ದೇವನಹಳ್ಳಿ: ‘ಇಲ್ಲಿನ ಹಲವೆಡೆ ಮಣ್ಣಿನಲ್ಲಿ ಹುದುಗಿರುವ ಶಿಲಾ ಶಾಸನಗಳನ್ನು ಉತ್ಖನನ ಮಾಡಲಾಗುತ್ತಿದೆ. ಇವುಗಳು ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಹವು. ಪುರಾತತ್ವ ಇಲಾಖೆ ಈ ಬಗ್ಗೆ ಗಮನಹರಿಸಿ ಪ್ರೋತ್ಸಾಹಿಸಬೇಕು’ ಎಂದು ಇತಿಹಾಸ ಕುರುಹು ಪತ್ತೆ ಕಾರ್ಯದಲ್ಲಿ ನಿರತರಾಗಿರುವ ನಿವೃತ್ತ ಶಿಕ್ಷಕ ಬಿ.ಜಿ.ಗುರುಸಿದ್ದಪ್ಪ ಹೇಳಿದರು.
ಇಲ್ಲಿನ ಕಾರಹಳ್ಳಿ ಗ್ರಾಮದ ಬಳಿ ಆರು ವೀರಗಲ್ಲುಗಳು ಬೆಳಕಿಗೆ ಬಂದಿದ್ದು ಈ ಕುರಿತು ಅವರು ಮಾತನಾಡಿದರು.
‘ಕಾರಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಅನೇಕ ಪಾಳು ಬಿದ್ದ ದೇವಾಲಯ ಮತ್ತು ಮಂಟಪಗಳಿವೆ. ರೈತರ ಜಮೀನಿನಲ್ಲಿ ವೀರಗಲ್ಲು ಮತ್ತು ಮಾಸ್ತಿಗಲ್ಲುಗಳಿವೆ. ಕಲ್ಲಿನ ಮೇಲೆ ತಮಿಳು ಲಿಪಿಯ ಶಾಸನವಿದೆ. ಗಂಗರು, ಬಾಣರು ಆಳಿದ ಕುರುಹುಗಳು ‘ತುರುಗೊಳ್’ ಶಾಸನದಲ್ಲಿ ಉಲ್ಲೇಖವಾಗಿರುವುದು ಪುರಾತತ್ವ ಇಲಾಖೆಯಲ್ಲಿ ನಮೂದಾಗಿದೆ. ಕಲ್ಲಿನ ಮೇಲೆ ಕೆತ್ತಲಾಗಿರುವ ಶಾಸನವನ್ನು ಓದಲು ಇತಿಹಾಸ ತಜ್ಞಲಿಪಿ ಓದುಗರಿಂದ ಮಾತ್ರ ಸಾಧ್ಯವಿದೆ’ ಎಂದು ತಿಳಿಸಿದರು.
‘ಪರಂಪರೆ, ಕಲೆ, ಸಂಸ್ಕೃತಿ, ಜೀವನ ಶೈಲಿ, ಆಡಳಿತ ನಡೆಸಿದ ಮಾಹಿತಿಯನ್ನು ಈ ಶಾಸನಗಳು ತಿಳಿಸುತ್ತವೆ. ಇದರ ಬಗ್ಗೆ ಅರಿವು ಮೂಡಿಸಿ ಸಂರಕ್ಷಿಸುವ ಕೆಲಸ ಪುರಾತತ್ವ ಇಲಾಖೆ ಅಧಿಕಾರಿಗಳು ಹಾಗೂ ತಜ್ಞ ಇತಿಹಾಸಕಾರರು ಮಾಡಬೇಕು. 500 ವರ್ಷಗಳಿಂದ ಎರಡು ಸಾವಿರದ ಎರಡು ವರ್ಷಗಳ ವರೆಗಿನ ಕಲ್ಲಿನ ಶಾಸನಗಳಿವೆ. ಪಲ್ಲವರು, ಚೋಳರು, ಕದಂಬರು ಆಳಿದ ಆನೇಕ ಕುರುಹುಗಳಿವೆ. ಇದಕ್ಕೆ ಅನೇಕ ದೇವಾಲಯಗಳು ಸಾಕ್ಷಿಯಾಗಿವೆ’ ಎಂದು ಹೇಳಿದರು.
‘ಕೆಲವು ದೇವಾಲಯಗಳ ಬಗ್ಗೆ ಮಾಹಿತಿ ಇಲ್ಲ. ಶಿವ, ವಿಷ್ಣು, ಸಪ್ತ ಮಾತೃಕೆಯರ ದೇವಾಲಯ, ಕಲ್ಲಿನ ಶಾಸನ, ವೀರಗಲ್ಲು ನಿಧಿ ಆಸೆಗೆ ಬಲಿಯಾಗಿವೆ. ಇತಿಹಾಸ ಮರೆತರೆ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ತಾಲ್ಲೂಕಿನಲ್ಲಿ ಪ್ರಸ್ಥುತ 87 ಕ್ಕೂ ಹೆಚ್ಚು ವೀರಗಲ್ಲುಗಳು ಮತ್ತು 18 ಕಲ್ಲಿನ ಶಾಸನ ಪತ್ತೆ ಹೆಚ್ಚಲಾಗಿದೆ. ಭವಿಷ್ಯದ ದೃಷ್ಠಿಯಿಂದ ಈ ಶಾಸನಗಳ ಬಗ್ಗೆ ಮಾಹಿತಿ ಪಡೆದು ಇತಿಹಾಸ ತಜ್ಞರು ಇಂದಿನ ಯುವ ಸಮುದಾಯಕ್ಕೆ’ ತಿಳಿಸಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.