ಸೂಲಿಬೆಲೆ(ಹೊಸಕೋಟೆ): ತಾಲ್ಲೂಕಿನಲ್ಲಿ ನಡೆಯುತ್ತಿರುವ ಶೈಕ್ಷಣಿಕ–ಆರ್ಥಿಕ ಸಮೀಕ್ಷೆ ಶೇ 75ರಷ್ಟು ಪೂರ್ಣಗೊಂಡಿದೆ ಎಂದು ತಹಶೀಲ್ದಾರ್ ಸೋಮಶೇಖರ್ ತಿಳಿಸಿದರು.
ಸೂಲಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 5 ನೇ ವಾರ್ಡಿನಲ್ಲಿ ಸಮೀಕ್ಷೆ ತಿರಸ್ಕರಿಸಿದ್ದವರ ಮನೆಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿ, ತಾಲ್ಲೂಕಿನಲ್ಲಿ ಸಮೀಕ್ಷೆಯಲ್ಲಿ ತೊಡಗಿರುವ ಶಿಕ್ಷಕರು ಮತ್ತು ಇತರೆ ಇಲಾಖಾಧಿಕಾರಿಗಳು ಮಳೆಯನ್ನು ಲೆಕ್ಕಿಸದೆ ಸಮೀಕ್ಷೆಯಲ್ಲಿ ಪ್ರಗತಿ ಸಾಧಿಸಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 1.23 ಲಕ್ಷ ಮನೆಗಳನ್ನು ಸಮೀಕ್ಷೆಗೆ ನಿಗದಿಪಡಿಸಲಾಗಿತು. ಇದುವರೆಗೆ 85 ಸಾವಿರ ಮನೆಗಳ ಸಮೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದರು.
ಸಮೀಕ್ಷೆಯ ಮೇಲ್ವಿಚಾರಕ ವೆಂಕಟೇಶ್, ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ಯಾವುದು ಇಲ್ಲದವರನ್ನು ಸಮೀಕ್ಷೆಯಲ್ಲಿ ಮರುಪರಿಶೀಲನೆ ಮಾಡಿ ಸಮೀಕ್ಷೆಗೆ ಅವರನ್ನು ಪರಿಗಣಿಸಲಾಗುವುದು ಎಂದರು.
ಮನೆಗೆ ಬೀಗ ಹಾಕಿದ್ದರೆ, ವಲಸೆ ಹೋಗಿದ್ದರೆ, ಮನೆ ಖಾಲಿ ಇದ್ದರೆ, ಇಲ್ಲವೇ ಸಮೀಕ್ಷೆಯಲ್ಲಿ ಭಾಗವಹಿಸಲು ಇಷ್ಟಪಡದಿರುವ ಕಾರಣಗಳಿಂದ ಸಮೀಕ್ಷೆ ವಿಳಂಬವಾಗುತ್ತದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ, ತಾಲ್ಲೂಕು ಸಮೀಕ್ಷೆ ನೋಡಲ್ ಅಧಿಕಾರಿ ವಿನೋಧ ಮುಗುಳಿ, ಸಮೀಕ್ಷೆಯ ಶಿಕ್ಷಕರಾದ ಸೌಮ್ಯ, ರಾಧಿಕಾ, ಲಕ್ಷ್ಮಮ್ಮ, ಮಂಜುಳಾ, ವಿಜಯಕುಮಾರ್, ಎಸ್.ಸಿ.ರವಿಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.