ವಿಜಯಪುರ: ಮಕ್ಕಳಿಗೆ ಕುಡಿಯಲು ನೀರಿಲ್ಲ.. ಫಿಲ್ಟರ್ ಇಲ್ಲ..ಶೌಚಾಲಯವಿಲ್ಲ.. ಒಂದೇ ಕೊಠಡಿಯಲ್ಲೇಪಾಠ..ಅದೇ ಕೊಠಡಿಯಲ್ಲೇ ಊಟ..ಇದು ಅಂಗನವಾಡಿ ಮಕ್ಕಳ ಪರಿಸ್ಥಿತಿ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮೂಲ ಸೌಕರ್ಯದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಪೋಷಕರು ದೂರಿದ್ದಾರೆ.
ಇಲ್ಲಿನ 23ನೇ ವಾರ್ಡಿನ ರಹಮತ್ ನಗರದ ಅಂಗನವಾಡಿ ಕೇಂದ್ರದಲ್ಲಿ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕೊಠಡಿಯಲ್ಲೇ ಅಡುಗೆ ತಯಾರು ಮಾಡಲಾಗುತ್ತಿದೆ.
ಕೇಂದ್ರದ ಎದುರಿಗೆ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಆದರೆ, ಮೇಲ್ಛಾವಣಿ ಅಳವಡಿಸಿಲ್ಲ. ಮಳೆ ಬಿದ್ದಾಗ ಶೇಖರಣೆಯಾಗುವ ಮಳೆ ನೀರಿನಿಂದಾಗಿ ಸೊಳ್ಳೆ ವೃದ್ಧಿಯಾಗುತ್ತಿದೆ. ಅಂಗನವಾಡಿ ಕೇಂದ್ರದ ಕಿಟಕಿ ಕೆಳಗೆ ಇರುವುದರಿಂದ ಹಾವುಗಳು ನುಸುಳುತ್ತಿವೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕಿಟಕಿಗಳಿಗೆ ಮೆಸ್ ಅಳವಡಿಸಿಕೊಡುವಂತೆ ಪುರಸಭೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಗಮನಹರಿಸಿಲ್ಲ. ಸ್ಥಳೀಯ ಪುರಸಭಾ ಸದಸ್ಯರ ಗಮನಕ್ಕೆ ತಂದರೆ, ‘ಇಷ್ಟು ವರ್ಷಗಳ ಕಾಲ ಹೇಗೆ ನಿರ್ವಹಣೆ ಮಾಡಿಕೊಂಡು ಬಂದಿದ್ದೀರೋ ಈಗಲೂ ಹಾಗೇ ಮಾಡಿಕೊಂಡು ಹೋಗಿ ಎನ್ನುತ್ತಾರೆ’ ಎಂದು ಅಂಗನವಾಡಿ ಕಾರ್ಯಕರ್ತೆ ಅಳಲು ತೋಡಿಕೊಂಡರು.
ಸರ್ಕಾರದ ಮೇಲುಸ್ತುವಾರಿ ಸಮಿತಿ ಸದಸ್ಯ ಮ್ಯಾಥ್ಯೂ ಮುನಿಯಪ್ಪ ಮಾತನಾಡಿ, ಅಂಗನವಾಡಿ ಕೇಂದ್ರದ ಸಮೀಪದ ಚರಂಡಿಯಲ್ಲಿ ಕಸ ಹಾಕಲಾಗುತ್ತಿದೆ. ಇದರಿಂದ ಬರುತ್ತಿರುವ ದುರ್ನಾತದಿಂದಾಗಿ ಮಕ್ಕಳ ಆರೋಗ್ಯ ಹದಗೆಡುತ್ತಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.