ADVERTISEMENT

ಮೊಬೈಲ್ ವ್ಯಸನ ಬಿಟ್ಟು ಪುಸ್ತಕಕ್ಕೆ ಹತ್ತಿರವಾಗಿ: ನ್ಯಾಯಾಧೀಶ ಅರುಣ್ ಕುಮಾರ್

ಕಣ್ಣು ತಪಾಸಣೆ ಶಿಬಿರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 5:56 IST
Last Updated 24 ಫೆಬ್ರುವರಿ 2026, 5:56 IST
ಹೊಸಕೋಟೆಯಲ್ಲಿ ಎಚ್‌ಜೆಎಸ್ಎಸ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಜಾಗೃತಿ ಸಮಿತಿ, ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ, ಬೆಂಗಳೂರು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಸಹಯೋಗದಲ್ಲಿ ಉಚಿತ ಕಣ್ಣು ತಪಾಸಣಾ ಶಿಬಿರ  ಹಮ್ಮಿಕೊಳ್ಳಲಾಗಿತ್ತು
ಹೊಸಕೋಟೆಯಲ್ಲಿ ಎಚ್‌ಜೆಎಸ್ಎಸ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಜಾಗೃತಿ ಸಮಿತಿ, ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ, ಬೆಂಗಳೂರು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಸಹಯೋಗದಲ್ಲಿ ಉಚಿತ ಕಣ್ಣು ತಪಾಸಣಾ ಶಿಬಿರ  ಹಮ್ಮಿಕೊಳ್ಳಲಾಗಿತ್ತು   

ಹೊಸಕೋಟೆ: ಮನುಷ್ಯನಿಗೆ ಕಣ್ಣು ಪ್ರಕೃತಿ ವಿಸ್ಮಯಗಳಲ್ಲಿ ಒಂದಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಮೊಬೈಲ್ ಮತ್ತಿತರ ವ್ಯಸನಗಳಿಗೆ ಬಲಿಯಾಗಿ ಶಾಶ್ವತ ಅಂಧತ್ವದಂತಹ ಗಂಭೀರ ಪರಿಣಾಮಗಳಿಗೆ ತುತ್ತಾಗುತ್ತಿದ್ದಾರೆ ಎಂದು ತಾಲ್ಲೂಕು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್ ಜಿ.ಹೇಳಿದರು.

ನಗರದ ಎಚ್‌ಜೆಎಸ್ಎಸ್ ಕಲ್ಯಾಣ ಮಂಟಪದಲ್ಲಿ ರಾಜ್ಯ ಮಾನವ ಹಕ್ಕುಗಳ ಜಾಗೃತಿ ಸಮಿತಿ, ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ, ಬೆಂಗಳೂರು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನ ದೇಹದ ಸೂಕ್ಷ್ಮ ಮತ್ತು ಪಂಚೇಂದ್ರಿಯಗಳಲ್ಲಿ ಕಣ್ಣಿಗಿರುವ ಸ್ಥಾನ ಎಂತಹದ್ದು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಕಣ್ಣುಗಳು ಇಲ್ಲವೆಂದರೆ ದೈನಂದಿನ ಚಟುವಟಿಕೆ ನಡೆಸಲು ದುಸಾಧ್ಯವಾಗುತ್ತದೆ. ಇಂತಹ ಸೂಕ್ಷ್ಮ ಅಂಗಾಂಗ ಮನುಷ್ಯ ಮೊಬೈಲ್ ವ್ಯಸನದಿಂದ ದೃಷ್ಟಿಹೀನನಾಗುತ್ತಿದ್ದಾನೆ. ಯುವ ಪೀಳಿಗೆ ಮೊಬೈಲ್ ಬಿಟ್ಟು ಪುಸ್ತಕದ ಕಡೆ ಗಮನ ಕೊಟ್ಟಿಲ್ಲ ಎಂದರೆ ಮುಂದಿನ ಉಜ್ವಲ ಭವಿಷ್ಯಕ್ಕೆ ತನ್ನ ಕೈಯ್ಯಾರೆ ಕೊಳ್ಳಿ ಇಟ್ಟುಕೊಳ್ಳುವ ಪರಿಸ್ಥಿತಿ ತಂದೊಡ್ಡಿಕೊಳ್ಳಬೇಕಾಗುತ್ತದೆ ಎಂದರು.

ADVERTISEMENT

ರಾಜ್ಯ ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯ ಘಟಕ ಅಧ್ಯಕ್ಷ ಬಿ.ಟಿ ವಿಶ್ವನಾಥ್ ಮಾತನಾಡಿ, ಸಾರ್ವಜನಿಕರು ಇಂತಹ ಶಿಬಿರ ಸದುಪಯೋಗಪಡಿಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣೆ ಮತ್ತು ಚಿಕಿತ್ಸೆ ಪಡೆದುಕೊಳ್ಳಬೇಕೆಂದರೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಿದೆ. ಅಂತಹದ್ದರಲ್ಲಿ ಉಚಿತ ಶಿಬಿರಗಳಿಗೆ ಜನ ಸಂಕುಚಿತ ಮನಸ್ಥಿತಿ ಬಿಟ್ಟು ಮುಂದೆ ಬರಬೇಕು ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಜಾಗೃತಿ ಸಮಿತಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳಾ, ತಾಲ್ಲೂಕು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಅಂಬು ಸೆಲ್ವಂ, ರಾಘವೇಂದ್ರ, ಮಂಜುನಾಥಸ್ವಾಮಿ, ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜಿನ ಪ್ರೊ.ಅಶ್ವಥ್ ನಾರಾಯಣ್, ರವಿ, ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶಿವಕುಮಾರ್ ಆರಾಧ್ಯ, ರತ್ನಮ್ಮ, ವರಲಕ್ಷ್ಮಿ, ಶಿವಕುಮಾರ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.