
ಹೊಸಕೋಟೆ: ನಗರದ ಅವಿಮುಕ್ತೇಶ್ವರ ದೇವಾಲಯದ ಜಾತ್ರೆ ಮಹೋತ್ಸವ ಸಮೀಪಿಸುತ್ತಿರುವ ತೇರು ನಿರ್ಮಾಣ ಸಿದ್ಧತೆ ಸಭೆ ಹಾಗೂ ಸಾರ್ವಜನಿಕ ಅಹವಾಲು ಸಭೆ ನಡೆಯಿತು.
ವಿಶ್ವಕರ್ಮ ಕರಕುಶಲ ಶಿಲ್ಪ ಕಲಾ ಕೇಂದ್ರದ ಸಹಯೋಗದಲ್ಲಿ ನಡೆದ ಸಭೆಯಲ್ಲಿ ಜನಪ್ರತಿನಿಧಿಗಳು, ವಿಶ್ವಕರ್ಮ ಮುಖಂಡರು, ಹಿರಿಯರು ಮತ್ತು ಯಜಮಾನರು ಭಾಗವಹಿಸಿದ್ದರು.
ರಥ ನಿರ್ಮಾಣಕ್ಕೆ ಬೇಕಾದ ಅರ್ಧದಷ್ಟು ಟೀಕ್ ಮರವನ್ನು ಉದ್ಯಮಿ ಬಿ.ವಿ. ಭೈರೇಗೌಡ ಈಗಾಗಲೇ ನೀಡಿದ್ದು, ಉಳಿದ ಟೀಕ್ ಹುಣಸೂರಿನಲ್ಲಿದ್ದು ಅಲ್ಲೇ ಎರಡು ಅಂಕಣದಲ್ಲಿ ರಥದ ಕಾಯಂ ಅಳವಡಿಕೆ ಮತ್ತು ಚಕ್ರದ ಕೆಲಸ ನಡೆಯುತ್ತಿದೆ. ಉಳಿದಂತೆ ಅಂಕಣದ ಮೇಲೆ ಬೊಂಬು ಜೋಡಿಸುವುದನ್ನು ಮಾತ್ರ ಹೊಸಕೋಟೆಗೆ ತಂದು ಮಾಡಲಾಗುವುದು. ರಥದ ನಿರ್ಮಾಣಕ್ಕೆ ಸುಮಾರು ₹75 ಲಕ್ಷ ವೆಚ್ಚ ಆಗಬಹುದೆಂದು ಅಂದಾಜಿಸಲಾಗಿದೆ ಎಂದು ವಿಶ್ವಕರ್ಮ ಸಮಾಜದ ಮುಖಂಡರು ಸಭೆಗೆ ತಿಳಿಸಿದರು.
ಉಡುಪಿಯ ರಾಜಗೋಪಾಲಚಾರಿ ಹೊಸ ತೇರು ನಿರ್ಮಾಣದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದು, ವಾಸ್ತುಬದ್ದ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ. ರಥವು 43 ಅಡಿ ಎತ್ತರ, ಚಕ್ರಗಳ ಎತ್ತರ 8 ಅಡಿಯಷ್ಟಿರಬೇಕೆಂದು ತಿರ್ಮಾನಿಸಲಾಗಿದೆ. ಶಾಸಕರ ಮನವಿಯಂತೆ ರಥದ ಎತ್ತರ 50 ಅಡಿ ಇರುವಂತೆ ಶಾಸ್ತ್ರಬದ್ದವಾಗಿ ವಿಚಾರಿಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖಂಡರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.