ಪ್ರಜಾವಾಣಿ ವಾರ್ತೆ
ಹೊಸಕೋಟೆ: ತಾಲ್ಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಮುತ್ಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೂರು ಗ್ರಾಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಅಧ್ಯಕ್ಷತೆಯಲ್ಲಿ ಪರಿಶಿಷ್ಟರ ಕುಂದು ಕೊರತೆ ಸಭೆ ನಡೆಯಿತು.
ಸಭೆಯಲ್ಲಿ ನಿವೇಶನ ಹಕ್ಕುಪತ್ರ ಕುರಿತು ಚರ್ಚೆ ನಡೆಯಿತು. ಕೆಲ ವರ್ಷಗಳ ಹಿಂದೆ ಸರ್ಕಾರದಿಂದ ಗ್ರಾಮಸ್ಥರಿಗೆ ಖಾಲಿ ನಿವೇಶನ ಹಕ್ಕು ಪತ್ರ ನೀಡಿದ್ದು, ಆ ಜಾಗದಲ್ಲಿ ಗ್ರಾಮಸ್ಥರು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಇದೀಗ ಖಾಸಗಿ ವ್ಯಕ್ತಿಯೊಬ್ಬ ಈ ಜಾಗದ ಮಾಲಿಕತ್ವದ ತಕರಾರು ತೆಗೆದಿದ್ದಾರೆ. ಮನೆ ತೆರವು ಮಾಡಿವಂತೆ ಒತ್ತಾಯ ಮಾಡುತ್ತಿದ್ದಾರೆ. ಇದಕ್ಕೆ ಒಂದು ಪರಿಹಾರ ನೀಡಬೇಕು ಎಂದು ಶಾಸಕರಲ್ಲಿ ಗ್ರಾಮಸ್ಥರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಶರತ್ ಬಚ್ಚೇಗೌಡ, ‘ಕಂದಾಯ ಅಧಿಕಾರಿಗಳಿಂದ ಸಮಸ್ಯೆ ಕುರಿತು ಮಾಹಿತಿ ಪಡೆದಿದ್ದೇನೆ. ಎ.ಸಿ ಅವರೊಂದಿಗೆ ಸಭೆ ನೆಡೆಸಿ, ತೀರ್ಮಾನ ಕೈಗೊಳ್ಳಲಾಗುವುದು. ಆದಷ್ಟು ಬೇಗ ಸಮಸ್ಯೆ ಇತ್ಯರ್ಥಪಡಿಸಿಕೊಡಲಾವುದು ಎಂದರು.
‘ಗ್ರಾಮದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಬೇಕು ಎಂಬ ಮನವಿ ಬಂದಿದೆ. ಬಸವ ವಸತಿ ಯೋಜನೆ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ ನಿವೇಶನ ನೀಡುವ ಪ್ರಸ್ತಾವನೆ ಇದೆ. ಕಂದಾಯ ಇಲಾಖೆಯ ಅಧಿಕಾರಿಗಳು ಈ ಬಾಗದಲ್ಲಿ ಸರ್ಕಾರಿ ಜಮೀನು ಗುರುತಿಸಲು ಸೂಚಿಸಿದ್ದೇವೆ. ಆ ನಂತರ ಗ್ರಾಮ ಪಂಚಾಯತಿಯಿಂದ ಆರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ನೀಡುವ ಭರವಸೆ ನೀಡಿದರು.
ತಾ.ಪಂ ಇಒ ಸಿ.ಎನ್.ನಾರಾಯಣಸ್ವಾಮಿ, ಕಂದಾಯಾಧಿಕಾರಿ ಪ್ರಕಾಶ್, ಗ್ರಾಮ ಲೆಕ್ಕಿಗ ಮುರಳಿ ರಾಮಲಿಂಗ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.