ದೇವನಹಳ್ಳಿ : ಕೊಯಿರಾ ಗ್ರಾಮದಲ್ಲಿ ಹೋಂ ಕ್ವಾರಂಟೈನ್ನಲ್ಲಿ ಇರುವವರಿಂದ ಗ್ರಾಮಸ್ಥರಿಗೆ ಆತಂಕದ ವಾತಾವರಣ ಸೃಷ್ಟಿಯಾಗಿದೆ.ಕಳೆದ ನಾಲ್ಕೈದು ದಿನಗಳಿಂದ ಮನಗೊಂಡನಹಳ್ಳಿ ಮತ್ತು ಕೊಯಿರಾ ಗ್ರಾಮದಲ್ಲಿ ತಮ್ಮ ಸಂಬಂಧಿಕರ ಮನೆಗೆ ಬಂದಿರುವವರು ತಪಾಸಣೆಗೆ ಒಳಪಟ್ಟು ಇಲ್ಲಿಯೇ ಉಳಿದಿದ್ದಾರೆ. ಇವರನ್ನು ಹೊರಹಾಕಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಸ್ಥಳೀಯ ಗ್ರಾಮದ ಚಿಕ್ಕೇಗೌಡ ಮಾತನಾಡಿ ಗೌರಿಬಿದನೂರು, ಬೆಂಗಳೂರು ಮತ್ತು ರಾಮನಗರದಿಂದ ಒಟ್ಟು 14 ಮಂದಿ ಮನಗೊಂಡನಹಳ್ಳಿ ಮತ್ತು ಕೊಯಿರಾ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ಉಳಿದಿದ್ದಾರೆ. ಟಾಸ್ಕ್ ಪೊರ್ಸ್, ಗ್ರಾಮ ಸಮಿತಿ ನೋಡಲ್ ಅಧಿಕಾರಿ ಮತ್ತು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಕರ್ತವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಸರ್ಕಾರದ ಆದೇಶ ಉಲ್ಲಂಘಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಶೈಲಾ ಜಗದೀಶ್ ಮಾತನಾಡಿ, ಕೊರೊನಾದ ಬಗ್ಗೆ ಜಾಗೃತಿ ಮೂಡಿಸಿ ಎಚ್ಚರಿಕೆ ವಹಿಸುವುದಂತೆ ಆನೇಕ ಬಾರಿ ಸೂಚಿಸಿದರೂ ನಿರ್ಲಕ್ಷ್ಯ ವಹಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ ಔಷಧಿ ಸಿಂಪಡಣೆಗೆ ಮುಂದಾಗಿಲ್ಲ ಎಂದು ದೂರಿದರು.
ಹೆಚ್ಚುವರಿಜಿಲ್ಲಾಧಿಕಾರಿ ಜಗದೀಶ್.ಕೆ ನಾಯ್ಕ ಪ್ರತಿಕ್ರಿಯಿಸಿ, ಯಾರೇ ಆದರೂ ಮನೆಯಿಂದ ಹೊರಬರುವಂತಿಲ್ಲ.ಲಾಕ್ ಡೌನ್ ಲೆಕ್ಕಿಸದೆ ಹೊರಬಂದರೆ ಕಾನೂನು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಕೊಯಿರಾ ಆರೋಗ್ಯ ಕೇಂದ್ರದ ಪ್ರಸನ್ನ ಕುಮಾರ್ ಮಾತನಾಡಿ, ‘14ಮಂದಿ ಎರಡು ಗ್ರಾಮದಲ್ಲಿ ಇದ್ದು ಈಗ ಪರೀಕ್ಷೆ ನಡೆಸಲಾಗಿದೆ. ಗೌರಿಬಿದನೂರು ಕಡೆಯಿಂದ ಬಂದಿರುವ ನಾಲ್ಕು ಮಂದಿ ಸಿಕ್ಕಿಲ್ಲ. 10 ಜನರನ್ನು ತಪಾಸಣೆ ನಡೆಸಲಾಗಿ ಈಗಾಗಲೇ 4 ಮಂದಿಗೆ ಹೋಂ ಕ್ವಾರಂಟೈನ್ ಅಡಿ ಮುದ್ರೆ ಹಾಕಲಾಗಿದೆ’ ಎಂದು ಹೇಳಿದರು.
ತಹಶೀಲ್ದಾರ್ ಆದೇಶದ ಮೇರೆಗೆ ಇರಿಸಲಾಗಿದೆ. ಆತಂಕ ಪಡುವ ಅಗತ್ಯವಿಲ್ಲ ಎಂದು ಪಿಡಿಒ ಮಲ್ಲೇಶ
ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.