ಆನೇಕಲ್: ಕೊರೊನಾ ಸೋಂಕಿತರಿಗೆ ನೀಡುವ ರೆಮ್ಡಿಸಿವಿರ್ ಚುಚ್ಚುಮದ್ದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಆನೇಕಲ್ ತಾಲ್ಲೂಕಿನ ಜಿಗಣಿಯ ಸುಹಾಸ್ ಆಸ್ಪತ್ರೆಯ ವೈದ್ಯ ಮತ್ತು ಸಿಬ್ಬಂದಿಯೊಬ್ಬರನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ.
ಸುಹಾಸ್ ಆಸ್ಪತ್ರೆಯ ವೈದ್ಯ ಅರ್ಮಾನ್ ಅಲಿ ಮತ್ತು ರೆಸೆಪ್ಷಿನಿಸ್ಟ್ ರಕ್ಷಿತ್ ಆರೋಪಿಗಳು. ಆರೋಪಿಗಳು ರೆಮ್ಡಿಸಿವಿರ್ ಚುಚ್ಚುಮದ್ದನ್ನು ಶಾಂತಿನಗರದಿಂದ ತರಿಸಿಕೊಡಲಾಗುವುದು. ಒಂದು ಚುಚ್ಚುಮದ್ದಿಗೆ ₹15 ಸಾವಿರ ಎಂದು ತಿಳಿಸಿದ್ದರು. ಈ ಬಗ್ಗೆ ಡಿವೈಎಸ್ಪಿ ಡಾ.ಎಚ್.ಎಂ.ಮಹದೇವಪ್ಪ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಹೆಬ್ಬಗೋಡಿ ಪೊಲೀಸ್ ಇನ್ಸ್ಪೆಕ್ಟರ್ ಗೌತಮ್, ಬನ್ನೇರುಘಟ್ಟ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಗೋವಿಂದ್, ಜಿಗಣಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಶಿವಲಿಂಗನಾಯಕ್ ನೇತೃತ್ವದಲ್ಲಿ ಪೊಲೀಸರು ನಾಗರಿಕರಂತೆ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ರೆಮ್ಡಿಸಿವಿರ್ ಔಷಧಿಯನ್ನು ಶಾಂತಿನಗರದಿಂದ ತರಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ. ಅದರಂತೆ ಪೊಲೀಸರು ವ್ಯಾಪಾರ ಕುದುರಿಸಿ ವ್ಯವಹರಿಸುವ ಸಂದರ್ಭದಲ್ಲಿಯೇ ದಾಳಿ ನಡೆಸಿ ಬಂಧಿಸಿದ್ದಾರೆ.
ರೋಗಿಗಳ ಹೆಸರಿನಲ್ಲಿ ಸರ್ಕಾರದಿಂದ ರಿಯಾಯಿತಿ ದರದಲ್ಲಿ ರೆಮ್ಡಿಸಿವಿರ್ ಚುಚ್ಚುಮದ್ದನ್ನು ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಸಾಧ್ಯತೆಯಿದೆ. ಹಾಗಾಗಿ ಡ್ರಗ್ ಕಂಟ್ರೋಲ್ ಅವರಿಗೆ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ಚುಚ್ಚುಮದ್ದಿನ ಬ್ಯಾಚ್ ಮತ್ತಿತರ ಮಾಹಿತಿಗಳನ್ನು ಪರಿಶೀಲಿಸಿ ಇದು ಎಲ್ಲಿಗೆ ಸರಬರಾಜಾಗಿತ್ತು ಎಂಬುದನ್ನು ಖಚಿತಪಡಿಸಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.