ದೊಡ್ಡಬಳ್ಳಾಪುರ:ರಾಜ್ಯದಲ್ಲಿ ಬಿಜೆಪಿ ಸರ್ಕಾರ ತನ್ನ ರಾಜಕೀಯ ಉದ್ದೇಶದ ಈಡೇರಿಕೆಗಾಗಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆ. ಗೋ ಸಂಪತ್ತನ್ನು ಉಳಿಸಿಕೊಳ್ಳುವ ಯಾವುದೇ ಆಶಯ ಇದರಲ್ಲಿ ಇಲ್ಲ ಎಂದು ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣ ಭೈರೇಗೌಡ ಟೀಕಿಸಿದರು.
ತಾಲ್ಲೂಕಿನ ಮೆಣಸಿ ಕಾಲೊನಿಯಲ್ಲಿ ಬುಧವಾರ ನಿರ್ಮಾಣ ಮಾಡಲಾಗಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಗೋಹತ್ಯೆ ನಿಷೇಧ ಕಾಯ್ದೆಯು ಹೈನುಗಾರಿಕೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಗ್ರಾಮೀಣರ ಬದುಕು ಹೈನುಗಾರಿಕೆ ಮೇಲೆ ಅವಲಂಬಿತವಾಗಿದೆ. ಸಹಕಾರ ತತ್ವದ ಆಧಾರದ ಮೇಲೆ ನಡೆಯುತ್ತಿರುವ ಹಾಲು ಉತ್ಪಾದಕರ ಸಂಘಗಳು ಬಾಗಿಲು ಮುಚ್ಚುವ ಸ್ಥಿತಿಗೆ ಬರಲಿವೆ ಎಂದರು.
ಗೋಹತ್ಯೆ ನಿಷೇಧ ಕಾಯ್ದೆಯ ಹಿಂದೆ ಜನರನ್ನು ಹೊಡೆದು ಆಳುವ ನೀತಿ ಎದ್ದು ಕಾಣುತ್ತಿದೆ. ರೈತರ ಬಗ್ಗೆ, ಗೋವುಗಳ ಬಗ್ಗೆ ಕಾಳಜಿ ಇದ್ದರೆ ಪ್ರತಿ ಹೋಬಳಿ, ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಗೋಶಾಲೆಗಳನ್ನು ತೆರೆಯಬೇಕು. ರೈತರಿಗೆ ಬೇಡವಾದ ಜಾನುವಾರುಗಳನ್ನು ಸರ್ಕಾರವೇ ಖರೀದಿಸಿ ಗೋಶಾಲೆಗಳಲ್ಲಿ ಸಾಕಾಣಿಕೆ ಮಾಡಲಿ. ಈ ಮೂಲಕ ರೈತರ ನೆರವಿಗೆ ಬರುವುದಕ್ಕೆ ಸಹಕಾರ ನೀಡುತ್ತೇವೆ ಎಂದು ಹೇಳಿದರು.
ಸದ್ಯಕ್ಕೆ ಹಸುಗಳನ್ನು ಸಾಕಿ ಹಾಲು ಮಾರಾಟ ಮಾಡಿ ರೈತರು ಜೀವನ ನಡೆಸುತ್ತಿದ್ದಾರೆ. ಗೋಹತ್ಯೆ ಕಾನೂನಿನ ವಿರುದ್ಧ ರೈತರು ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದರು.
ಬಮೂಲ್ ವ್ಯವಸ್ಥಾಪಕ ಡಾ.ಕೆ. ಸ್ವಾಮಿ, ಟಿಎಪಿಎಂಸಿಎಸ್ ಅಧ್ಯಕ್ಷ ಸಿದ್ದರಾಮಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯೆ ಶಿವಮ್ಮ, ಎಪಿಎಂಸಿ ಅಧ್ಯಕ್ಷ ವಿಶ್ವನಾಥರೆಡ್ಡಿ, ಅಪ್ಪಕಾರನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ರಾಮಕಣ್ಣ, ದೊಡ್ಡಬಳ್ಳಾಪುರ ಬಮೂಲ್ ಕಚೇರಿ ಉಪ ವ್ಯವಸ್ಥಾಪಕ ಡಾ.ಗೋಪಾಲಕೃಷ್ಣ, ವೀರಶೈವ ಲಿಂಗಾಯತ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪುಟ್ಟಬಸವರಾಜು, ಮುಖಂಡರಾದ ತಿ. ರಂಗರಾಜು, ಎಂ. ಬೈರೇಗೌಡ, ಚನ್ನೇಗೌಡ, ರಾಮಕೃಷ್ಣ, ಕೆಂಪಣ್ಣ, ಶಿವಣ್ಣ, ಟಿ.ವಿ. ರುದ್ರಪ್ಪ, ಹರೀಶ್, ಅಶ್ವತ್ಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.