಲ್ಲಿ ಒಬ್ಬರು ಸದಸ್ಯರು ಮೃತಪಟ್ಟಿದ್ದರು. 30 ಮಂದಿ ಸದಸ್ಯರು ಮತ ಚಲಾಯಿಸಿದ್ದರು. ಬಿಜೆಪಿ 15, ಜೆಡಿಎಸ್ 3 ಮತ್ತು ಕಾಂಗ್ರೆಸ್ 12 ಸದಸ್ಯರನ್ನು ಹೊಂದಿದ್ದರು. ಸಂಸದ ಡಾ.ಸಿ.ಎನ್.ಮಂಜುನಾಥ್ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿದ್ದರಿಂದ ಮೈತ್ರಿಗೆ ಗೆಲುವಾಯಿತು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.ರಾಮಮೂರ್ತಿ, ಬಿಜೆಪಿ ಮಂಡಳ ಅಧ್ಯಕ್ಷರಾದ ಬಿ.ಬಿ.ಐ.ಮುನಿರೆಡ್ಡಿ, ರಾಜಶೇಖರರೆಡ್ಡಿ ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.